ಸ್ವಲ್ಪವೂ ಮಾನವೀಯತೆ ಕಲಿಯದೆ ಎಂ.ಎ.,ಪಿಎಚ್ ಡಿ ಮಾಡಿ ಏನು ಬಂತು? ಧಿಕ್ಕಾರ ನಮ್ಮ ಈ ತರಹದ ಯುವಜನಾಂಗಕ್ಕೆ!!!ಮುಂದಕ್ಕೆ. ..
ಛೇ.... ಹೇಗೆ ಕಳೆದುಬಿಟ್ಟೆ ಇಷ್ಟು ದಿನ. ಯಾರ್ಯಾರಿಗೆ ಏನು ಅಂದಿದ್ದೆನೋ... ಅವರು ಎಷ್ಟು ನೊಂದುಕೊಂಡಿದ್ದರೋ.. ಎಲ್ಲಿ ಹೋಗಿತ್ತು ನನ್ನ ಬುದ್ಧಿ ಎಲ್ಲಾ? ಇಷ್ಟೆಲ್ಲ ಓದಿದ್ದು ದಂಡ.. 16 ವರ್ಷ ತುಂಬುತ್ತೆ ನಾಡಿದ್ದು ಆಗಸ್ಟ್ಗೆ... ಇನ್ನೂ ಅವಿವೇಕಿಯಂತೆ ವರ್ತಿಸುತ್ತಿದ್ದೇನೆ..
ನಾನು ಯಾಕೆ ಹಾಗೆ ಮಾಡಿದೆ? ನನಗೆ ಗೊತ್ತಿರಲಿಲ್ವಾ, ಅಂಥ ವಿಷಯಗಳನ್ನ ಎಲ್ಲರ ಎದುರು ಹೇಳಿದರೆ ಕುಮ್ಮಿ ಏನು ಅಂದುಕೊಳ್ಳಬಹುದು ಅಂತ. ಅದು ಕುಮ್ಮಿಯ ವೈಯಕ್ತಿಕ ವಿಷಯ. ಗೆಳತಿ ಎನ್ನುವ ನಂಬಿಕೆಯಿಂದ ನನ್ನೊಂದಿಗೆ ಹಂಚಿಕೊಂಡ ವಿಷಯ... ಆದರೂ ಬಾಯಿ ಜಾರಿಬಿಟ್ಟೆ.. ಆ ಬೊಂಬಾಯಿ ಬಜಾರಿ ಜಯ ಹತ್ತಿರ ಹೇಳಿಬಿಟ್ಟೆ! ಈಗ ಪಶ್ಚಾತ್ತಾಪ. ಏನು ಮಾಡಬೇಕು ಅಂತಾನೇ ಗೊತಾಗ್ತಿಲ್ಲ...
ಎಷ್ಟು ಫ್ರೆಂಡ್ಸ್ ಇದ್ರೂ ಫ್ರೆಂಡ್ಶಿಪ್ನಲ್ಲಿ ಮಾತ್ರ ಸೀರಿಯಸ್ ಆಗೇ ಇರಲಿಲ್ಲ ನಾನು. ಇಷ್ಟು ಆದ್ರೂ ಅಂದ್ರೆ ಸಕತ್ ಮಾತಾಡೋದು, ಇಲ್ಲ ಅಂದ್ರೆ ಬಿಟ್ಟು ನಡೆಯೋದು. ಮತ್ತೊಬ್ಬರ ಬಗ್ಗೆ ಸ್ವಲ್ಪವೂ ಚಿಂತಿಸುತ್ತಿರಲಿಲ್ಲ. ಫ್ರೆಂಡ್ಶಿಪ್ಪು, ಅದನ್ನು ನಿಭಾಯಿಸೋದು... ಅದೆಲ್ಲ ನನಗೆ ಗೊತ್ತಿರಲಿಲ್ಲ; ಈ ಘಟನೆ ನಡೆಯುವವರೆಗೂ.
ಕುಮ್ಮಿ ಯಾವಾಗಲೂ ಹೇಳ್ತಾ ಇದ್ಲು, 'ಮೂಲೆಯಲ್ಲಿ ಕೂರೋ ಮಂಜ ಯಾವಾಗ್ಲೂ ನನ್ನ ನೋಡ್ತಾನೆ ಅಂತ. ನಾನೂ ಎರಡು ದಿನ ಗಮನಿಸಿದೆ. ಹೌದು! ಮಂಜನ ಕಣ್ಣಲ್ಲಿ ಕುಮ್ಮಿಯಡೆಗೆ ಅದೇನೋ ಪ್ರೀತಿ ಇತ್ತು, ಸೆಳೆತವಿತ್ತು. ಕುಮ್ಮಿಗೆ ಇದೆಲ್ಲ ಇಷ್ಟವಿರಲಿಲ್ಲ. ಅವಳಿಗೆ ತಾನಾಯಿತು ಫ್ರೆಂಡ್ಸ್....
ತನ್ನ ಓದಾಯಿತು. ಆದರೆ ಕುಮ್ಮಿ ಕಡೆಗೆ ಮಂಜ ನೋಡುವುದನ್ನು ಅವರಿಬ್ಬರಿಗೂ ಗೊತ್ತಾಗದಂತೆ ನೋಡುತ್ತಿದ್ದೆ. ನನಗೆ ಈ ವಿಷಯ ಬಹಳ ಆಸಕ್ತಿಕರವಾಗಿತ್ತು. ಬಹಳ ಮೋಜೆನಿಸುತ್ತಿತ್ತು. ಆದರೆ ಕುಮ್ಮಿಗೆ ಇದರಿಂದ ಎಷ್ಟು tension ಆಗಿತ್ತು ಅಂತ ನನ್ನ ತಲೆಗೆ ಹೊಳೆಯಲೇ ಇಲ್ಲ! ಅವಳ ನೋವನ್ನು, ಮುಜುಗರವನ್ನು ಅರ್ಥಮಾಡಿಕೊಳ್ಳಲೇ ಇಲ್ಲ.ಪಾಪ ಎಷ್ಟು ಬೇಜಾರು ಮಾಡ್ಕೊಂಡ್ಲೋ...
ಇವತ್ತು ಸಂಜೆ ಕುಮ್ಮಿ ನಾನು ವಾಕಿಂಗ್ ಹೋಗಿದ್ವಿ. ಏನೋ ಹೇಳಬೇಕೆಂದು ಪ್ರಯತ್ನಿಸುತ್ತಿದ್ದಳು. ಆದರೆ ನನ್ನ ವಟಗುಟ್ಟುವಿಕೆಯ ನಡುವೆ ಅವಳಿಗೆ ಆ ಗಂಭೀರ ವಿಷಯ ತೆಗೆಯಲು ಆಗಲಿಲ್ಲವೆನಿಸುತ್ತದೆ. ನನ್ನ ಯಾವುದೋ ವಿಷಯ ತುಂಡರಿಸಿ ಒಮ್ಮೆಲೆ 'ಸುಮಿ ಯಾಕೆ ಹೀಗೆ ಮಾಡಿದೆ ಎಂದಳು. ಅವಳ ಮಾತಲ್ಲಿ ಸಿಟ್ಟಿಗಿಂತ ನೋವೇ ತುಂಬಿತ್ತು, ಅಲ್ಲಿಯವರೆಗೆ ಅವಳು ಕಷ್ಟಪಟ್ಟು ಹಿಡಿದುಕೊಂಡಿದ್ದ ಕಣ್ಣೀರು ಒಮ್ಮೆಲೇ ಭೋರ್ಗರೆದಿತ್ತು, ನನಗೆ ಎಲ್ಲ ಅಯೋಮಯ. ಏನೂ ಮಾತನಾಡಲು ತೋಚಲಿಲ್ಲ.
"ಯಾಕೆ ಆ ಜಯನಿಗೆ ಮಂಜನ ಸುದ್ದಿ ಹೇಳಿದೆ? ಕಾಲೇಜ್ ತುಂಬ ಸುದ್ದಿ ಮಾಡಿದಾಳೆ ಗೊತ್ತಾ. ನನಗೆ ಎಷ್ಟು ಹಿಂಸೆ ಆಗ್ತಿದೆ... ನನಗೆ ಕಿವಿ ಎಲ್ಲ ಬಿಸಿಯಾದ ಅನುಭವ.. ಎಂಥ ತಪ್ಪು ಮಾಡಿದೆ! ಗೆಳತಿಯ ಗುಟ್ಟೊಂದನ್ನು ಬಯಲು ಮಾಡಿ ಅವಳಿಗೆ ಅವಮಾನವಾಗುವಂತೆ ನಡೆದುಕೊಂಡಿದ್ದೆ..
ಒಂದೂ ಮಾತನಾಡಲಿಲ್ಲ ನಾನು.. ಏನು ಉಳಿದಿತ್ತು ಮಾತನಾಡಲು ನನ್ನ ಹತ್ತಿರ? ತಪ್ಪಾಯಿತು ಎನ್ನಲಾ? ಅವಳಿಗೆ ಆದ ಅವಮಾನ, ಆ ಯಾತನೆಯ ಎದುರು ಅದು ತೀರಾ ಸಣ್ಣ ಶಬ್ದ. ಈಗ ಜನರ ಬಾಯಿ ಮುಚ್ಚಿಸಲು ಸಾಧ್ಯನಾ? ಅದೂ ನನ್ನ ಕೈಮೀರಿ ಹೋಗಿತ್ತು. ಸುಮ್ಮನೆ ವಾಪಸ್ ಬಂದಿದ್ದೆ.
ತಪ್ಪಾಯಿತು ಕುಮ್ಮಿ. ಇನ್ನೆಂದೂ ನಿನ್ನ ಬಿಟ್ಟುಕೊಡಲ್ಲ ಕಣೆ. ಇವತ್ತು ನಿನ್ನಿಂದ ದೊಡ್ಡ ಪಾಠ ಕಲಿತೆ... ಯಾವತ್ತಿಗೂ ಮರೆಯಲಾಗದ ಪಾಠ. ಈ ಡೈರಿಯಂತೆ ಗೆಳೆತನವೂ ಕೂಡಾ.. ಮನಸಿನ ಪಿಸುಮಾತುಗಳನ್ನು ಹೇಳಿಕೊಳ್ಳುವ ಅತೀ ಆಪ್ತ, ರಹಸ್ಯವಾದ ಪುಟ್ಟ ಜಾಗ...
ಪ್ಲೀಸ್ ಇದೊಂದು ಸಾರಿ ನನ್ನ ನಂಬು... ಫ್ರೆಂಡ್ಶಿಪ್ ಅಂದ್ರೆ ಹೇಗಿರತ್ತೆ ಅಂತ ಜನ ನಮ್ಮ ನೋಡಿ ಕಲೀಬೇಕು ಹಾಗೆ ನಿಭಾಯಿಸ್ತೀನಿ... ಯಾವತ್ತೂ ಈ ಬಾಯಿ ಇನ್ನು ಗುಟ್ಟು ಬಿಟ್ಟುಕೊಡಲ್ಲ....