Friday, December 24, 2010

ಮಾನಸಿಕ ಅವಲಂಬನೆ

ಭಾರತಿ... ನಿಜಕ್ಕೂ ಅವಳು ಅವಳ ರೂಪದಂತೆ ಸುಂದರ ಮನಸಿನ ಹುಡುಗಿ. ಪ್ರಭಾವಿ ಶ್ರೀಮಂತರ ಮನೆಯ ಒಬ್ಬಳೇ ಮಗಳು. ಸ್ವಲ್ಪವೂ ಸೊಕ್ಕಿಲ್ಲ. ಶಾಂತ ಸ್ವಭಾವ. ಅನವಶ್ಯಕವಾಗಿ ಯಾರನ್ನೂ ಜರೆದವಳಲ್ಲ. ಆದರೆ ಒದಿಬ್ಬರನ್ನು ಬಿಟ್ಟರೆ ಮತ್ತ್ಯಾರ ಜೊತೆಗೂ ಬೆರೆಯುವುದಿಲ್ಲ. ಉಳಿದ ಹುಡುಗಿಯರು ಅವಳನ್ನು ಒಬ್ಬ ವಿಐಪಿ ಎಂದು ಪರಿಗಣಿಸಿ ದೂರವೆ ಇರಿಸಿಬಿಟ್ಟಿದ್ದರು. ಮಾತಾನಾಡುವಾಗಲೂ ಅಷ್ಟೆ, ಅಳೆದು ತೂಗಿ ಮಿತಿ ಮೀರದ ಮಾತುಗಳು. ಅಭ್ಯಾಸದಲ್ಲೂ
ಮುಂದು.

ನಾನು ಕಾಲೇಜಿಗೆ ಸೇರಿದ ಹೊಸದರಲ್ಲಿ ಅವಳಿಗೆ ನಾನು ಜೋರಾಗಿ ನಗುವುದು, ಗೆಳತಿಯರೊಂದಿಗೆ ಸೇರಿ ಕ್ಲಾಸಿನಲ್ಲಿ ಗಲಾಟೆ ಮಾಡುವುದು ಎಲ್ಲ ಸಹ್ಯವಾಗುತ್ತಿರಲಿಲ್ಲ. ಆದರೆ ಸುಮಾರು ಮೂರು ತಿಂಗಳ ಹಿಂದೆ, ಮಧ್ಯಾಹ್ನದ ಬ್ರೇಕ್ ಟೈಮಿನಲ್ಲಿ ಭಾರತಿ ಬಹಳ ಸಪ್ಪೆ ಮೋರೆ ಮಾಡಿಕೊಂಡು ಅವಳಷ್ಟಕ್ಕೆ ಅವಳು ಮೂಲೆ ಬೆಂಚು ಏರಿ ಕುಳಿತಿದ್ದಳು. ಭಾರತಿಗೆ ಮನೆಯಲ್ಲಿ ಅಪ್ಪ ಅಮ್ಮನ ಜೊತೆ ಅಷ್ಟು ಸಲುಗೆಯಿರಲಿಲ್ಲ. ಒಡನಾಡಲು ಜೊತೆಗೆ ಹುಟ್ಟಿದವರಾರೂ ಇಲ್ಲ. ಹೇಳಿಕೊಳ್ಳುವಂತಹ ಆಪ್ತ ಸ್ನೇಹಿತರೂ ಇಲ್ಲ. ಯಾಕೋ.. ನನಗೆ ಅವಳನ್ನು ನೋಡಿ ಪಾಪ ಎನ್ನಿಸಿತು. "ಏನಾಯ್ತೆ ಭಾರತಿ ಎಂದು ಆಪ್ತತೆಯಿಂದ ಕೇಳುತ್ತ ಪಕ್ಕದಲ್ಲಿ ಹೋಗಿ ಕುಳಿತೆ.

ನಮಗೆ ಅಂತಹ ಬಾಂಧವ್ಯವೇನೂ ಇರಲಿಲ್ಲ. ಆದರೆ ಅವಳಿಗೆ ಆ ಸಮಯಕ್ಕೆ ಹೇಳಿಕೊಳ್ಳಲು ಯಾರಾದರೂ ಬೇಕಾಗಿತ್ತೇನೋ.. ಅಳುತ್ತ ಅವಳ ಮನೆ ಬಗ್ಗೆ, ತನ್ನ ಒಂಟಿತನದ ಬಗ್ಗೆ ಹೇಳಿಕೊಂಡಳು, " ನೋಡು ಭಾರತಿ, ಅಪ್ಪ-ಅಮ್ಮನಿಗೆ ನಿನ್ನ ಜೊತೆ ಕಳೆಯಲು ಟೈಮೇ ಇಲ್ಲ ಎಂದು ಕೊರಗುತ್ತೀಯಾ. ಆದರೆ ನೋಡು, ನಮ್ಮ ಕ್ಲಾಸಿನ ಶ್ವೇತಾಗೆ ಅಪ್ಪ ಅಮ್ಮನೇ ಇಲ್ಲ ಹೀಗೆ ನನಗೆ ತೋಚಿದಂತೆ ಸಮಾಧಾನ ಮಾಡಿದೆ.

ಈ ಘಟನೆ ನಡೆದ ಮೇಲೆ ತೀರ ಎನ್ನುವಷ್ಟು ನನ್ನನ್ನು ಹಚ್ಚಿಕೊಂಡಳು. ಎಲ್ಲದಕ್ಕೂ ನನ್ನ ಸಲಹೆ ಕೇಳುತ್ತಾಳೆ. ಸ್ವಲ್ಪ ಬ್ರೇಕ್ ಸಿಕ್ಕರೂ ಸಾಕು. ಪಕ್ಕದಲ್ಲಿ ಬಂದು ಕುಳಿತುಬಿಡುತ್ತಾಳೆ.

ಬಹಳ ಆಶ್ಚರ್ಯವಾಗುತ್ತದೆ. ಒಂದು ಚಿಕ್ಕ ಸಮಾಧಾನ ಇಷ್ಟೆಲ್ಲ ಮಾಡುತ್ತದೆಯಾ?! ಇದೇನೆ ಇದ್ದರೂ ಭಾರತಿಯ ಅತಿಯಾದ ಅವಲಂಬನೆ ನನಗೆ ಒಂಥರಾ ಉಸಿರು ಕಟ್ಟಿಸುತ್ತದೆ. ಚಿಕ್ಕಪುಟ್ಟ, ಅತೀ ಪರ್ಸನಲ್ ವಿಷ್ಯಗಳಿಗೆ ನನ್ನ ಸಲಹೆ ಬೇಕು ಎನ್ನುವ ಅವಳ ರೀತಿ ಮುಜುಗರ ಉಂಟುಮಾಡುತ್ತದೆ. ಯಾವುದೇ ಕಾರಣಕ್ಕೂ ಅವಳು ನನ್ನನ್ನು ವಿಮರ್ಶೆ ಮಾಡುವುದೇ ಇಲ್ಲ. ನಾನು ಹೇಳಿದ್ದೆಲ್ಲ ವೇದವಾಕ್ಯಎಂಬಂತೆ ಆಡುತ್ತಾಳೆ. ಇದೆಲ್ಲ ನನಗೆ ಸ್ವಲ್ಪವೂ ಇಷ್ಟವಾಗುತ್ತಿಲ್ಲ.

ಇದನ್ನೆ ನೇರವಾಗಿ ಹೇಳಿದರೆ "ನೀನು ನನ್ನ ಬಿಟ್ಟು ಹೋಗುತ್ತೀಯಾ" ಅಂತ ಅಳುತ್ತಾಳೆ. ಈಗೀಗಂತೂ ಅವಳು ಬಂದಳು ಎಂದರೆ ಎಲ್ಲಾದರೂ ಹೋಗಿ ಅಡಗಿಕೊಳ್ಳಬೇಕು ಎನಿಸುತ್ತದೆ. ಉದ್ದೇಶಪೂರ್ವಕವಾಗಿ ಅವಳಕಣ್ಣುತಪ್ಪಿಸಿದರೆ "ನನ್ನನ್ನು ಅವಾಯ್ಡ್ ಮಾಡುತ್ತೀಯಾ" ಎಂದು ಬೇಸರಿಸಿಕೊಳ್ಳುತ್ತಾಳೆ.

ಖಂಡಿತವಾಗಿಯೂ ಅವಳಿಗೆ ಬೇಜಾರು ಮಾಡಲು ನನಗೆ ಇಷ್ಟವಿಲ್ಲ. ಆದರೆ ಅವಳನ್ನು ಸಹಿಸಿಕೊಳ್ಳುವುದೂ ಕಷ್ಟ. ಹಾಗಾದರೆ ಅವಳ ಈ ಡಿಪೆಂಡೆನ್ಸಿ ತಪ್ಪಾ? ಅಥವಾ ಅವಳನ್ನು ಸಹಿಸಿಕೊಳ್ಳಲಾಗದಿರುವುದು ನನ್ನದೇ ತಪ್ಪಾ?

ಕುಮ್ಮಿ ನಾನು ಒಳ್ಳೆಯ ಗೆಳತಿಯರು. ಪರ್ಸನಲ್ ವಿಷ್ಯಗಳನ್ನು ಹಂಚಿಕೊಳ್ಳುತ್ತೇವೆ. ಆದರೆ ಯಾವತ್ತೂ ನನಗೆ ಅವಳು 'ಭಾರ' ಅನ್ನಿಸಿದ್ದೇ ಇಲ್ಲ. ಆದರೆ ಭಾರತಿ ವಿಷಯದಲ್ಲಿ ಮಾತ್ರ ಯಾಕೆ ಹೀಗನಿಸುತ್ತದೆ?

ಕುಮ್ಮಿ ಕೆಲವೊಮ್ಮೆ ಕೇಳುತ್ತಾಳೆ, "ಯಾಕೆ ಅವಳಿಗೆ ಆ ತರ ಮಾಡುತ್ತೀಯಾ? ಪಾಪ." ಎಂದು ನನಗೇ ಬೈಯುತ್ತಾಳೆ. ನನಗೂ ಇದೆಲ್ಲ ಹೊಸದು...

Saturday, November 20, 2010

ಇವತ್ತು ಒಂದು ಹಿಂದಿ ವಾಕ್ಯ ಓದಿದೆ.

'ಅಗರ್ ತುಮ್ಹೆ ಪ್ಯಾರ್ ಕರ್‌ನೆ ಕೇ ಲಿಯೆ ವಕ್ತ್ ಕಮ್ ಪಡತೆ ಹೈ ತೊ, ಉಸೆ ನಫರತ್ ಕರನೆ ಮೆ ಕ್ಯೂ ಬರ್‌ಬಾದ್ ಕರ್‌ತೆ ಹೊ?' (ನಿನಗೆ ಪ್ರೀತಿ ಮಾಡಲು ಸಮಯವೇ ಇಲ್ಲವೆಂದಾದರೆ, ಅದನ್ನು ದ್ವೇಷ ಮಾಡಲು ಯಾಕೆ ಹಾಳು ಮಾಡುತ್ತೀಯಾ?) ಓದಿದಾಗಲಿಂದ ಯಾಕೋ ಬಹಳ ನನ್ನನ್ನು ಕಾಡುತ್ತಿದೆ..

ಬಹುಶಃ ಮುಂದೊಂದು ದಿನ ಈ ಡೈರಿಯನ್ನು ತೆರೆದು ಓದಿದರೆ ಮನುಷ್ಯರ ವಿರುದ್ಧ ದೂರಿನ ಒಂದು ದೊಡ್ಡ ಪಟ್ಟಿಯಂತೆ ಇರುತ್ತದೆಯೆನೋ! ಅಷ್ಟು ವಕ್ರಗಳನ್ನು ಕಾಣುತ್ತಿದ್ದೇನೆ ಈ ಮಾನವರಲ್ಲಿ. ಮನದಲ್ಲಿ ದಯೆ, ಪ್ರೀತಿ, ಮಮತೆಗಳಂತಹ ಉನ್ನತ ಗುಣಗಳನ್ನು ಸೃಷ್ಟಿಸಿದ ದೇವರು ಈ ಅಸೂಯೆ, ದ್ವೇಷ, ಹಿಂಸೆ, ಸ್ವಾರ್ಥಗಳನ್ನು ಏಕೆ ಇರಿಸಿದನೋ...

ದ್ವೇಷ ಅಸೂಯೆಗಳೂ ಒಮ್ಮೊಮ್ಮೆ ಒಳ್ಳೆಯದೇನೋ, ಆದರೆ ಇವುಗಳೇ ಉತ್ತಮ ಗುಣಗಳನ್ನು ನುಂಗಿ ಹಾಕುತ್ತವಲ್ಲ? ಇದು ಯಾಕೆ? ಪ್ರೀತಿ ಮಾಡಲು ಯಾರಿಗೂ ಸಮಯವಿಲ್ಲ. ಅದೇ ಏನಾದ್ರೂ ಜಗಳ, ದ್ವೇಷ ಮಾಡುವುದಿದ್ದರೆ ಎಲ್ಲರೂ ಒಂದಾಗಿಬಿಡುತ್ತಾರೆ! ಏನು ಕೂಗಾಟ, ಏನು ಪ್ರತಿಭಟನೆ...

ಇತಿಹಾಸ, ಮತ, ತತ್ವ, ಧರ್ಮ ಎಲ್ಲದರಲ್ಲೂ ಗೊಂದಲ. ದೇವರಿದ್ದಾನೆಯೋ ಇಲ್ಲವೋ, ನಂಬಿಕೆ ದೊಡ್ಡದೋ-ವಿಜ್ಞಾನವೋ, ಅಯೋಧ್ಯೆಯಲ್ಲಿ ಬಾಬ್ರಿ ಮಸೀದಿ ಇರಬೇಕೋ-ರಾಮ ಮಂದಿರವಿರಬೇಕೋ,ಬಸವಣ್ಣ ಯಾವ ಜಾತಿಯವನು, ಟಿಪ್ಪು ದೇಶಪ್ರೇಮಿಯೋ-ದ್ರೋಹಿಯೋ, ಮೊಘಲರು ಹಿಂದೂ ದೇವಾಲಯಗಳನ್ನು ಒಡೆದರೋ- ಇಲ್ಲವೊ..

ಯಾವನೋ ಒಬ್ಬ ಬುದ್ಧಿಜೀವಿ ಅನ್ನಿಸಿ(ಅಂದು)ಕೊಂಡವನು ತನ್ನ ವಿಚಾರ ಮಂಡಿಸುತ್ತಾನೆ. ಅವನದೊಂದು ಪಂಗಡ. ಅವನ ವಿರುದ್ಧ ವಿಚಾರದವನದೊಂದು ಪಂಗಡ. ಎಲ್ಲರಿಗೂ ತಮ್ಮ ವಾದವೇ ಸರಿ, ಕೊನೆ. ಅವರವರ ದೃಷ್ಟಿಯಲ್ಲಿ ಅವರವರ ವಿಚಾರ ಸರಿ. ಆದರೆ ಅದನ್ನು ಎಲ್ಲರೂ ಒಪ್ಪಲೇಬೇಕು ಎನ್ನುವ ಮನೋಭಾವ ಯಾಕೆ? ನಾನ್‌ಸೆನ್ಸ್!! ಯಾರ ಉದ್ಧಾರಕ್ಕಾಗಿ ಇವೆಲ್ಲ? ಈ ವಾದಗಳು ಹೊಟ್ಟೆತುಂಬಿಸುತ್ತವಾ? ಒಂದು ವೇಳೆ ದೇವರಿದ್ದಾನೆ ಎಂದು ಎಲ್ಲರೂ ಒಪ್ಪಿಕೊಂಡರೆ ದೇವರು ಬಂದು ಈ ಬಡತನ-ಕಷ್ಟಗಳನ್ನು ದೂರ ಮಾಡಿಬಿಡುತ್ತಾನಾ? ನಂಬಿಕೆಯೇ ದೊಡ್ಡದೆಂದು ಸಾಬೀತಾದರೆ ವಿಜ್ಞಾನದ ಬೆಳವಣಿಗೆ ನಿಂತು ಬಿಡುತ್ತದೆಯೆ?

ಬಸವಣ್ಣ ಕೆಳ ವರ್ಗದವನು ಎನ್ನುವುದೇ ಸತ್ಯವಾದರೆ ಅವನ ವಿಚಾರಗಳೂ ಕೀಳಾಗಿಬಿಡುತ್ತದೆಯೆ? ಮೊಘಲರು ಹಿಂದೂ ದೇವಾಲಯಗಳನ್ನು ಕೆಡವಿದ್ದುಹೌದಾದರೆ ಮೊಘಲರು ಮತ್ತೆ ಬಂದು ಆ ದೇವಾಲಯಗಳನ್ನು ಕಟ್ಟಿಕೊಡಲು ಸಾಧ್ಯವೇ? ಅಯೋಧ್ಯೆಯಲ್ಲಿ ಮಸೀದಿ ಮಂದಿರ ಎರಡನ್ನೂ ಕಟ್ಟಲು ಸಾಧ್ಯವಿಲ್ಲವೆ. ಬಸವಣ್ಣನ ಜಾತಿಯಾವುದಾದರೇನು ಅವರ ಉನ್ನತ ವಿಚಾರಗಳನ್ನು ಜಾತಿ ಮಂಕು ಮಾಡಲು ಸಾಧ್ಯವಿಲ್ಲ. ಯಾರು ಕೆಡವಿದರು ಯಾರು ಕಟ್ಟಿದರು ಎಂದು ಚರ್ಚಿಸುವುದಕ್ಕಿಂತ ನಮ್ಮ ಶ್ರೇಷ್ಠ ಸಂಸ್ಕೃತಿ ವಿಚಾರಗಳನ್ನು ಉಳಿಸಿ ಬೆಳೆಸಿಕೊಳ್ಳಲು ಪ್ರಯತ್ನಿಸುವುದು ಒಳ್ಳೆಯದು.

ಯಾರೂ ದ್ವೇಷವನ್ನು ಬಯಸುವುದಿಲ್ಲ. ಎಲ್ಲರಿಗೂ ಪ್ರೀತಿ, ಶಾಂತಿ ಬೇಕು. ಆದರೆ ಕೇವಲ ’ಬೇಕು ಎಂದರೆ ಆಯಿತೆ, ತನ್ನಿಂದಲೂ ಅದನ್ನು ಬೇರೆಯವರು ಬಯಸುತ್ತಾರೆಎನ್ನುವುದನ್ನು ಮರೆತುಬಿಡುತ್ತಾರೆ... ಹೌದು, ನಾನು ಇನ್ನೂ ಪ್ರಪಂಚವನ್ನು ಸರಿಯಾಗಿ ನೋಡಿಲ್ಲ. ಜೀವನಕ್ಕೆ ನೇರ ಮುಖಾಮುಖಿಯಾಗಿಲ್ಲ. ಚಿಂತನೆ ನಡೆಸುವಷ್ಟು ಅನುಭವಿಯೂ ನಾನಲ್ಲ. ಪರಿಸ್ಥಿತಿಗಳು ನನ್ನನ್ನು ಬದಲಿಸಬಹುದು. ಆದರೆ ಈ ಕ್ಷಣಕ್ಕೆ ನನಗೆ ಇದೇ ಸತ್ಯ, ಈ ವಿಚಾರವೇ ಸರಿ. ಖಂಡಿತ ಈ ವಿಚಾರಗಳನ್ನು ಯಾರೂ ಒಪ್ಪಬೇಕಾಗಿಲ್ಲ.

Saturday, October 2, 2010

ಸ್ವಾತಂತ್ರ್ಯ ಎಂದರೆ..?

ಪ್ರೈಮರಿ ಸ್ಕೂಲಿಗೆ ಹೋಗುವಾಗ ಹೋಮ್‌ವರ್ಕ್ ಭಾರದಿಂದ ಬಸವಳಿದು ಹೋಗುತ್ತಿದ್ದೆ. ಬೆಳಗಿನಿಂದ ಸಂಜೆಯವರೆಗೆ ನಾಲ್ಕು ಗೋಡೆಯ ನಡುವೆ ಕೂರಿಸಿಕೊಂಡು, ಹೊಡೆದು, ಬಡಿದು ತಲೆಗೆ ತುಂಬುವುದಲ್ಲದೇ ಕೈ ನೋವು ಬರುವ? ಬರೆಯಲು ಬೇರೆ ಕೊಡುತ್ತಿದ್ದರು. ಬರೆಯದಿದ್ದರೆ ಅದಕ್ಕೆ ಶಿಕ್ಷೆ ಬೇರೆ. ಯಾವಾಗ ಈ ಹಿಂಸೆ ಮುಗಿಯುತ್ತದೋ ಅನಿಸುತ್ತಿತ್ತು.

ಯಾವಾಗಲೂ ಅಪ್ಪನನ್ನು 'ಯಾವಾಗ ಈ ಶಾಲೆ ಮುಗಿಯುತ್ತದೆ?' ಎಂದು ಕೇಳುತ್ತಿದ್ದೆ. ಆಗ ಅಪ್ಪ "10ನೇ ಕ್ಲಾಸ್ ತನಕ ಮಾತ್ರ. ಕಾಲೇಜಿನಲ್ಲಿ ಈ ಎಲ್ಲ ಗೋಳು ಇರುವುದಿಲ್ಲ. ಮೊದಲು ಚೆನ್ನಾಗಿ ಓದಿ ಎಸ್‌ಎಸ್‌ಎಲ್‌ಸಿ ಓದಿ ಮುಗಿಸು ಎಂದು
ಸಮಾಧಾನಪಡಿಸುತ್ತಿದ್ದರು.

ನಿಜ, ಈಗ ನನಗೆ ಹೋಮ್‌ವರ್ಕ್ ಮಾಡದಿದ್ದರೆ ಯಾರೂ ಬೈಯುವವರಿಲ್ಲ, ಹೊಡೆಯುವವರಿಲ್ಲ. ನೋಟ್ಸ್ ಕೊಡುತ್ತಾರೆ, ಹೋಮ್‌ವರ್ಕ್ ಕೂಡ ಕೊಡುತ್ತಾರೆ. ಬೇಕಾದವರು ಮಾಡಬಹುದು. ಇಲ್ಲದವರು ಇಲ್ಲ. ಮಾಡದಿದ್ದರೆ ಯಾಕೆ ಮಾಡಿಲ್ಲ

ಎಂದೂ ಕೇಳುವುದಿಲ್ಲ. ಫುಲ್ ಫ್ರೀ. ಈ ಸ್ವಾತಂತ್ರ್ಯವನ್ನು ಕಾಲೇಜಿಗೆ ಸೇರಿದ ಆರು ತಿಂಗಳು ಅನುಭವಿಸಿದೆ. ಈಗ ಅದರ ಪರಿಣಾಮ ಕಾಣಿಸುತ್ತಿದೆ. ಪ್ರಿಲ್ಮನರಿ ಪರೀಕ್ಷೆಗಳಲ್ಲಿ ಜಸ್ಟ್ ಪಾಸ್! ಇಷ್ಟು ಕಡಿಮೆ ಮಾರ್ಕ್ಸ್ ಯಾವತ್ತೂ ತೆಗೆದುಕೊಂಡವಳಲ್ಲ. ಅಪ್ಪ-ಅಮ್ಮನಿಗೆ ಏನುಹೇಳಲಿ? ಈಗ ಬಹಳ ಪಶ್ಚಾತ್ತಾಪವಾಗುತ್ತಿದೆ.

ಏನೇನು ಮಾಡಿದೆ ಈ ಆರು ತಿಂಗಳಲ್ಲಿ? ಫ್ರೆಂಡ್ಸ್,ಫಿಲ್ಮ್, ಹೊಟೇಲ್, ಪಿಕ್‌ನಿಕ್...ಇಷ್ಟೂ ನೆನಪಿಗೆ ಬರುತ್ತಿರುವುದು. ಸ್ಟಡಿಗೆ ಅಂತ ಕುಳಿತಿರುವುದು.. ಊಹುಂ, ನೆನಪಿಗೇ ಬರ್ತಾ ಇಲ್ಲ. 30 ಫಿಲ್ಮ್, ಎಂಟು ಹತ್ತು ಟ್ರಿಪ್, ಹೊಟೇಲ್‌ಗಳಿಗೆ ತಿರುಗಿದ್ದಂತೂ ಲೆಕ್ಕವೇ ಇಡಲು ಸಾಧ್ಯವಿಲ್ಲ. ವಾರಕ್ಕೆ ಒಂದು ಸಿನಿಮಾವನ್ನಾದರೂ ನೋಡಲೇ ಬೇಕು. ಒಳ್ಳೆಯದು ಬಂದರೆ ಎರಡು, ಮೂರು.. ಹೀಗೆ.

ಬೇಗನೆ ಕ್ಲಾಸು ಮುಗಿದರೆ ಸರಿ, ಇಲ್ಲದಿದ್ದರೆ ಕ್ಲಾಸ್ ಬಂಕ್. ನನ್ನ ಫ್ರೆಂಡ್ಸ್ ಮನೆಗಳ ಹತ್ತಿರ ಇರುವ ಯಾವ ಒಳ್ಳೆ ಸ್ಪಾಟ್‌ನ್ನೂ ಬಿಟ್ಟಿಲ್ಲ. ಹೊಟೇಲ್‌ಗಳಿಗೆ ಎಷ್ಟು ದುಡ್ಡು ಸುರಿದಿದ್ದೇವೋ.. ಅಪ್ಪ-ಅಮ್ಮ ಅಷ್ಟು ಓದು ಇಷ್ಟು ಓದು ಅಂತ ಯಾವತ್ತೂ ಒತ್ತಾಯ ಮಾಡಿದವರಲ್ಲ. ಈಗ ಕಡಿಮೆ ಮಾರ್ಕ್ಸ್ ಬಂದಿದೆ ಎಂದು ಬೈಯುವವರೂ ಅಲ್ಲ. ಆದರೂ.. ಏನೋ ಒಂಥರಾ.. ನನ್ನ ಕೆಲಸವನ್ನು ಸರಿಯಾಗಿ ಮಾಡಿಲ್ಲ ಎನ್ನುವ ಗಿಲ್ಟ್.

ಆ ಟೈಮ್‌ಗೆ ಎಂಜಾಯ್ ಮಾಡಿದ ಖುಷಿ ಎಲ್ಲ ರಿಸಲ್ಟ್ ನೋಡಿದಾಕ್ಷಣ ಬತ್ತಿ ಹೋಗಿದೆ. ಹೀಗಾಗುತ್ತದೆ ಎಂದು ಗೊತ್ತಿದ್ದರೆ ಖಂಡಿತ ಸ್ಟಡಿಸನ್ನೆಲ್ಲ ಇಷ್ಟು ನೆಗ್ಲೆಟ್ ಮಾಡುತ್ತಿರಲಿಲ್ಲ... ಸ್ವಾತಂತ್ರ್ಯ ಎಂದರೆ... ಹೌದು, ಇದೇನೂ ಕೊನೆಯ ಪರೀಕ್ಷೆಯಲ್ಲ. ನಾನು ಮತ್ತೆ ಚೆನ್ನಾಗಿ ಓದಿ ಒಳ್ಳೆಯ ಮಾರ್ಕ್ಸ್ ತೆಗೆದುಕೊಳ್ಳಬಹುದು. ಆದರೆ ನನಗೆ ಕಾಡುತ್ತಿರುವ ಪ್ರಶ್ನೆ ಎಂದರೆ, ಆಗ ಆಶಿಸುತ್ತಿದ್ದ ಸ್ಟಡೀಸ್‌ನಿಂದ ಮುಕ್ತಿಈಗ ದೊರಕಿದೆ.

ಆದರೆ ಅದು ಏಕೆ ಖುಷಿ ಕೊಡುತ್ತಿಲ್ಲ? ಕೊಟ್ಟರೂ ಯಾಕೆ ಕ್ಷಣಿಕ? ಹೇಳುವವರು ಕೇಳುವವರು ಇಲ್ಲ. ಯಾವುದಕ್ಕೂ ಒತ್ತಾಯ ಮಾಡುವವರು ಇಲ್ಲ. ಆದರೂ ಈ ಸ್ವಾತಂತ್ರ್ಯ ಕೊಡುತ್ತಿಲ್ಲ.ಯಾವುದೋ ಒಂದು ಮಿತಿ, ಅಂಕೆ ಬೇಕು ಅನಿಸುತ್ತಿದೆ. ಆಗ ಬೇಸರದಿಂದ ಹೋಮ್‌ವರ್ಕ್ ಮಾಡಿದರೂ ಏನೋ ಒಂಥರ ಸಮಾಧಾನವಿರುತ್ತಿತ್ತು. ಏನೋ ಒಂದು ಮಾಡಿ ಮುಗಿಸಿದ ಖುಷಿ ಇರುತ್ತಿತ್ತು. ಆದರೆನಾನು ಸ್ವಾತಂತ್ರ್ಯವನ್ನು ತಪ್ಪಾಗಿ ಗ್ರಹಿಸಿಕೊಂಡಿದ್ದೆ.

ಇನ್ನು ಮುಂದೆ ನನಗೆ ನಾನೇ ಒಂದು ಮಿತಿಯನ್ನು ಹಾಕಿಕೊಳ್ಳುತ್ತೇನೆ. ಚೆನ್ನಾಗಿ ಸ್ಟಡಿ ಮಾಡುತ್ತೇನೆ. ಅನಗತ್ಯವಾಗಿ ಸುತ್ತುವುದಿಲ್ಲ. ಈ ಸಾರಿ ಮನೆಗೆ ಹೋದಾಗ ಅಪ್ಪನ ಎದುರು ತಪ್ಪೊಪ್ಪಿಗೆ ಮಾಡಿಕೊಳ್ಳುತ್ತೇನೆ. ಆಗಲಾದರೂ ಈ ಗಿಲ್ಟ್‌ನಿಂದ ಮುಕ್ತಿ ದೊರೆಯಬಹುದು.

Saturday, September 4, 2010

ದೊಡ್ಡವರೆಲ್ಲ ಜಾಣರಲ್ಲ. ..

ಅಜ್ಜ ಮೊಮ್ಮಕ್ಕಳ ನಡುವೆ ಸಾಮಾನ್ಯವಾಗಿ ಒಂದು ಮಧುರ ಬಾಂಧವ್ಯವಿರುತ್ತದೆ. ಮೊಮ್ಮಗುವಿನ ತಪ್ಪು ಅಜ್ಜನಿಗೆ ತಪ್ಪಾಗಿ ಕಾಣಿಸದೆ ಬಾಲಲೀಲೆಯಂತೆ ಕಾಣಿಸುತ್ತದೆ. ಮೊಮ್ಮಗುವಿಗಂತೂ ಅಜ್ಜನೇ ಪ್ರಪಂಚ.

ಆದರೆ ಈ ಮಾದಜ್ಜ ಮಾತ್ರ ಸ್ವಲ್ಪ ವಿಚಿತ್ರ. ಶ್ರೀಮಂತ ಒಂಟಿ ಮುದುಕ. ಅವನ ಆರಡಿಯ ಗೌರವ ವರ್ಣದ ದೇಹ ನೋಡಿದರೇ ಭಯ-ಭಕ್ತಿ ಉಂಟಾಗುತ್ತಿತ್ತು. ಯಾರನ್ನೂ ಸುಲಭಕ್ಕೆ ನಂಬುವುದಿಲ್ಲ. ಯಾರನ್ನು ಹಚ್ಚಿಕೊಳ್ಳುತ್ತಲೂ ಇರಲಿಲ್ಲ. ವೇದ-ತರ್ಕ ಅಂತ ಬಹಳ ಓದಿಕೊಂಡಿದ್ದ. ಸಿಕ್ಕಾಪಟ್ಟೆ ಮಡಿ, ತಾಸುಗಟ್ಟಲೆ ದೇವರಪೂಜೆ ಮಾಡುತ್ತಿದ್ದ. ಅವನಿಗೆ ಎದುರು ಹೇಳುವವರೇ ಇಲ್ಲ.

ನಮಗೆ ದೂರದ ಸಂಬಂಧಿ. ಒಂಟಿತನ ಬೇಸರ ತರಿಸಿದಾಗಲೆಲ್ಲ ನಮ್ಮ ಮನೆಗೆ ಬರುತ್ತಾನೆ. ಅವನು ಬಂದ ಎಂದರೆ ಎಲ್ಲರಿಗೂ ತಲೆನೋವು. ಆದರೂ ಪಾಪ ವಯಸ್ಸಾಗಿದೆ. ಹಿಂದೆ ಮುಂದೆ ದಿಕ್ಕಿಲ್ಲದವನು ಎಂದು ಉಪಚರಿಸುತ್ತಿದ್ದರು.

ಅದರಲ್ಲೂ ಮಕ್ಕಳಿಗಂತೂ ಬಹಳ ಕಿರಿಕಿರಿ. ಪ್ರತಿಯೊಂದಕ್ಕೂ ಮಾದಜ್ಜನ ಗೊಣಗಾಟವಿರುತ್ತಿತ್ತು. ಮಕ್ಕಳು ಅವನ ಎದುರು ಹಾದು ಹೋದರೂ ಸಾಕು ಮಾದಜ್ಜನ ಬಾಯಿಗೆ ಅವರು ಬಿದ್ದರು ಅಂತಲೇ ಅರ್ಥ. ಮಾದಜ್ಜ ಬಂದ ಅಂದರೆ ಸಾಕು ನಾವು ಮಕ್ಕಳೆಲ್ಲ ಇಲಿ ತರಹ ಮೂಲೆ ಸೇರಿಕೊಂಡುಬಿಡುತ್ತಿದ್ದೆವು. ಅವನ ಬೈಗುಳಗಳೇ ಹಾಗಿರುತ್ತಿದ್ದವು. ನಮ್ಮ ಆತ್ಮವಿಶ್ವಾಸ, ನಗು ಎಲ್ಲ ಅವನ ಬೈಗುಳದ ಎದುರು ಪುಡಿಪುಡಿ ಆಗಿಬಿಡುತ್ತಿದ್ದವು. ಯಾವ ಕ್ಷಣದಲ್ಲಿ ಮಾದಜ್ಜನ ಬೈಗುಳ ಬಂದು ಎರಗುತ್ತೋ ಅಂತ ಟೆನ್ಷನ್‌ಲೇ ದಿನ ಕಳೆಯುತ್ತಿದ್ದೆವು.

ಒಂದು ಶನಿವಾರ ಮನೆಗೆ ಹೋದಾಗ ಮಾದಜ್ಜನೂ ಬಂದಿದ್ದ. ಅವನನ್ನು ನೋಡಿದಾಕ್ಷಣ ನನ್ನ ಅರ್ಧ ಉತ್ಸಾಹ ಬತ್ತಿಹೋಗಿತ್ತು. ನಾನು ಫ್ರಾಕು ಬಿಟ್ಟು ಚೂಡಿದಾರ ಹಾಕಿ ಕಾಲೇಜಿಗೆ ಹೋಗಲು ಪ್ರಾರಂಭಿಸಿದ ಮೇಲೆ ಇದೇ ಮೊದಲ ಬಾರಿಗೆ ಅವನು ನನ್ನನ್ನು ನೋಡಿದ್ದು. ಮೇಲಿನಿಂದ ಕೆಳಗಿನವರೆಗೆ ಒಮ್ಮೆ ನೋಡಿ, "ಈ ಕಾಲದ ಹೆಣ್ಣುಮಕ್ಕಳೋ, ಅವರ ವೇಷವೋ ಎಂದು ಮೂಗು ಮುರಿದ. ಒಮ್ಮೆಲೇ ಸಿಟ್ಟು ಬಂತು. ಆದರೂ ಅಮ್ಮ ಹೇಳುತ್ತಿದ್ದ 'ಮನುಷ್ಯನ ವ್ಯಕ್ತಿತ್ವಕ್ಕೆ ಗೌರವವಿಲ್ಲದಿದ್ದರೂ ಕೊನೇ ಪಕ್ಷ ಅವನ ವಯಸ್ಸಿಗಾದರೂ ಗೌರವ ನೀಡಬೇಕು' ಎನ್ನುವ ಮಾತು ನೆನಪಾಗಿ ಸುಮ್ಮನಾದೆ.

ಅಡುಗೆ ಮನೆಗೆ ಓಡಿಹೋದವಳೇ ಅಮ್ಮನ ಕುತ್ತಿಗೆಗೆ ಜೋತುಬಿದ್ದು ಕಾಲೇಜಿನ ಕಥೆ ಎಲ್ಲ ಹೇಳುತ್ತ ಜೋರಾಗಿ ನಗುತ್ತಿದ್ದೆ. ಮತ್ತೆ ಮಾದಜ್ಜನ ಪ್ರವೇಶವಾಯಿತು. 'ಈಗಿನ ಕಾಲದ ಮಕ್ಕಳಿಗೆ ಹಿರಿಯರು ಅನ್ನುವ ಗೌರವವೇ ಇಲ್ಲ. ನಾವೆಲ್ಲ ಅಪ್ಪ ಅಮ್ಮರಿಂದ ಮಾರು ದೂರ ನಿಂತುಮಾತನಾಡುತ್ತಿದ್ದೆವು' ಎಂದು ಗೊಣಗಿದ. ಇವತ್ತು ಸುಮ್ಮನಿರಲು ಸಾಧ್ಯವೇ ಇಲ್ಲ ಎನ್ನುವಷ್ಟು ಕೋಪ ಬಂತು. ಅಮ್ಮನ ಕಣ್ಸನ್ನೆ ನೋಡಿ ನನ್ನ ಪಾಡಿಗೆ ನಾನು ಹೋದೆ.

ಚಿಕ್ಕಂದಿನಿಂದಲೂ ಅಣ್ಣನ ಅಂಗಿ-ಪ್ಯಾಂಟು ಅಂದರೆ ನನಗಿಷ್ಟ. ಅದನ್ನು ಮನೆಯಲ್ಲಷ್ಟೇ ಹಾಕುತ್ತಿದ್ದೆ. ಅದಕ್ಕೆ ಯಾರ ತಕರಾರೂ ಇರಲಿಲ್ಲ. ಮಾದಜ್ಜ ನೋಡಿದವನೇ 'ನಿನ್ನಲ್ಲಿ ಒಂದೂ ಹುಡುಗಿಯರ ಲಕ್ಷಣವೇ ಇಲ್ಲ ಎಂದು ಜರೆದ. ಮಾದಜ್ಜನ ಮಾತು ನನ್ನಲ್ಲಿದ್ದ ಸ್ವಾಭಿಮಾನ, ಸ್ತ್ರೀತ್ವ ಕೆಣಕಿದಂತಾಯಿತು.

ಎಲ್ಲಿತ್ತೋ ಧೈರ್ಯ ಗೊತ್ತಿಲ್ಲ. 'ಮಾದಜ್ಜ, ಸ್ತ್ರೀತ್ವವನ್ನು ಅಳೆಯುವ ಮಾಪಕ ಯಾವುದು? ನಿನ್ನ ಪ್ರಕಾರ ಯಾವ ಲಕ್ಷಣ ಇದ್ದರೆ ಅವಳು ಸ್ತ್ರೀ ಆಗುತ್ತಾಳೆ? ಎಂದು ಸ್ವಲ್ಪ ಜೋರಾಗಿ ಕೇಳಿದ್ದೆ. ಮಾದಜ್ಜ ನನ್ನ ಅನಿರೀಕ್ಷಿತ ಪ್ರಶ್ನೆಯಿಂದ ಕಂಗಾಲಾಗಿಬಿಟ್ಟಿದ್ದ. ಉತ್ತರಕ್ಕಾಗಿ ಮಾದಜ್ಜ ತಡವರಿಸುತ್ತಿದ್ದಾಗಲೆ ನಾನು ಮುಂದುವರಿಸಿದೆ.

'ತಲೆ ಬಗ್ಗಿಸಿಕೊಂಡು, ಗಟ್ಟಿಯಾಗಿ ಮಾತನಾಡದೆ, ಜೋರಾಗಿ ನಗದೆ ಇದ್ದುಬಿಡುವುದೇ ಹುಡುಗಿಯರ ಲಕ್ಷಣವಾ? ಒಬ್ಬಳು ಹೂವು ಮುಡಿದುಕೊಂಡು, ದೊಡ್ಡ ಕುಂಕುಮ ಇಟ್ಟು ಕೈತುಂಬ ಬಳೆ ತೊಟ್ಟುಕೊಂಡು ಮನದ ತುಂಬ ಹುಳುಕು ತುಂಬಿಕೊಂಡರೆ ಅವಳು ನನ್ನ ಪ್ರಕಾರ ಸ್ತ್ರೀಯೇ ಅಲ್ಲ! ಸಹನೆ, ಆದರಾತಿಥ್ಯ, ಬೇರೆಯವರ ಕಷ್ಟಕ್ಕೆ ಸ್ಪಂದಿಸುವುದು, ಎಲ್ಲರನ್ನೂ ಸಮಾನವಾಗಿ ನೋಡುವುದು ಇವೆಲ್ಲ ಸ್ತ್ರೀ ಆದವಳಲ್ಲಿ ಇರಬೇಕಾದದ್ದು. ಅದು ನನ್ನಲ್ಲಿದೆ!! ಎಂದು ಆವೇಶದಿಂದ ಕೂಗಿದ್ದೆ.

ಮಾದಜ್ಜ ಮರು ಮಾತಾಡಲಿಲ್ಲ. ಅಪ್ಪ ಅಮ್ಮ ನನ್ನ ಕೂಗಾಟ ಕೇಳಿ ಓಡಿಬಂದಿದ್ದರು. ಅಮ್ಮ ನನಗೆ ಬೈದು ಮಾದಜ್ಜನ ಕ್ಷಮೆ ಕೇಳಲು ಹೇಳಿದಳು. ನಾನು ಒಲ್ಲದ ಮನಸ್ಸಿನಿಂದ ತಪ್ಪಾಯ್ತು ಅಂತಲೂ ಹೇಳಿದ್ದೆ. ಇವತ್ತು ಮಾದಜ್ಜ ಬಂದಿದ್ದ. ಸರಿಯಾಗೇ ಮಾತನಾಡಿಸಿದೆ. ಆದರೆ ಮುಖ ತಿರುಗಿಸಿಕೊಂಡ. ಅವನನ್ನು ಬದಲಾಯಿಸುವ ಅಗತ್ಯ ನನಗಿಲ್ಲ. ಅದು ಸಾಧ್ಯವೂ ಇಲ್ಲ. ವಯಸ್ಸು ಹೆಚ್ಚಿದರೆ, ದೊಡ್ಡ ದೊಡ್ಡ ಗ್ರಂಥ ಪಠಿಸಿದ ಮಾತ್ರಕ್ಕೆ ಮನಸ್ಸು ಬೆಳೆಯದು.

Monday, August 30, 2010

ಎಲ್ಲಿ ಹೋಯಿತು ಆ ಸಂಭ್ರಮಾಚರಣೆ?

ಪುಟ್ಟ ಮಕ್ಕಳಿರುವಾಗ ಅಗಸ್ಟ್ ೧೫, ಜನವರಿ ೨೬, ಗಾಂಧಿ ಜಯಂತಿ, ಮಕ್ಕಳ ದಿನಾಚರಣೆ ಯಾವುದೇ ವಿಶೇಷ ದಿನ ಇರಲಿ, ಎಷ್ಟು ಸಂಭ್ರಮವಿತ್ತು.. ಎರಡು ದಿನ ಮೊದಲಿನಿಂದಲೇ ತಯಾರಿ ಶುರುವಾಗುತ್ತಿತ್ತು.

ಬೆಳ್ಳನೆಯ ಹೊಚ್ಚ ಹೊಸ ಬ್ಲೌಸು, ನೀಲಿ ಲಂಗ.. ಮನ ತುಂಬಾ ಉತ್ಸಾಹ. "ಪೂಜೆ ಮಾಡಲಾದರೂ ಸ್ವಲ್ಪ ಹೂ ಇಡೆ" ಎಂಬ ಅಜ್ಜಿಯ ಕೂಗನ್ನೂ ಕಿವಿ ಮೇಲೆ ಹಾಕಿಕೊಳ್ಳುತ್ತಿರಲಿಲ್ಲ. ಮನೆಯ ದೇವರ ಪಾಲಿನ ಹೂವೆಲ್ಲ ಶಾಲೆಗೆ ಸೇರುತ್ತಿದ್ದವು. ಯಾರು ಹೆಚ್ಚಿಗೆ ಹೂವನ್ನು ತರುತ್ತಾರೆ ಎಂದು ನಮ್ಮ ನಮ್ಮಲ್ಲೇ ಕಾಂಪಿಟೇಶನ್.

ಈ ದಿನಾಚರಣೆಗಳು ಬಂದರೆ ಮನೆಯ ಹಿರಿಯರಿಗೆಲ್ಲ ತಲೆನೋವು. ಭಾಷಣ ಬರೆದುಕೊಡು ಎಂದು ಎಲ್ಲರಿಗೂ ದುಂಬಾಲು ಬೀಳುತ್ತಿದ್ದೆವು. 'ಮಾನ್ಯ ಅಧ್ಯಕ್ಷರೇ, ಪೂಜ್ಯ ಗುರುಗಳೇ..'ಎಂದು ಒಂಚೂರೂ ತಪ್ಪದಂತೆ ಕಷ್ಟಪಟ್ಟು ಉರುಹೊಡೆದು ಶಿಕ್ಷಕರಿಗೆ ಒಪ್ಪಿಸುವುದೇ ಒಂದು ಪ್ರಿಯ ಸಾಹಸವಾಗಿತ್ತು.

ಊರ ಹಿರಿಯರೊಬ್ಬರಿಗೇ ಅಧ್ಯಕ್ಷರ ಸ್ಥಾನ ಮೀಸಲಾಗಿರುತ್ತಿತ್ತು. ಪ್ರತಿ ವರ್ಷ ಅದೇ ಅಧ್ಯಕ್ಷರು, ಅದೇ ಭಾಷಣ ವರ್ಷವೊಂದು ಬದಲಾಗಿರುತ್ತಿತ್ತು ಅಷ್ಟೇ. ಉತ್ಸಾಹ ಮಾತ್ರ ಸ್ವಲ್ಪವೂ ಕಡಿಮೆಯಾಗುತ್ತಿರಲಿಲ್ಲ.

ಈ ದಿನಾಚರಣೆಗಳ ಉತ್ಸಾಹ ಒಂದು ರೀತಿಯದ್ದಾದರೆ ಚೌತಿ, ದೀಪಾವಳಿ, ಯುಗಾದಿ ಹಬ್ಬಗಳದ್ದೇ ಇನ್ನೊಂದು ರೀತಿ. ಹಬ್ಬ ಅಮ್ಮನ ಸುತ್ತಮುತ್ತ ತಿರುಗುತ್ತ, ಎಷ್ಟು ಹೊತ್ತಿಗೆ ಆ ಕಜ್ಜಾಯಗಳೆಲ್ಲ ನಮ್ಮ ಕೈಸೇರುತ್ತವೆಯೋ ಎಂಬ ತವಕ. ಜೀವ ಹೋಗುತ್ತದೆ ಎಂಬಷ್ಟು ಹೆದರಿಕೆಯಾದರೂ ಪಟಾಕಿ ಹೊಡೆಯುವ ಕಾತರ. ಹಬ್ಬದ ಮರುದಿನ ಮನೆ ತುಂಬ ಸೇರುವ ನೆಂಟರು. ಮಾತು ಬಿಟ್ಟು ಅದೆಷ್ಟು ದಿನಗಳಾಗಿವೆಯೋ ಎಂಬಂತೆ ಮಾತು.. ಮಾತು.. ಮಾತು.

ಉದ್ದದ ಊಟದ ಪಂಕ್ತಿ. ಒಂದು ಕಡೆ ಸೇರುವ ಮಕ್ಕಳ ಕೂಟ. ಆಹಾ ಎಷ್ಟು ಸುಂದರ ದಿನಗಳು.. ಆ ಎಳೇ ವಯಸ್ಸಿನಲ್ಲಿ ಹಬ್ಬಗಳ ಆಕರ್ಷಣೆಯೇ ಹಾಗಿರುತ್ತಿತ್ತು.

ಆದರೆ ಕೆಲವೇ ವರ್ಷಗಳಲ್ಲಿ ಅದೆಂತಹ ಬದಲಾವಣೆ! ಒಂದರೆಡು ದಿನ ನೆಂಟರಿಷ್ಟರೊಂದಿಗೆ ಸೇರಿ ಕಾಲ ಕಳೆಯಲು ಯಾರಿಗೂ ಟೈಮಿಲ್ಲ. ಮನೆ ಬಿಟ್ಟು ಬಹಳ ದಿನ ಇರುವಂತಿಲ್ಲ. ಏಕೆಂದರೆ ಇದು ವಿಭಕ್ತ ಕುಟುಂಬದ ಅನಿವಾರ್ಯತೆ. ಅಷ್ಟು ಒತ್ತಾಯ ಮಾಡಿ ಕರೆದರೆ ಊಟದ ಹೊತ್ತಿಗೆ ಬಂದು ಊಟ ಮುಗಿಸಿ ತಕ್ಷಣ ತಿರುಗಿ ಮನೆಗೆ. ಹರಕೆ ತೀರಿಸಲು ಬಂದವರಂತೆ ಭೇಟಿ. ತಮ್ಮವರ ಜೊತೆಗೆ ಮನ ಬಿಚ್ಚಿ ಮಾತನಾಡುವುದಿರಲಿ, ನಗಲೂ ಸಲುಗೆ ಇಲ್ಲ! ಇನ್ನು ಬಂದ ಮಕ್ಕಳಿಗೋ, ತಮಗೆ ಇವರೆಲ್ಲ ಏನು ಆಗಬೇಕೆಂದು ತಿಳಿಯದಷ್ಟು ಗೊಂದಲ.

ಇನ್ನು ರಾಷ್ಟೀಯ ದಿನಾಚರಣೆಗಳೋ... ಅವು ಕೇವಲ ಈಗ ರಜಾ ದಿನಗಳು ಅಷ್ಟೇ! ಅವತ್ತು ಫುಲ್ ರಿಲೀಫ್. ಹೈಸ್ಕೂಲ್ ತನಕ ಶಿಕ್ಷಕರ ಹೆದರಿಕೆಯಿಂದಲಾದರೂ ಹೋಗುತ್ತಿದ್ದೆವು. ಈಗ ಕಾಲೇಜಿಗೆ ಬಂದಮೇಲೆ ಅದೆಲ್ಲ ಸಿಲ್ಲಿ.. ಪ್ರಿನ್ಸಿ, ಕೆಲವು ಲೆಕ್ಚರರ್‌ಗಳು, ಅಟೆಂಡರುಗಳು ಕಾಟಾಚಾರಕ್ಕೆ ಎಂಬಂತೆ ಧ್ವಜ ಹಾರಿಸುತ್ತಾರೆ.

ಮನುಷ್ಯ ಬೆಳೆದಂತೆ ಯಾಕೆ ಈ ಎಲ್ಲ ಬದಲಾವಣೆ? ಈ ಆಚರಣೆಗಳು, ಸಂಭ್ರಮ ಕೇವಲ ಮಕ್ಕಳಿಗೆ ಮಾತ್ರವೇ ಸೀಮಿತವೆ?!

Tuesday, August 24, 2010

ಇತ್ತೀಚೆಗೆ ನನ್ನ ಡೈರಿಯ ತುಂಬ ಅವನೆ...

ವಿವೇಕ್.. ವಿವೇಕ್ ಇದೇ ಹೆಸರು ಅದೆಷ್ಟು ಸಾರಿ ಬರೆದುಕೊಂಡಿದ್ದೆನೋ...ಯಾಕೆ ಕಾಡ್ತಾನೆ ಅವನು ನನ್ನನ್ನು ಈ ರೀತಿ? ನಿಜವಾಗಿಯೂ ಅವನ ಮೇಲೆ ಪ್ರೀತಿ ಆಗಿಬಿಟ್ಟಿದೆಯಾ? ಹೀಗೆಲ್ಲಾ ಅಂದುಕೊಂಡ್ರೆ ಯಾಕೋ ತುಂಬ ಭಯ ಆಗುತ್ತೆ...

ಏನೋ ತಪ್ಪು ಕೆಲಸ ಮಾಡ್ತಾ ಇದ್ದೇನೆ ಅನಿಸುತ್ತೆ. ಅಪ್ಪ ಅಮ್ಮನಿಗೆ ಮೋಸ ಮಾಡ್ತಾ ಇದೀನೆನೋ ಅಂತ ಫೀಲ್ ಆಗುತ್ತೆ. ನನ್ನ ವಯಸ್ಸಾದ್ರೂ ಏನು? ಈಗಿರೋ ನನ್ನ ಜವಾಬ್ದಾರಿ ಆದ್ರೂ ಏನು? ಚೆನ್ನಾಗಿ ಓದಲಿ ಮಗಳು ಅಂತ ಅಪ್ಪ ಅಮ್ಮ ಕಾಲೇಜಿಗೆ ಕಳಿಸಿದ್ರೆ ನಾನು ಮಾಡ್ತಾ ಇರೋದಾದ್ರೂ ಏನು! ಡೈರಿ ತುಂಬ ವಿವೇಕನ ಹೆಸರನ್ನು ಬರೆಯುತ್ತ ಕುಳಿತಿರೋದು!!

ಛೇ.. ನನ್ನ ಮೇಲೆ ನನಗೇ ಬೇಜಾರು ಆಗ್ತಾ ಇದೆ. ದಿನವಿಡೀ ಮೂಡೇ ಇಲ್ಲ. ಈಗಾಗಲೇ ಕುಮ್ಮಿಗೂ ನನ್ನ ಮೇಲೆ ಅನುಮಾನ ಮೂಡಿದೆ. Guilt ನಿಂದ ಮನೆಗೆ ಹೋದರೆ ಅಪ್ಪನ ಮುಖ ನೋಡಿ ಮಾತನಾಡೋಕೂ ಹೆದರಿಕೆ. ಯಾವುದಕ್ಕೂ ಒಂದು ಸಾರಿ ಶೀಲಕ್ಕನ ಭೇಟಿ ಮಾಡಿ ಮಾತನಾಡುವುದು ಒಳ್ಳೆಯದು.

ಇಂತಹದ್ದಕ್ಕೆಲ್ಲ ಶೀಲಕ್ಕನ ಬಿಟ್ಟು ಇನ್ಯಾರನ್ನು ಕೇಳಲಿ? ಅವಳು ಮಾತ್ರ ನನ್ನ ಪ್ರಶ್ನೆಗೆ ಉತ್ತರ ಕೊಡಬಲ್ಲಳು. ಈ ವಾರ ಮನಗೆ ಹೋದಾಗ ನನ್ನ ಪುಣ್ಯ ಎಂಬಂತೆ ದೂರದ ಊರಲ್ಲಿ ಕಲಿಯುತ್ತಿದ್ದ ಶೀಲಕ್ಕ ಕೂಡ ಬಂದಿದ್ದಳು. ಕಂಡಕೂಡಲೇ ನೇರ ಸ್ವಭಾವದ ಶೀಲಕ್ಕ ನೇರವಾಗಿ ಕೇಳಿದ್ದಳು, "ಪಿಯುಸಿ ಅಂತೀಯಾ ಲವ್ವು-ಗಿವ್ವು ಏನೂ ಇನ್ನೂ ಮಾಡಿಲ್ವಾ?" ಎಂದು ಕೇಳ್ತಾ ತುಂಟ ನಗೆ ಬೀರಿದಳು.

ಇಷ್ಟು ದಿನ ಮನದಲ್ಲೇ ಇರಿಸಿಕೊಂಡಿದ್ದ ಗೊಂದಲ, ತಳಮಳ ಎಲ್ಲ ಶೀಲಕ್ಕನ ಈ ಪ್ರಶ್ನೆಯಿಂದ ಕಣ್ಣೀರಾಗಿ ಹೊರಬಂತು.
ಗಾಬರಿಯಿಂದ ಶೀಲಕ್ಕ ಹತ್ತಿರ ಓಡಿಬಂದಳು. "ಏನಾಯ್ತೆ ಸುಮಿ.." ಕಕ್ಕುಲಾತಿಯಿಂದ ಕೇಳಿದಳು. ಅಂದು ರಾತ್ರಿ ಬಸ್ಸು ಕೆಟ್ಟು ವಿವೇಕ್ ಮನೆಯ ತನಕ ಬಿಟ್ಟು ಹೋದದ್ದು, ಕಾಲೇಜ್‌ನಲ್ಲಿ ಅವನು ಬೇಕಾದಷ್ಟಕ್ಕೆ ಮಾತನಾಡೋದು, ಡೈರಿ ತುಂಬ ಅವನ ಹೆಸರನ್ನೇ ಬರೆದುಕೊಂಡಿರೋದು.. ಎಲ್ಲ ವಿವರವಾಗಿ ಹೇಳಿದೆ.

ಶೀಲಕ್ಕ ಸಣ್ಣದಾಗಿ ನಕ್ಕು, "ಅವನಿಗೆ ನಿನ್ನ ಪ್ರೀತಿಯ ವಿಷಯ ಗೊತ್ತಾ?" ನಾನು ಇಲ್ಲವೆಂದು ತಲೆಯಾಡಿಸಿದೆ. "ಮತ್ತೆ ನೀನು ಯಾಕೆ ಇಷ್ಟೆಲ್ಲ ಅತ್ತು, tension ಮಾಡಿಕೊಳ್ತಾ ಇದಿಯಾ? ನೋಡು, ಕಷ್ಟದಲ್ಲಿ ಇರೋ ಸ್ತ್ರೀಗೆ ಸಹಾಯ ಮಾಡೋದು ಪುರುಷರ ಸಹಜ ಗುಣ. ತನ್ನ ರಕ್ಷಣೆ ಮಾಡಿದ ಪುರುಷನ ಕಡೆ ಸ್ವಾಭಾವಿಕವಾಗಿ ಸ್ತ್ರೀ ಸೆಳೆಯಲ್ಪಡುತ್ತಾಳೆ. ಈಗ ನಿನಗಾಗಿರುವುದೂ ಅಷ್ಟೆ.

ಇದಕ್ಕೆ ನೀನು ವಿಶೇಷ ಅರ್ಥ ಹಚ್ಚಿ ತಲೆ ಕೆಡಿಸಿಕೊಳ್ಳುವ ಅಗತ್ಯವೇ ಇಲ್ಲ. ಮೊದಲು ಒಂದು ಹಂತದವರಗೆ ನಿನ್ನ ವಿದ್ಯಾಭ್ಯಾಸವನ್ನು complete ಮಾಡು. ಅಲ್ಲಿ ತನಕ ನಿನಗೆ ಯಾವುದು ಸರಿ, ಯಾವುದು ತಪ್ಪು, ಯಾವುದು ಪ್ರೀತಿ, ಯಾವುದು ಆಕರ್ಷಣೆ ಎಂದು ನಿರ್ಧರಿಸುವ ತಿಳುವಳಿಕೆ ಮೂಡಿರುತ್ತದೆ. ದುಡುಕ ಬೇಡ. ಎಳೇ ವಯಸ್ಸು ನಿಂದು. ನಾಳೆ ಕಾಲೇಜಲ್ಲಿ ಅವನನ್ನು ಸಹಜವಾಗಿ ಮಾತನಾಡಿಸು. ಅವನ ಮಾತುಗಳಿಗೆ ವಿಶೇಷ ಅರ್ಥ ಕಲ್ಪಿಸಬೇಡ. ಒಂದು ಒಳ್ಳೆಯ ಸ್ನೇಹ ಬೆಳೆಯಲಿ ನಿಮ್ಮಿಬ್ಬರ ನಡುವೆ... "

ಶೀಲಕ್ಕನ ಮಾತು ಕೇಳಿ ಒಮ್ಮೆ ಕಣ್ಣೆದುರು ಕಟ್ಟಿದ ಭ್ರಮೆಯ ಪೊರೆ ಕಳಚಿದಂತಾಯಿತು. ಇಲ್ಲದೆ ಹೋದದ್ದನ್ನೆಲ್ಲ ಕಲ್ಪಿಸಿಕೊಂಡು ಸುಮ್ಮನೇ ಕಾಲಹರಣ ಮಾಡಿದೆ. ನಾಳೆಯಿಂದ ಎಲ್ಲರ ಜೊತೆ ಹೇಗೆ ಇರುತ್ತೇನೋ ಅವನ ಜೊತೆಗೂ ಹಾಗೆ ಇರುತ್ತೇನೆ. ಈ ಪ್ರೀತಿಯ ಜಂಜಾಟವೆಲ್ಲ ಈಗಲೇ ಬೇಡ. ಹೊಸ ನಿರ್ಧಾರದೊಂದಿಗೆ, ಹೊಸ ಹುಮ್ಮಸ್ಸಿನಿಂದ ಶೀಲಕ್ಕನ ಮನೆಯಿಂದ ಹಿಂದಿರುಗಿದ್ದೆ.

Sunday, August 1, 2010

ಎಲ್ಲಿ ಹೋಯ್ತು ಆ ಮುಗ್ಧ ಸ್ನೇಹ...

ಹಿಂದೆ..
ಹಾಗಾದರೆ ಪ್ರೀತಿ ಅಂದರೆ ಹೀಗೆ ಇರುತ್ತಾ? ಇದ್ಯಾವುದಕ್ಕೂ ನನ್ನಲ್ಲಿ ಉತ್ತರವಿಲ್ಲ. ಇದಕ್ಕೆ ಉತ್ತರ ಕಂಡುಕೊಳ್ಳುವುದಾದರೂ ಹೇಗೆ?
ಮುಂದೆ...

ಮನುಷ್ಯ ಬೆಳೆದಂತೆ ಅವನ ವಿಚಾರಗಳೂ ಎಷ್ಟು ಬದಲಾಗಿಬಿಡುತ್ತವೆ! ಅಥವಾ ಸಮಾಜವೇ ಅವನನ್ನು ಬದಲಾಯಿಸಿ ಬಿಡುತ್ತವೆಯೊ? 8-10 ವರ್ಷಗಳಲ್ಲಿ ಎಂತಹ ಬದಲಾವಣೆ!

ಜೊತೆಯಲ್ಲಿ ಆಡಿ ಬೆಳೆದ ಸ್ನೇಹಿತ ಅಪರಿಚಿತನಾಗಿಬಿಟ್ಟಿದ್ದ!! ನಾನು ದೊಡ್ಡ ಮನೆಯ ಮಗಳು ಎಂಬ ಕಾರಣವೋ ಅಥವಾ ಜಾತಿಯೋ ನಮ್ಮಿಬ್ಬರ ನಡುವೆ ಅಡ್ಡ ಬಂದಿದ್ದು? ಏನೇ ಇದ್ದರೂ ಮಾತನಾಡಿಸದ? ಕಂದಕವೆ?!

ವಿನಾಯಕ.. ಉಹುಂ ಗೊಣ್ಣೆ ವಿನ್ನಿ. ಆ ಹೆಸರೇ ಅವನಿಗೆ ಹೊಂದಿಕೆಯಾಗುವುದು. ನಾವೆಲ್ಲಾಅವನನ್ನು ಕರೆಯುತ್ತಿದ್ದುದೇ ಆ ಹೆಸರಿನಿಂದ. ಯಾವಾಗಲೂ ಮೂಗಿನಿಂದ ಸುರಿಯುತ್ತಿರುವ ಗೊಣ್ಣೆ, ಹರಕು ಮುರುಕು ಅಂಗಿಯ ತೋಳಿನಿಂದ ಅದನ್ನು ಒರೆಸಿಕೊಳ್ಳುವ ವ್ಯರ್ಥ ಪ್ರಯತ್ನ ಇನ್ನೂ ಕಣ್ಣಿಗೆ ಕಟ್ಟಿದಂತಿದೆ.

ಕೂಲಿಗೆ ಹೋಗುವ ಅವನಮ್ಮ ಅವನನ್ನು ಕೈಲಾದಷ್ಟು ಸ್ವಚ್ಛವಾಗಿ ಇಡುವ ಪ್ರಯತ್ನ ಮಾಡುತ್ತಿದ್ದಳು. ಆದರೆ ಅದೆಲ್ಲ ಕೆಲವೇ ಕ್ಷಣಗಳಲ್ಲಿ ಮಣ್ಣುಪಾಲು ಆಗುವುದೆಂದು ಅವಳಿಗೂ ಗೊತ್ತು. ಅಂತಹ ತುಂಟ ಅವನು. ಹಕ್ಕಿ, ಹೂವು, ಹಣ್ಣು, ಮರಗಳ
ಹೆಸರೆಲ್ಲ ಅವನಿಗೆ ಬಾಯಿಪಾಠ. ನಮಗೆಲ್ಲ ಒಂದು ಥರ ಸ್ಫೂರ್ತಿ, ಸೋಜಿಗವಾಗಿದ್ದ.

ಆದರೆ ಅವನು ಸಮಾಜದ ಕೆಳಸ್ತರದವನು. ಅವನ ಅಪ್ಪ-ಅಮ್ಮ ಮಾಡುತ್ತಿದ್ದದ್ದು ಕೂಲಿ ಕೆಲಸ. ನಾವು ಆ ಶಾಲೆಯಲ್ಲಿದ್ದ 8-10 ಮಕ್ಕಳು. ನಮಗೆ ಆ ಜಾತಿ ಭೇದವಿರಲಿಲ್ಲ. ನಾವೆಲ್ಲ ಒಟ್ಟಿಗೇ ಅ ಆ ಇ ಕಲಿತಿದ್ದು, ಆಡಿದ್ದು, ತಪ್ಪು ಲೆಕ್ಕ ಮಾಡಿ ಕಾವೇರಿ ಟೀಚರ್ ಹತ್ತಿರ ಬಾಸುಂಡೆ ಬರುವಂತೆ ಹೊಡೆಸಿಕೊಂಡಿದ್ದು..

ನಾನು ವಿನ್ನಿ ವಿನಿಮಯ ಮಾಡಿಕೊಂಡ ವಸ್ತುಗಳೆಷ್ಟೋ..ನನ್ನ ಬಳಪಕ್ಕೆ ಅವನ ಪುಟ್ಟ ಬಾತುಕೋಳಿ ಗೊಂಬೆ, ಮುರುಕು ಪೆನ್ನಿಗೆ ಬೆಂಕಿಪೊಟ್ಟಣದ ಚಾಪಾ... ಹೀಗೆ ಅದೆಷ್ಟೋ ಅವನ ಇಷ್ಟೊ ಇಷ್ಟದ ವಸ್ತುಗಳು ನನ್ನ ಸ್ಕೂಲ್ ಬ್ಯಾಗ್ ಸೇರಿದ್ದವು. ಶನಿವಾರ ಶಾಲೆಯಿಂದ ಮರಳುವಾಗ ಮಡಿಲು ತುಂಬುವಷ್ಟು ನೇರಳೆ ಹಣ್ಣು, ಕಾಡಿನ ಅಪರೂಪದ ಹಣ್ಣುಗಳು ವಿನ್ನಿಯ ಕೃಪೆಯಿಂದ ಸಿಗುತ್ತಿದ್ದವು. ನಮ್ಮ ನಡುವೆ ಮೇಲು ಕೀಳೆಂಬ ಭಾವ ಇರಲಿಲ್ಲ. ಅವನು ನಾಲ್ಕನೆ ಕ್ಲಾಸಿಗೆ ಶಾಲೆ ಬಿಟ್ಟಿದ್ದ. ಆದರೆ ದಾರಿಯಲ್ಲಿ ಸಿಕ್ಕರೆ 2-3 ವರ್ಷದವರೆಗೆ ನಮ್ಮಲ್ಲಿ ಅದೇ ಸಲುಗೆ ಇತ್ತು. ನಂತರ ನನ್ನ ಹೈಸ್ಕೂಲು, ಕಾಲೇಜು ಎಂದು ವಿನ್ನಿ ಮರೆತುಹೋಗಿದ್ದ..

ಆದರೆ ಇವತ್ತು ಏನಾಗಿಬಿಟ್ಟಿತ್ತು ಅವನಿಗೆ? ಬಾಲ್ಯದ ಒಳ್ಳೆಯ ಸ್ನೇಹಿತ. ಜೊತೆಯಲ್ಲೆ ಆಡಿ, ಕುಣಿದು, ಅತ್ತುಬೆಳೆದವರು. ಇವತ್ತು ನಮ್ಮ ಮನೆ ಜಗುಲಿ ಕಟ್ಟೆಯ ಮೇಲೆ ಕುಳಿತವನು ಮುಖ ತಿರುಗಿಸಿಕೊಂಡು ಅನಿವಾರ್ಯ ಎಂಬಂತೆ ನನ್ನ ಜೊತೆ ಮಾತನಾಡಿದ್ದ.. ಅದೂ ಬಹುವಚನ ಕೊಟ್ಟು!  "ಏನು.. ಸುಮಾ ಹೆಗಡ್ತೀರು... ಯಾವಾಗ ಬಂದ್ರಿ?...  ನಾನು "ಏನೋ ಗೊಣ್ಣೆ,ಹೇಗಿದಿಯಾ?" ಎಂದು ಸಲುಗೆಯಿಂದ ಮಾತನಾಡಲು ಹೊರಟವಳು...

ಆದರೆ ಅವನ ಬಹುವಚನ, ಮುಜುಗರ ನನ್ನ ಮಾತನ್ನು ಕಟ್ಟಿ ಹಾಕಿದ್ದವು..ನಾನು 'ಹೂಂ' ಎಂದು ತಲೆ ಅಲ್ಲಾಡಿಸಿ ಎದ್ದು ಒಳ ಹೋದೆ. ಯಾಕೋ... ಮಂಕು ಕವಿದಂತಾಗಿತ್ತು. ಎಲ್ಲಿ ಹೋಯ್ತು ಆ ಗೆಳೆತನ?

ಹೌದು.. ಇನ್ನು ಜೀವನವಿಡೀ ಆ ಕಂದಕವನ್ನು ನಾವಿಬ್ಬರೂ ಜೀವಂತವಾಗೇ ಇಡುತ್ತೇವೆ. ಜಾತಿಯ ಗೆರೆಯನ್ನು ನಾವಿಬ್ಬರೂ ದಾಟಲಾರೆವು. ಅಕಸ್ಮಾತ್ ನಾನು ಮೊದಲಿನ ಸ್ನೇಹವನ್ನು ಜೀವಂತವಾಗಿಸಲು ಯತ್ನಿಸಿದರೆ ಅವನೇ ಅದನ್ನು ಕೊಲ್ಲುತ್ತಾನೆ.. ಅಷ್ಟು ಕೀಳರಿಮೆ ಕಂಡಿದ್ದೇನೆ ಅವನ ಕಣ್ಣುಗಳಲ್ಲಿ!

ಕೇವಲ ಜಾತಿ ಬಂಧನದ ಬಗ್ಗೆ ಪಠ್ಯಪುಸ್ತಕಗಳಲ್ಲಿ ಓದಿದ್ದೆ... ಇವತ್ತು ಜೀವನದಲ್ಲಿ ಮೊದಲನೇ ಸಲ ನೇರವಾಗಿ ಅನುಭವಿಸಿದೆ...

Monday, July 26, 2010

ಇದೇನಾ ಪ್ರೀತಿಗೆ ಒಂದು ಸುಂದರ ಪ್ರತಿಕ್ರಿಯೆ

ಇದೇನಾ ಪ್ರೇಮ ಲೇಖನಕ್ಕೆ ಅಭಯ ಸಿಂಹ ಅವರು ನೀಡಿದ ಪ್ರತಿಕ್ರಿಯೆಯನ್ನು ಹಾಗೆ ಪ್ರಕಟಿಸಲು ಸಂತೋಷವಾಗುತ್ತಿದೆ. ನನ್ನ ಲೇಖನಿಗೆ ಇನ್ನಷ್ಟು ಸ್ಫೂರ್ತಿಯ ಇಂಕು ತುಂಬಿದ್ದಂತ್ತಾಗಿದೆ.  ಅಭಯ್ ಅವರ ಲೇಖನ ಓದಿ-ಸುಮಿ

ಹಿಂದೆ...

ಆಕೆ ರೂಪ. ನನಗೆ ಆಕೆಯ ಹೆಸರು ಗೊತ್ತು. ಆದರೆ ಆಕೆಗೆ ನನ್ನ ಹೆಸರೂ ಗೊತ್ತಿಲ್ಲ ಎನ್ನುವುದೂ ನನಗೆ ಚೆನ್ನಾಗೇ ಗೊತ್ತು. ಬಸ್ಸು ಹಾಳಾದಾಗ ನನ್ನಲ್ಲಿ ಸಹಾಯ ಕೇಳಲು ನಾಚುವಷ್ಟು ಅಪರಿಚಿತ ನಾನು ಆಕೆಗೆ. ಹೋಗಲಿ ನಾನೇ ಮಾತನಾಡಿಸುವೆ ಆಕೆಯನ್ನು ಎನ್ನುತ್ತಿರುವಾಗಲೇ, ನೀನೇ ನನ್ನ ಮಾತನಾಡಿಸಬಾರದೇ ಎನ್ನುವಂಥಾ ಕಡೆಕಣ್ಣ ನೋಟ ಬೀರಿದಳು ಆಕೆ ನನ್ನೆಡೆಗೆ. ನಾನು ಯಾಂತ್ರಿಕವಾಗಿ ಕೇಳಿದೆ, "ಈಗೇನು ಮಾಡುತ್ತೀರಿ?"
ಮುಂದಕ್ಕೆ...

ಆಕೆಯ ಕೆನ್ನೆಯ ಮೇಲೆ ಇನ್ನೇನು ನೀರಹನಿಗಳು ಉರುಳಲಿದ್ದವು. ಆದರೆ ಹುಡುಗಿಯರು ಹೀಗೆ ಇನ್ನೇನು ಅಳುವಂಥಾ ಅಸಹಾಯಕರಾಗಿರುವಾಗ ಎಷ್ಟು ಸುಂದರವಾಗಿ ಕಾಣಿಸುತ್ತಾರೆ ಎಂದು ಆಕೆಗೇನು ಗೊತ್ತು? ಆದರೆ ನಾನು ಸಾವರಿಸಿಕೊಂಡೆ. ಅಷ್ಟರಲ್ಲಿ ಆಕೆ "ಮನೆಯೂ ದೂರ... ಇಲ್ಲೆಲ್ಲೂ ಫೋನೂ ಇಲ್ಲ" ಎಂದಳು. ಹಾ! ದೂರದಲ್ಲೆಲ್ಲೂ ಹಾದು ಹೋಗುತ್ತಿದ್ದ ಕಾರೊಂದರ ಬೆಳಕಿನಿಂದ ಆಕೆಯ ಮುಂಗುರುಳು ಚಿನ್ನದ ಬಣ್ಣಕ್ಕೆ ತಿರುಗಿದ್ದವು. ಕಣ್ಣಾಲಿಗಳಲ್ಲಿ ತುಂಬಿದ್ದ ನೀರು ಕಣ್ಣಿಗೊಂದು ಹೊಸ ಹೊಳಪನ್ನೇ ನೀಡಿತ್ತು. ಆ ಒಂದು ಕ್ಷಣ ಆಕೆಗೆ ಸಹಾಯ ಮಾಡದೇ ಇನ್ನೇನೂ ದಾರಿಯೇ ಕಾಣಲಿಲ್ಲ ನನಗೆ. ನನಗೇ ಅರಿವಿಲ್ಲದಂತೆ ನನ್ನ ಬಾಯಿ ಉಲಿದಿತ್ತು, "ನಾನು ಬಿಟ್ಟು ಬಿಡಲಾ?"

ಒಂಟಿ ಹುಡುಗಿಯ ಮುಂದೆ ಹೀರೋ ಆಗುತ್ತಿದ್ದೇನೆಂದೇನಾದರೂ ಆಕೆ ಅಂದುಕೊಳ್ಳಬಹುದೇ? ಹೀಗೆ ಯೋಚನೆಯೊಂದು ಸುಳಿದು ಹೋಯಿತು ನನ್ನ ಮನಸಲ್ಲಿ. ಆದರೆ ಕೆಲವೊಮ್ಮೆ ಪರಿಸ್ಥಿತಿ ಹೇಗೆ ವಿಚಿತ್ರವಾಗಿರುತ್ತೆ ಅಂದ್ರೆ, ಕೆಟ್ಟ ಸಿನೆಮಾದಲ್ಲಿ ನೂರು ಬಾರಿ ನೋಡಿ ಹಳಸಿದ ದೃಶ್ಯವೂ ನಮ್ಮ ಜೀವನದಲ್ಲಿ ಅಷ್ಟೇ ಸ್ವಾಭಾವಿಕವಾಗಿ ಎದುರಾದರೂ ಅಸ್ವಾಭಾವಿಕವಾಗದಿರುವ ಹೋರಾಟ ನಡೆಸಿ ನಾವು ಪರಿಸ್ಥಿತಿಯನ್ನು ಚೋದ್ಯವನ್ನಾಗಿಸುತ್ತೇವಲ್ಲಾ! ಹಾ! ಎಂಥಾ ವೈಚಿತ್ರ್ಯ ಇದು! ನಮ್ಮಲ್ಲಿ ಇದ್ದಿದ್ದು ಒಂದೇ ಕೊಡೆ. ನನ್ನ ಕೈ ಆಕೆಯ ಕೈ ಮತ್ತೆ ಮತ್ತೆ ನನ್ನ ಕೈಗೆ ತಾಗುತ್ತಿತ್ತು. ನಾನೆಷ್ಟು ತಪ್ಪಿಸಿದರೂ ಮತ್ತೆ ಕೈ ತಾಗುತ್ತಿತ್ತು. ಒಂದು ಕ್ಷಣ, ಪರಿಸ್ಥಿತಿಯ ಉಪಯೋಗವನ್ನು ಪಡೆಯುತ್ತಿದ್ದಾಳೇಯೇ ಆಕೆ ಎಂದು ನನಗೇ ಅನುಮಾನವಾಯಿತು. "ನನ್ನಿಂದ ನಿಮಗೂ ತೊಂದರೆ..." ಎಂದಳು ಆಕೆ.

ನಾನು ಕೊಂಚ ನೇರವಾಗಿ "ಹೂಂ. ತೊಂದ್ರೆನೇ..ಆದ್ರೆ ನನ್ನ ತೊಂದ್ರೆಗಿಂತ ನಿಮ್ಮ ಫಜೀತಿ ಕಂಡು ಮರುಕ ಹುಟ್ಟಿತು. ಅದಕ್ಕಾಗಿ ಬಂದೆ. ಅಲ್ಲದೆ, ಇಂಥ ರಾತ್ರಿಯಲ್ಲಿ ಒಬ್ಬಳೇ ಹುಡುಗಿ ಹೋಗುವುದು ಸರಿ ಕಾಣಲಿಲ್ಲ" ಎಂದೆ. ನನ್ನ ಉದ್ದೇಶ ನೇರ ಎಂದು ತಿಳಿಸುವುದು ಅಗತ್ಯ ಎನಿಸಿತ್ತು ನನಗೆ. ಮಾತು ಹೊರಟ ನಂತರ, ಅಯ್ಯೋ! ಪಾಪ ತುಂಬಾ ತೀಕ್ಷ್ಣವಾಯಿತೇನೋ ನನ್ನ ಮಾತು ಎನಿಸಿ ತುಸು ಬೇಸರವಾಯಿತು. ಸುಮಾರು 5 ಕಿ.ಮೀ ದೂರ ಮೌನದ ಪಯಣ. ಆಕೆಯ ಮನೆಯ ದೀಪ ಕಾಣಿಸುತ್ತಿತ್ತು. ಅಪ್ಪ ಹೊರಗೇ ಕೂತು ಕಾಯುತ್ತಿದ್ದ. ಮುಖದಲ್ಲಿ ಆತಂಕದ ಕೋಪ. ಇನ್ನೇನು ಬೈಯಬೇಕು, ಅಷ್ಟರಲ್ಲಿ ನನ್ನನ್ನು ನೋಡಿ ಸುಮ್ಮನಾದರು.

"ಇವರ್ಯಾರು" ಕೇಳಿದರು ಅವರು. ಹ! ಆಕೆಗೆ ನನ್ನ ಹೆಸರೇ ಗೊತ್ತಿಲ್ಲವಲ್ಲಾ? ನಾನೇ ಹೇಳಿದೆ "ನಾನು... ವಿವೇಕ್" ಆಕೆ ನಡೆದದ್ದನ್ನೆಲ್ಲಾ ತನ್ನ ತಂದೆಗೆ ವಿವರಿಸಿದಳು. ನನಗೇನೂ ಕೇಳಿಸಲಿಲ್ಲ. ಆಕೆ ಕೈ ಆಡಿಸುತ್ತಾ, ದೊಡ್ಡದಾಗಿ ಕಣ್ಣು ಬಿಡುತ್ತಾ ಆಗಿದ್ದಕ್ಕೆ ಒಂದಿಷ್ಟು ರಂಗು ಸೇರಿಸುತ್ತಾ ಮಾತನಾಡುತ್ತಿದ್ದಾಗ ನಾವು ನಡೆದ ಐದು ಕಿಲೋಮೀಟರ್ ಒಂದು ರಾತ್ರಿಯಿಡೀ ನಡೆದ ಕಥೆಯಾಕಾಗಿರಬಾರದು ಎನಿಸಿತು ನನಗೆ. ಆದರೆ ಮರುಕ್ಷಣಕ್ಕೆ ಸ್ವಲ್ಪ ಸಿಲ್ಲಿ ಅನಿಸಿ ಅಲ್ಲಿಂದ ಹೊರಟೆ ನಾನು. ಅವರಲ್ಲೇ ರಾತ್ರಿ ಕಳೆಯುವಂತೆ ಅವರೆಲ್ಲರೂ ಒತ್ತಾಯ ಮಾಡಿದರೂ, ಪರಿಸ್ಥಿತಿಗೆ ನಾನು ತಲೆಕೊಟ್ಟರೆ ನದಿಯೊಂದರ ಸುಳಿಗೆ ಸಿಕ್ಕಿ ಚೂರಾಗುವ ಕುಂಬಾದ ಮರದ ಕೊಂಬೆಯಂತೆ ನಾನಾಗುವುದರಲ್ಲಿ ಸಂಷಯವೇ ಇರಲಿಲ್ಲ. ಹಾಗೇ ನಡೆದೆ, ಕೊಡೆ ಮಡಿಸಿ ಮಳೆಗೆ ತಲೆಕೊಟ್ಟು ನಡೆದೆ.

***

ಈ ಘಟನೆಯ ನಂತರ ಆಕೆ ನನಗೆ ಕಾಲೇಜಲ್ಲಿ ಸಿಕ್ಕಿದಾಗ ನಾನು ಆಕೆಯನ್ನು ಹೇಗೆ ಎದುರಿಸುವುದು ಎಂದು ಗೊತ್ತಾಗದೆ ತಬ್ಬಿಬ್ಬಾಗಿ ಮುಗುಳ್ನಕ್ಕೆ. ಆಕೆ ನರುನಕ್ಕಳು. ನಡೆದ ಆಘಟನೆ ಆಕೆಗೆ ನನ್ನ ಪರಿಚಯವನ್ನು ಮಾಡಿಸಿತ್ತು ಎನ್ನುವುದನ್ನು ಬಿಟ್ಟರೆ ಬೇರೇನೂ ಪ್ರಭಾವ ಆದಂತಿರಲಿಲ್ಲ ಆಕೆಯಲ್ಲಿ. ನನಗೆ ಆಕೆಯ ಇದೇ ಗುಣ ಇಷ್ಟವಾಗಿತ್ತು. ಹುಡುಗರಾಗಲಿ, ಹುಡುಗಿಯರಾಗಲಿ ಎಲ್ಲರನ್ನೂ ಚೆನ್ನಾಗಿ ನೋಡುವ, ಗೌರವಿಸುವ ಈ ಹುಡುಗಿ ನನಗಿಷ್ಟವಾಗಿದ್ದಳು. ಆದರೆ ಅದೇ ಕಾರಣಕ್ಕೆ ಆಕೆ ನನ್ನನ್ನು ವಿಶೇಷವಾಗಿ ಗುರುತಿಸಿ ಮಾತನಾಡಿಸುತ್ತಿರಲಿಲ್ಲ. ಆದರೆ ನನಗೆ ಮಾತ್ರ ದಿನದಿಂದ ದಿನಕ್ಕೆ ಅವನನ್ನು ಮಾತನಾಡಿಸುವ ಕಾತರ ಹೆಚ್ಚುತ್ತಿದೆ.

ಆದರೆ ವಿನಾಕಾರಣ ಹೇಗೆ ಮಾತನಾಡಿಸುವುದು? ನಾನೇ ಮೇಲೆ ಬಿದ್ದು ಮಾತನಾಡಿಸುವುದು ನನ್ನಿಂದಾಗದು. ಇಷ್ಟಕ್ಕೂ ನನಗೇಕೆ ಅವಳನ್ನು ಮಾತನಾಡಿಸಬೇಕು ಅನ್ನಿಸುತ್ತದೆ? ನಾನೇನಾದರೂ ಆಕೆಯನ್ನು ಪ್ರೀತಿಸುತ್ತಿದ್ದೇನಾ?! ಹಾಗಾದರೆ ಪ್ರೀತಿ ಅಂದರೆ ಹೀಗೆ ಇರುತ್ತಾ? ಇದ್ಯಾವುದಕ್ಕೂ ನನ್ನಲ್ಲಿ ಉತ್ತರವಿಲ್ಲ. ಇದಕ್ಕೆ ಉತ್ತರ ಕಂಡುಕೊಳ್ಳುವುದಾದರೂ ಹೇಗೆ?... ಇದೇನಾ ಪ್ರೇಮ...?

Thursday, July 22, 2010

ಇದೇನಾ ಪ್ರೇಮ?

ಹಿಂದೆ....
ಹೆಸರೇ ಸರಿಯಾಗಿ ಗೊತ್ತಿಲ್ಲದವನ ಬಳಿ ಏನು ಸಹಾಯ ಯಾಚಿಸುವುದು?! "ಈಗ ಏನು ಮಾಡುತ್ತೀರಿ?" ಎಂದು ಅವನಾಗಿಯೇ ಕೇಳಿದ.
ಮುಂದಕ್ಕೆ...

ನನಗೆ ಸಹಾಯ ಬೇಕಿತ್ತು. ಆದರೆ ಅವನನ್ನು ಕೇಳಲು ಮುಜುಗರ. ಕೆನ್ನೆಯ ಮೇಲೆ ಉರುಳಲು ಸಿದ್ಧವಾಗಿದ್ದ ಕಣ್ಣೀರನ್ನು ಕಷ್ಟಪಟ್ಟು ತಡೆಯುತ್ತ "ಮನೆಯೂ ದೂರ. ಇಲ್ಲೆಲ್ಲೂ ಫೋನೂ ಇಲ್ಲ...

ಏನು ಮಾಡಬೇಕೋ ತಿಳಿಯುತ್ತಿಲ್ಲ" ಎಂದೆ. ನನ್ನ ಮೇಲೆ ಅವನಿಗೆ ಅನುಕಂಪ ಮೂಡಿದ್ದು ಸ್ಪಷ್ಟವಾಗಿ ಕಾಣಿಸುತ್ತಿತ್ತು. "ನಾನು ಬಿಟ್ಟುಕೊಡಲಾ?" ಪ್ರಾಮಾಣಿಕವಾಗಿ ಕೇಳಿದ್ದ.

ಒಂಟಿ ಹುಡುಗಿಯ ಮುಂದೆ ಹೀರೋ ಆಗಬೇಕು ಎನ್ನುವ ಲಕ್ಷಣ ಯಾವುದೂ ಕಾಣಿಸಲಿಲ್ಲ. ನನಗೂ ಗತ್ಯಂತರವಿರಲಿಲ್ಲ. ನಾನೊಬ್ಬ ವಯಸ್ಸಿಗೆ ಬಂದ ಹುಡುಗಿ, ಈ ಅಪರಾತ್ರಿಯಲ್ಲಿ ಹೆಸರು ಕೂಡ ಸರಿಯಾಗಿ ಗೊತ್ತಿಲ್ಲದ ಯುವಕನ ಜೊತೆ ಹೋಗುತ್ತಿದ್ದೇನೆ. ಅಕ್ಕಪಕ್ಕದ ಮನೆಯವರು ಏನೆಂದುಕೊಂಡಾರು.. ಊಹುಂ.. ಇದ್ಯಾವುದೂ ನನ್ನ ಗಮನಕ್ಕೇ ಬರಲಿಲ್ಲ. ಯಾವುದೋ ಮೋಡಿಗೆ ಒಳಗಾದವಳಂತೆ ಅವನ ಜೊತೆನಡೆದೆ.

ಇದ್ದಿದ್ದು ಒಂದೇ ಛತ್ರಿ. ಎಷ್ಟು ಬೇಡವೆಂದರೂ ಅವನ ಮೊಣಕೈ ನನ್ನ ಕೈಗೆ ತಗಲುತ್ತಿತ್ತು. ಸುಮಾರು ದೂರ ಒಬ್ಬರಿಗೊಬ್ಬರು ಏನೂ ಮಾತನಾಡಿಕೊಳ್ಳಲಿಲ್ಲ. ಮಾತನಾಡುವುದಾದರೂ ಏನನ್ನು? ಬಹುಶಃ ಏನಾದರೂ ಮಾತನಾಡಿದರೆ ತನ್ನನ್ನು ಇವಳು ತಪ್ಪು ತಿಳಿದುಕೊಂಡಾಳು ಎನ್ನುವ ಭಾವನೆ ಬಂದಿರಬೇಕು ಅವನಿಗೆ. ನನಗೂ ಈ ಮೌನ ಅಸಹನೀಯ ಅನ್ನಿಸುತ್ತಿತ್ತು. ಔಪಚಾರಿಕವಾಗಿ "ನನ್ನಿಂದ ನಿಮಗೂ ತೊಂದರೆ..." ಎಂದೆ. 'ಹೇ, ಪರ್‍ವಾಗಿಲ್ಲ ಬಿಡಿ' ಎನ್ನುತ್ತಾನೆ ಅಂದುಕೊಂಡೆ.

ಆದ್ರೆ, "ಹೂಂ. ತೊಂದ್ರೆನೇ..ಆದ್ರೆ ನನ್ನ ತೊಂದ್ರೆಗಿಂತ ನಿಮ್ಮ ಫಜೀತಿ ಕಂಡು ಮರುಕ ಹುಟ್ಟಿತು. ಅದಕ್ಕಾಗಿ ಬಂದೆ. ಅಲ್ಲದೆ, ಇಂಥ ರಾತ್ರಿಯಲ್ಲಿ ಒಬ್ಬಳೇ ಹುಡುಗಿ ಹೋಗುವುದು ಸರಿ ಕಾಣಲಿಲ್ಲ... ಮತ್ತೇನೂ ಮಾತಿಲ್ಲ. ಸುಮಾರು 5 ಕಿ.ಮೀ ದೂರ ಮೌನದ ಪಯಣ. ನನ್ನ ಮನೆಯ ದೀಪ ಕಾಣಿಸುತ್ತಿತ್ತು.

ಅಂತೂ ಮನೆ ಸೇರಿದೆನಲ್ಲ ಅನ್ನೋ ಸಮಾಧಾನ. ಆದ್ರೆ ಇವನ ಜೊತೆ ಬಂದಿದ್ದಕ್ಕೆ ಮನೆಯಲ್ಲಿ ಏನು ಹೇಳುತ್ತಾರೋ ಎಂಬ ಭಯ. ಅಪ್ಪ ಹೊರಗೇ ಕೂತು ಕಾಯುತ್ತಿದ್ದ. ಮುಖದಲ್ಲಿ ಆತಂಕದ ಕೋಪ. ಇನ್ನೇನು ಬೈಯಬೇಕು, ಅಷ್ಟರಲ್ಲಿ ಅವನು ನನ್ನ ಹಿಂದೆ ಇದ್ದದ್ದನ್ನು ನೋಡಿದರು.

"ಇವರ್‍ಯಾರು?" ಅಪ್ಪ ಗೊಂದಲದಲ್ಲಿ ಕೇಳಿದ. "ಅಪ್ಪ ಇವರು ನನ್ನ ಕ್ಲಾಸ್‌ಮೇಟ್... ಆಗ ನೆನಪಾಯಿತು! ನನಗಿನ್ನೂ ಆತನ ಹೆಸರೇ ಗೊತ್ತಿಲ್ಲ! ಅವನೇ ಹೇಳಿಕೊಂಡ 'ವಿವೇಕ್' ಅಂತ. ನಂತರ ಮುಂದಿನ ಕತೆಯೆಲ್ಲ ವಿವರವಾಗಿ ಹೇಳಿದೆ. ಅಪ್ಪ-ಅಮ್ಮನಿಗೆ ಅಷ್ಟೇ ಅಲ್ಲ, ನನಗೂ ಕೂಡ ವಿವೇಕನ ಬಗ್ಗೆ ಒಳ್ಳೆಯ ಭಾವನೆ, ಕೃತಜ್ಞತೆ ಮೂಡಿಬಿಟ್ಟಿತ್ತು. ಆ ರಾತ್ರಿ ಇಲ್ಲೇ ಇರು ಎಂದು ಎಷ್ಟು ಹೇಳಿದರೂ ಕೇಳದೆ ಬಸ್ ಕೆಟ್ಟು ನಿಂತಿದ್ದ ಕಡೆಯೇ ಹೊರಟು ನಡೆದಿದ್ದ.

***
ಈ ಘಟನೆಯ ನಂತರ ಕಾಲೇಜ್‌ನಲ್ಲಿ ಎದುರು ಸಿಕ್ಕಾಗ ವಿವೇಕನದು ಒಂದು ಮುಗುಳ್ನಗೆ ಅಷ್ಟೇ.. ಅವತ್ತು ಇವಳಿಗೆ ತಾನೊಂದು ಸಹಾಯ ಮಾಡಿದ್ದೇನೆ ಎನ್ನುವುದೇ ಮರೆತು ಹೋದವನಂತೆ ಇದ್ದ. ಇದಕ್ಕೇ ವಿವೇಕ್ ಇಷ್ಟವಾಗುತ್ತಾನೆ. ಅವನು ಹುಡುಗಿಯಾಗಲಿ ಹುಡುಗನಾಗಲಿ ಒಂದೇ ಥರ ಟ್ರೀಟ್ ಮಾಡುತ್ತಾನೆ. ಹುಡುಗಿ ಎನ್ನುವ ಕಾರಣದಿಂದ ಸ್ಪೆಷಲ್ ಆಗಿ ಏನೂ ನೋಡುತ್ತಿರಲಿಲ್ಲ. ಆದರೆ ನನಗೆ ಮಾತ್ರ ದಿನದಿಂದ ದಿನಕ್ಕೆ ಅವನನ್ನು ಮಾತನಾಡಿಸುವ ಕಾತರ ಹೆಚ್ಚುತ್ತಿದೆ.

ಆದರೆ ವಿನಾಕಾರಣ ಹೇಗೆ ಮಾತನಾಡಿಸುವುದು? ನಾನೇ ಮೇಲೆ ಬಿದ್ದು ಮಾತನಾಡಿಸುವುದು ನನ್ನಿಂದಾಗದು. ಇಷ್ಟಕ್ಕೂ ನನಗೇಕೆ ಅವನನ್ನು ಮಾತನಾಡಿಸಬೇಕು ಅನ್ನಿಸುತ್ತದೆ? ನಾನೇನಾದರೂ ಅವನನ್ನುಪ್ರೀತಿಸುತ್ತಿದ್ದೇನಾ?! ಹಾಗಾದರೆ ಪ್ರೀತಿ ಅಂದರೆ ಹೀಗೆ ಇರುತ್ತಾ? ಇದ್ಯಾವುದಕ್ಕೂ ನನ್ನಲ್ಲಿ ಉತ್ತರವಿಲ್ಲ. ಇದಕ್ಕೆ ಉತ್ತರ ಕಂಡುಕೊಳ್ಳುವುದಾದರೂ ಹೇಗೆ?... ಇದೇನಾ ಪ್ರೇಮ...?

Saturday, July 10, 2010

ಮೊದಲ ಪ್ರೀತಿ?!

ಹಿಂದೆ. . .ಪ್ಲೀಸ್ ಇದೊಂದು ಸಾರಿ ನನ್ನ ನಂಬು... ಫ್ರೆಂಡ್‌ಶಿಪ್ ಅಂದ್ರೆ ಹೇಗಿರತ್ತೆ ಅಂತ ಜನ ನಮ್ಮ ನೋಡಿ ಕಲೀಬೇಕು ಹಾಗೆ ನಿಭಾಯಿಸ್ತೀನಿ... ಯಾವತ್ತೂ ಈ ಬಾಯಿ ಇನ್ನು ಗುಟ್ಟು ಬಿಟ್ಟುಕೊಡಲ್ಲ.... ಮುಂದೆ. . .

ಆಷಾಢದ ಮಳೆಗಾಲ. ಸೂರ್ಯನನ್ನೂ ತನ್ನ ತೆಕ್ಕೆಗೆ ಎಳೆದು ಕೊಂಡಿತ್ತು ಕಪ್ಪು ಮೋಡ. ಮಳೆಯ ಮುನ್ಸೂಚನೆ ಸ್ಪಷ್ಟವಿತ್ತು. ಆದರೂ ವಾರಕ್ಕೆ ಒಂದು ಸಲ ಮಾತ್ರ ಮನೆಗೆ ಹೋಗುವ ಅವಕಾಶ. ಅದನ್ನು ತಪ್ಪಿಸಿಕೊಳ್ಳುವ ಛಾನ್ಸೇ ಇರಲಿಲ್ಲ.

ಎಲ್ಲ ತಯಾರಿ ಮಾಡಿಕೊಂಡು ಹಾಸ್ಟೆಲ್ ಬಿಡುವ ತನಕ ಸಂಜೆ ನಾಲ್ಕು ಗಂಟೆ. ಕುಮ್ಮಿ ಕಾಲೇಜಿಂದ ನೇರವಾಗಿ ಹೊರಟು ಹೋಗಿದ್ದಳು. ನಾನೊಬ್ಬಳೇ ಬಸ್ ಹಿಡಿದು ಮನೆ ಸೇರಿಕೊಳ್ಳಬೇಕಿತ್ತು.

ತಣ್ಣನೆ ಗಾಳಿಯ ಸುಖ ಅನುಭವಿಸುತ್ತ ಬಸ್ಟಾಪಿನತ್ತ ಹೆಜ್ಜೆ ಹಾಕಿದೆ. ಅಲ್ಲಿ ನನ್ನದೇ ಕ್ಲಾಸಿನ ಹುಡುಗನ ಹೊರತು ಮತ್ತೊಂದು ನರಪಿಳ್ಳೆಯೂ ಇರಲಿಲ್ಲ.

ಅವನೊಂದಿಗೆ ಮುಖತಃ ಪರಿಚಯ ಅಷ್ಟೇ. ಕ್ಲಾಸಿನಲ್ಲಿ ತಾನಾಯಿತು, ತನ್ನ ಕೆಲಸವಾಯಿತು ಎಂದುಕೊಂಡು ಸೈಲೆಂಟಾಗಿರುತ್ತಿದ್ದ. ಮೊದಲ ನೋಟಕ್ಕೇ ಬಹಳ ಚಂದ ಎನಿಸದಿದ್ದರೂ, ಕಾಲೇಜಿನಲ್ಲಿ ಆತ ಕಂಡಾಗಲೆಲ್ಲ ಎಷ್ಟು ಸುಂದರ ಅವನ ಕಣ್ಣುಗಳು ಎಂದುಕೊಳ್ಳುತ್ತಿದ್ದೆ.

ಪ್ರಪಂಚವನ್ನೇ ಗೆದ್ದು ಬಿಡುತ್ತೇನೆ ಎನ್ನುವ ಆ ಕಣ್ಣುಗಳಲ್ಲಿನ ಹುಮ್ಮಸ್ಸು ನನ್ನನ್ನು ಸೆಳೆದಿತ್ತು. ಆತನೆಡೆಗೆ ಒಂದು ಪರಿಚಯದ ನಗೆ ಬೀರಿ ಆ ಕಡೆ ಈ ಕಡೆ ನೋಡುತ್ತ ನಿಂತೆ. ಬಸ್ ಬರುವ ಮುನ್ಸೂಚನೆಯೂ ಕಾಣಿಸಲಿಲ್ಲ.

ಆಗಲೇ 5 ಗಂಟೆಯ ಮೇಲಾಗಿತ್ತು. ಇನ್ನು 10 ಕಿ.ಮೀ. ಮುಖ್ಯ ಬಸ್ಟ್ಯಾಂಡಿಗೆ. ಅಲ್ಲಿ ಮತ್ತೆ ಬಸ್ ಬದಲಿಸಿ ಮನೆಗೆ ಹೋಗಬೇಕು. ಒಟ್ಟೂ 20 ಕಿ.ಮೀ. ದೂರದಲ್ಲಿರುವ ಮನೆ ಎಷ್ಟು ಹೊತ್ತಿಗೆ ಸೇರಿಕೊಂಡೇನು ಎನ್ನುವ ಆತಂಕ ಕಾಡತೊಡಗಿತು.

ಕಾದು ಕಾದು 6.45 ಆಗುತ್ತಾ ಬಂತು. ತಿರುಗಿ ಹಾಸ್ಟೇಲ್‌ಗೆ ಹೋಗೋಣವೆಂದುಕೊಂಡೆ. ಆದರೂ ಮನೆಗೆ ಹೋಗುವ ಆಸೆ ಕೈಹಿಡಿದು ಎಳೆಯುತ್ತಿತ್ತು. ನನ್ನ ಕ್ಲಾಸಿನವನೇ ಒಬ್ಬನಿದ್ದಾನಲ್ಲ ಎನ್ನುವ ಅಲ್ಪದ ಧೈರ್ಯ. ಅಂತೂ 7.15 ಕ್ಕೆ ಓಲಾಡುತ್ತ ಹಳೆ ಮುದುಕಿಯಂತೆ ಬಸ್ ಒಂದು ಬಂತು.

ಏರಿ ಕುಳಿತವಳಿಗೆ ಒಮ್ಮೆಲೇ ನಿದ್ರೆ. ಎಚ್ಚರಾಗುವ ಹೊತ್ತಿಗೆ 8 ಗಂಟೆ! ಕಂಡಕ್ಟರ್ "ರೀ ಏಳ್ರಿ" ಎಂದು ನನ್ನ ನೋಡಿ ಕಿರುಚುತ್ತಿದ್ದ. ಬಸ್ ಹಾಳಾಗಿ ನಿಂತಿತ್ತು. ಈ ಬಸ್ ಇನ್ನು ಮುಂದೆ ಹೋಗುವುದಿಲ್ಲ ಎನ್ನುತ್ತ ಎಲ್ಲರನ್ನೂ ಕೆಳಗಿಳಿಸುತ್ತಿದ್ದ. ಬಸ್ ಈಗ ಯಾವ ಜಾಗದಲ್ಲಿದೆ ಎಂದು ಗೊತ್ತಾಗದಷ್ಟು ಕರಿಗತ್ತಲು. ಆ ಕಡೆ ಹಾಸ್ಟೆಲೂ ಇಲ್ಲ,

ಈ ಕಡೆ ಮನೆಯೂ ಇಲ್ಲ ಎಂಬಂತಹ ಅಯೋಮಯ ಪರಿಸ್ಥಿತಿ. ಏನು ಮಾಡಲೂ ತೋಚಲಿಲ್ಲ. ನನ್ನ ಪುಣ್ಯಕ್ಕೆ ಸುತ್ತಮುತ್ತ ಒಂದು ಟೆಲಿಫೋನ್ ಬೂತ್ ಇರಲಿ, ತುಣುಕು ಬೆಳಕೂ ಇರಲಿಲ್ಲ. ಈಗೇನು ಮಾಡುವುದು? ಎಲ್ಲಿಗೆ ಹೋಗುವುದು? ಅಪ್ಪನನ್ನು ಇಲ್ಲಿಗೆ ಕರೆಸುವುದಾದರೂ ಹೇಗೆ? ಇಷ್ಟು ರಾತ್ರಿಯ ಮೇಲೆ ಆ ದಾರಿಯಲ್ಲಿ ಬೇರೆ ಬಸ್ಸುಗಳೂ ಬರುವುದಿಲ್ಲ.

ಒಮ್ಮೆಲೇ ಅಣ್ಣನ ಮೇಲೆ ಕೋಪ ಉಕ್ಕಿ ಬಂತು. ಅಪ್ಪನನ್ನು ಒಂದು ಮೊಬೈಲ್ ಕೊಡಿಸು ಎಂದು ಕೇಳಿದ್ದೆ. "ಅವಳಿಗೆ ಇಷ್ಟು ಬೇಗನೆ ಮೊಬೈಲ್ ಬೇಡ. ಮೊಬೈಲ್ ಇದ್ದರೆ ಹುಡುಗಿಯರು ಬೇಗನೆ ಹಾಳಾಗುತ್ತಾರೆ" ಎಂದೆಲ್ಲ ಅಪ್ಪನಿಗೆ ಹೇಳಿ ನನ್ನ ಬೇಡಿಕೆಯ ಮೇಲೆ ಕಲ್ಲು ಹಾಕಿದ್ದ.

ಈಗ ಅನುಭವಿಸುತ್ತಿರುವವಳು ನಾನು. ಉಳಿದ ಪ್ರಯಾಣಿಕರೆಲ್ಲ ಸರಕಾರಿ ಬಸ್ಸಿಗೆ ಹಿಡಿ ಶಾಪ ಹಾಕುತ್ತ, ಈ ರಾತ್ರಿ ಎಲ್ಲಿ ಸುರಕ್ಷಿತ ತಾಣ ಸಿಕ್ಕೀತು ಎನ್ನುವ ಬಗ್ಗೆ ಚರ್ಚೆ ಮಾಡುತ್ತಿದ್ದರು. ನಾನು ಮಾತ್ರ ಒಂಟಿಯಾಗಿ ಕಣ್ಣು ಕಣ್ಣು ಬಿಡುತ್ತ ನಿಂತಿದ್ದೆ.

ಅಲ್ಲಿ ಅಲ್ಪಸ್ವಲ್ಪ ಪರಿಚಯ ಇದ್ದವನು ಅಂದರೆ ಆ ನನ್ನ ಕ್ಲಾಸ್‌ಮೇಟ್ ಮಾತ್ರ. ಏನಾದರೂ ಸಹಾಯ ಕೇಳಬೇಕು ಅಂದರೆ ಅವನನ್ನೇ ಕೇಳಬೇಕು. ಸುಮ್ಮನೆ ಅವನನ್ನೇ ನೋಡಿದೆ. ಅರ್ಥ ಮಾಡಿಕೊಂಡವನಂತೆ ತಕ್ಷಣ ನನ್ನ ಕಡೆ ನಡೆದು ಬರತೊಡಗಿದ. ಒಮ್ಮೆ ಏನು ಕೇಳಬೇಕೆಂದು ತೋಚಲಿಲ್ಲ.

ಹೆಸರೇ ಸರಿಯಾಗಿ ಗೊತ್ತಿಲ್ಲದವನ ಬಳಿ ಏನು ಸಹಾಯ ಯಾಚಿಸುವುದು?! "ಈಗ ಏನು ಮಾಡುತ್ತೀರಿ?" ಎಂದು ಅವನಾಗಿಯೇ ಕೇಳಿದ.

Saturday, July 3, 2010

ಅವರೂ ಒಂಥರಾ ಪರ್ಸನಲ್ ಡೈರಿ


ಸ್ವಲ್ಪವೂ ಮಾನವೀಯತೆ ಕಲಿಯದೆ ಎಂ.ಎ.,ಪಿಎಚ್ ಡಿ ಮಾಡಿ ಏನು ಬಂತು? ಧಿಕ್ಕಾರ ನಮ್ಮ ಈ ತರಹದ ಯುವಜನಾಂಗಕ್ಕೆ!!!
ಮುಂದಕ್ಕೆ. ..

ಛೇ.... ಹೇಗೆ ಕಳೆದುಬಿಟ್ಟೆ ಇಷ್ಟು ದಿನ. ಯಾರ್‍ಯಾರಿಗೆ ಏನು ಅಂದಿದ್ದೆನೋ... ಅವರು ಎಷ್ಟು ನೊಂದುಕೊಂಡಿದ್ದರೋ.. ಎಲ್ಲಿ ಹೋಗಿತ್ತು ನನ್ನ ಬುದ್ಧಿ ಎಲ್ಲಾ? ಇಷ್ಟೆಲ್ಲ ಓದಿದ್ದು ದಂಡ.. 16 ವರ್ಷ ತುಂಬುತ್ತೆ ನಾಡಿದ್ದು ಆಗಸ್ಟ್‌ಗೆ... ಇನ್ನೂ ಅವಿವೇಕಿಯಂತೆ ವರ್ತಿಸುತ್ತಿದ್ದೇನೆ..

ನಾನು ಯಾಕೆ ಹಾಗೆ ಮಾಡಿದೆ? ನನಗೆ ಗೊತ್ತಿರಲಿಲ್ವಾ, ಅಂಥ ವಿಷಯಗಳನ್ನ ಎಲ್ಲರ ಎದುರು ಹೇಳಿದರೆ ಕುಮ್ಮಿ ಏನು ಅಂದುಕೊಳ್ಳಬಹುದು ಅಂತ. ಅದು ಕುಮ್ಮಿಯ ವೈಯಕ್ತಿಕ ವಿಷಯ. ಗೆಳತಿ ಎನ್ನುವ ನಂಬಿಕೆಯಿಂದ ನನ್ನೊಂದಿಗೆ ಹಂಚಿಕೊಂಡ ವಿಷಯ... ಆದರೂ ಬಾಯಿ ಜಾರಿಬಿಟ್ಟೆ.. ಆ ಬೊಂಬಾಯಿ ಬಜಾರಿ ಜಯ ಹತ್ತಿರ ಹೇಳಿಬಿಟ್ಟೆ! ಈಗ ಪಶ್ಚಾತ್ತಾಪ. ಏನು ಮಾಡಬೇಕು ಅಂತಾನೇ ಗೊತಾಗ್ತಿಲ್ಲ...

ಎಷ್ಟು ಫ್ರೆಂಡ್ಸ್ ಇದ್ರೂ ಫ್ರೆಂಡ್‌ಶಿಪ್‌ನಲ್ಲಿ ಮಾತ್ರ ಸೀರಿಯಸ್ ಆಗೇ ಇರಲಿಲ್ಲ ನಾನು. ಇಷ್ಟು ಆದ್ರೂ ಅಂದ್ರೆ ಸಕತ್ ಮಾತಾಡೋದು, ಇಲ್ಲ ಅಂದ್ರೆ ಬಿಟ್ಟು ನಡೆಯೋದು. ಮತ್ತೊಬ್ಬರ ಬಗ್ಗೆ ಸ್ವಲ್ಪವೂ ಚಿಂತಿಸುತ್ತಿರಲಿಲ್ಲ. ಫ್ರೆಂಡ್‌ಶಿಪ್ಪು, ಅದನ್ನು ನಿಭಾಯಿಸೋದು... ಅದೆಲ್ಲ ನನಗೆ ಗೊತ್ತಿರಲಿಲ್ಲ; ಈ ಘಟನೆ ನಡೆಯುವವರೆಗೂ.

ಕುಮ್ಮಿ ಯಾವಾಗಲೂ ಹೇಳ್ತಾ ಇದ್ಲು, 'ಮೂಲೆಯಲ್ಲಿ ಕೂರೋ ಮಂಜ ಯಾವಾಗ್ಲೂ ನನ್ನ ನೋಡ್ತಾನೆ ಅಂತ. ನಾನೂ ಎರಡು ದಿನ ಗಮನಿಸಿದೆ. ಹೌದು! ಮಂಜನ ಕಣ್ಣಲ್ಲಿ ಕುಮ್ಮಿಯಡೆಗೆ ಅದೇನೋ ಪ್ರೀತಿ ಇತ್ತು, ಸೆಳೆತವಿತ್ತು. ಕುಮ್ಮಿಗೆ ಇದೆಲ್ಲ ಇಷ್ಟವಿರಲಿಲ್ಲ. ಅವಳಿಗೆ ತಾನಾಯಿತು ಫ್ರೆಂಡ್ಸ್....

ತನ್ನ ಓದಾಯಿತು. ಆದರೆ ಕುಮ್ಮಿ ಕಡೆಗೆ ಮಂಜ ನೋಡುವುದನ್ನು ಅವರಿಬ್ಬರಿಗೂ ಗೊತ್ತಾಗದಂತೆ ನೋಡುತ್ತಿದ್ದೆ. ನನಗೆ ಈ ವಿಷಯ ಬಹಳ ಆಸಕ್ತಿಕರವಾಗಿತ್ತು. ಬಹಳ ಮೋಜೆನಿಸುತ್ತಿತ್ತು. ಆದರೆ ಕುಮ್ಮಿಗೆ ಇದರಿಂದ ಎಷ್ಟು tension ಆಗಿತ್ತು ಅಂತ ನನ್ನ ತಲೆಗೆ ಹೊಳೆಯಲೇ ಇಲ್ಲ! ಅವಳ ನೋವನ್ನು, ಮುಜುಗರವನ್ನು ಅರ್ಥಮಾಡಿಕೊಳ್ಳಲೇ ಇಲ್ಲ.ಪಾಪ ಎಷ್ಟು ಬೇಜಾರು ಮಾಡ್ಕೊಂಡ್ಲೋ...

ಇವತ್ತು ಸಂಜೆ ಕುಮ್ಮಿ ನಾನು ವಾಕಿಂಗ್ ಹೋಗಿದ್ವಿ. ಏನೋ ಹೇಳಬೇಕೆಂದು ಪ್ರಯತ್ನಿಸುತ್ತಿದ್ದಳು. ಆದರೆ ನನ್ನ ವಟಗುಟ್ಟುವಿಕೆಯ ನಡುವೆ ಅವಳಿಗೆ ಆ ಗಂಭೀರ ವಿಷಯ ತೆಗೆಯಲು ಆಗಲಿಲ್ಲವೆನಿಸುತ್ತದೆ. ನನ್ನ ಯಾವುದೋ ವಿಷಯ ತುಂಡರಿಸಿ ಒಮ್ಮೆಲೆ 'ಸುಮಿ ಯಾಕೆ ಹೀಗೆ ಮಾಡಿದೆ ಎಂದಳು. ಅವಳ ಮಾತಲ್ಲಿ ಸಿಟ್ಟಿಗಿಂತ ನೋವೇ ತುಂಬಿತ್ತು, ಅಲ್ಲಿಯವರೆಗೆ ಅವಳು ಕಷ್ಟಪಟ್ಟು ಹಿಡಿದುಕೊಂಡಿದ್ದ ಕಣ್ಣೀರು ಒಮ್ಮೆಲೇ ಭೋರ್ಗರೆದಿತ್ತು, ನನಗೆ ಎಲ್ಲ ಅಯೋಮಯ. ಏನೂ ಮಾತನಾಡಲು ತೋಚಲಿಲ್ಲ.

"ಯಾಕೆ ಆ ಜಯನಿಗೆ ಮಂಜನ ಸುದ್ದಿ ಹೇಳಿದೆ? ಕಾಲೇಜ್ ತುಂಬ ಸುದ್ದಿ ಮಾಡಿದಾಳೆ ಗೊತ್ತಾ. ನನಗೆ ಎಷ್ಟು ಹಿಂಸೆ ಆಗ್ತಿದೆ... ನನಗೆ ಕಿವಿ ಎಲ್ಲ ಬಿಸಿಯಾದ ಅನುಭವ.. ಎಂಥ ತಪ್ಪು ಮಾಡಿದೆ! ಗೆಳತಿಯ ಗುಟ್ಟೊಂದನ್ನು ಬಯಲು ಮಾಡಿ ಅವಳಿಗೆ ಅವಮಾನವಾಗುವಂತೆ ನಡೆದುಕೊಂಡಿದ್ದೆ..

ಒಂದೂ ಮಾತನಾಡಲಿಲ್ಲ ನಾನು.. ಏನು ಉಳಿದಿತ್ತು ಮಾತನಾಡಲು ನನ್ನ ಹತ್ತಿರ? ತಪ್ಪಾಯಿತು ಎನ್ನಲಾ? ಅವಳಿಗೆ ಆದ ಅವಮಾನ, ಆ ಯಾತನೆಯ ಎದುರು ಅದು ತೀರಾ ಸಣ್ಣ ಶಬ್ದ. ಈಗ ಜನರ ಬಾಯಿ ಮುಚ್ಚಿಸಲು ಸಾಧ್ಯನಾ? ಅದೂ ನನ್ನ ಕೈಮೀರಿ ಹೋಗಿತ್ತು. ಸುಮ್ಮನೆ ವಾಪಸ್ ಬಂದಿದ್ದೆ.

ತಪ್ಪಾಯಿತು ಕುಮ್ಮಿ. ಇನ್ನೆಂದೂ ನಿನ್ನ ಬಿಟ್ಟುಕೊಡಲ್ಲ ಕಣೆ. ಇವತ್ತು ನಿನ್ನಿಂದ ದೊಡ್ಡ ಪಾಠ ಕಲಿತೆ... ಯಾವತ್ತಿಗೂ ಮರೆಯಲಾಗದ ಪಾಠ. ಈ ಡೈರಿಯಂತೆ ಗೆಳೆತನವೂ ಕೂಡಾ.. ಮನಸಿನ ಪಿಸುಮಾತುಗಳನ್ನು ಹೇಳಿಕೊಳ್ಳುವ ಅತೀ ಆಪ್ತ, ರಹಸ್ಯವಾದ ಪುಟ್ಟ ಜಾಗ...

ಪ್ಲೀಸ್ ಇದೊಂದು ಸಾರಿ ನನ್ನ ನಂಬು... ಫ್ರೆಂಡ್‌ಶಿಪ್ ಅಂದ್ರೆ ಹೇಗಿರತ್ತೆ ಅಂತ ಜನ ನಮ್ಮ ನೋಡಿ ಕಲೀಬೇಕು ಹಾಗೆ ನಿಭಾಯಿಸ್ತೀನಿ... ಯಾವತ್ತೂ ಈ ಬಾಯಿ ಇನ್ನು ಗುಟ್ಟು ಬಿಟ್ಟುಕೊಡಲ್ಲ....

Saturday, June 26, 2010

ಆಗ ಅರ್ಥವಾಗುತ್ತದೆ ನಾನೆಷ್ಟು ಸರಿ ಎಂದು...


'ಪ್ಯಾಂಟ್ ಹಾಕೊಂಡವರೆಲ್ಲ 'ಫಾಸ್ಟ್'.. ಸೀರೆ ಉಟ್ಟವರೆಲ್ಲ ಸಾಫ್ಟ್. ಜೋರಾಗಿ ನಕ್ಕರೆ ಜಾರಿಣಿ. ತಲೆ ಎತ್ತಿ ನಡೆದರೆ bold, ತಲೆತಗ್ಗಿಸಿ ನಡೆದರೆ Traditional' ಹೀಗೆ ಬ್ರ್ಯಾಂಡ್ ಮಾಡಿಬಿಡುತ್ತಾರೆ. ಜನರು ಯಾಕೆ ಹೀಗೆ? ನನಗಂತೂ ಅರ್ಥವೇ ಆಗುತ್ತಿಲ್ಲ
ಮುಂದೆ...


ಕಾರಣವಿಲ್ಲದೆ ಕೆಲವರು ಇಷ್ಟ ಆಗಿಬಿಡ್ತಾರೆ... ಇನ್ನು ಕೆಲವರನ್ನ ವಿನಾಕಾರಣ ದ್ವೇಷ ಮಾಡ್ತೀವಿ... ಮನಸಿನ ವೈಚಿತ್ರ್ಯವೇ ಹೀಗೆ, ಬುದ್ಧಿ ಕಾರಣನೇ ಇನ್ನು ಹೇಳಿರಲ್ಲ, ಅಷ್ಟರೊಳಗೇ ಮನಸಿಗೆ ನಿರ್ಧಾರ ಮಾಡಿಬಿಟ್ಟಾಗಿರುತ್ತದೆ! ಒಬ್ಬ ವ್ಯಕ್ತಿ ಎದುರಿಗೆ ಬಂದಾಗ ಬಾಯ್ಬಿಡದಿದ್ದರೂ ಅವನ ಬಗೆಗೆ ಏನೋ ಒಂದು ಮನಸಿಗೆ Feel ಆಗಿರುತ್ತದೆ.

ಅವಳ ಹೆಸರು ಈ ಡೈರಿಯೊಳಗೆ ನಾನು ಬರೆದುಕೊಳ್ಳಬಹುದು ಎಂದು ಅವಳನ್ನು ನೋಡಿದಾಗ ಅಂದುಕೊಂಡಿರಲಿಲ್ಲ. ಆದರೆ ಈಗ ನೋಡಿದರೆ ಅವಳ ಬಗ್ಗೆ ಬರೆಯ ಹೊರಟರೆ ಈ ಡೈರಿಯ ಪುಟಗಳು ಸಾಲುವುದಿಲ್ಲ.
ನನಗಿಂತ ಒಂದು ವರ್ಷ. ದೊಡ್ಡವಳು ಅಷ್ಟೇ. ಹಾಸ್ಟೆಲ್‌ನಲ್ಲಿ ನನ್ನ ರೂಮ್ ಪಾರ್ಟ್‌ನರ್. ಸೀದಾ ಸಾದಾ ಹುಡುಗಿ. ಹಾಸ್ಟೆಲ್‌ಗೆ ಕಾಲಿರಿಸಿದಾಕ್ಷಣ ನನ್ನನ್ನು ಬರಮಾಡಿಕೊಂಡವಳೇ ಅವಳು. ನೋಡಿದಾಕ್ಷಣ ಬಹಳ ಇಷ್ಟವಾಗಿಬಿಟ್ಟಳು. ಇಷ್ಟವಾದವರೆಲ್ಲ ಹತ್ತಿರವಾಗುತ್ತಾರೆಂದೇನೂ ಇಲ್ಲ. ಆದರೆ ನಾನು ಅವಳನ್ನು ಇಷ್ಟು ಹಚ್ಚಿಕೊಳ್ಳುತ್ತೇನೆ ಎಂದು ಕೂಡಾ ಊಹಿಸಿರಲಿಲ್ಲ.

ಹಾಸ್ಟೆಲ್‌ಗೆ ಸೇರಿದ ಕೆಲವೇ ದಿನಗಳಲ್ಲಿ ತೀರ ಅಕ್ಕನ ತರಹ ಎನಿಸಿಬಿಟ್ಟಳು. ಬಹುಶಃ ನನ್ನನ್ನು ಒಂಥರಾ ಪುಟ್ಟ ಮಗುವಿನಂತೆ ನೋಡಿಕೊಳ್ಳುವುದು, ನನ್ನ ತಪ್ಪನ್ನು ಪ್ರೀತಿಯಿಂದ ತಿದ್ದುವುದು ಹೀಗೆನಿಸಲು ಕಾರಣವಿರಬೇಕು. ಎಷ್ಟು ವಿಚಿತ್ರವೆನಿಸುತ್ತದೆ... ಅವಳ್ಯಾರೋ, ನಾನ್ಯಾರೋ...

ಆದರೆ ಒಡಹುಟ್ಟಿದ ಅಕ್ಕ-ತಂಗಿಯರಂತೆ ನಮ್ಮ ಒಡನಾಟ... ಬೆಚ್ಚನೆಯ ಮನೆಯಿಂದ ದೂರವಿರುವುದರಿಂದ ಇಂತಹ ಸಂಬಂಧಗಳೇ ನಮಗೆ ಆಸರೆ ಎನಿಸುತ್ತವೆ. ನಮ್ಮ ನಡುವೆ ಗಾಢ ಆತ್ಮೀಯತೆ ಬೆಳೆಯಲು ಕಾರಣವಾಗುತ್ತವೆ. ಮೊದಲಾದರೋ, ಸ್ವಲ್ಪ ನೆಗಡಿಯಾದರೂ ತನ್ನ ಕೆಲಸಗಳನ್ನೆಲ್ಲ ಬದಿಗೊತ್ತಿ ಔಷಧೋಪಚಾರ ಮಾಡುವ ಅಮ್ಮನಿದ್ದಳು. ಆದರೆ ಇಲ್ಲಿ? ಎಲ್ಲರಿಗೂ ಅವರದೇ ಕೆಲಸ.
ಹಾಸ್ಟೆಲ್ ಸೇರಿದ ಹೊಸದರಲ್ಲಿ ಒಮ್ಮೊಮ್ಮೆ ಈ ಕಾಲೇಜು- ಗೀಲೇಜು ಏನೂ ಬೇಡ. ಎಲ್ಲ ಬಿಟ್ಟು ಮನೆಗೆ ವಾಪಾಸ್ ಹೋಗಿಬಿಡಲೆ ಎನಿಸುತ್ತಿತ್ತು.

ಆದರೆ ಅಕ್ಕ ಸಿಕ್ಕ ಮೇಲೆ ಮನೆಯನ್ನು ಮೊದಲಿನಷ್ಟು miss ಮಾಡಿಕೊಳ್ಳುತ್ತಿಲ್ಲ. ಬಹಳ ಚೆನ್ನಾಗಿದೆ ಈ ಹಾಸ್ಟೆಲ್ ಜೀವನ... ಆದರೆ ನನಗೆ ಒಂದೇ ಒಂದು ಪ್ರಾಬ್ಲಂ ಎಂದರೆ ನನ್ನ ಹಠ. ನನ್ನ ಆಸೆ, ಇಷ್ಟಕ್ಕೆ ಅಪ್ಪ-ಅಮ್ಮ ನೀರೆರಚಿದವರಲ್ಲ. ಆದರೆ ಇಲ್ಲಿ ನನ್ನ ಮಾತನ್ನು ಕೇಳುವವರೇ ಇಲ್ಲ! ನನ್ನ ಮನೆಯಲ್ಲಿ 'ಮನಮಾನಿ' ನಡೆಸಿದಂತೆ ಇಲ್ಲೂ ನಡೆಸುವುದು ಕಷ್ಟವಾಗಿದೆ. ನಾನು ಮೊದಲು ಸ್ನಾನ ಮಾಡುತ್ತೇನೆ ಎಂದರೆ ನಾನೇ ಮಾಡಬೇಕು. ಬೇರೆ ಯಾರಾದರೂ ಹೋದರೆ ಕೋಪ ನೆತ್ತಿಗೇರಿಬಿಡುತ್ತಿತ್ತು.

ಇದರಿಂದ ಹಾಸ್ಟೆಲ್‌ನಲ್ಲಿ 'ಜಗಳಗಂಟಿ' ಎಂದೂ ಹೇಳಿಸಿಕೊಂಡಾಗಿತ್ತು. ಆದರೆ ಅಕ್ಕ ಸರಿಯಾಗಿ ಬುದ್ಧಿ ಮಾತು ಹೇಳಿದಳು. ಇಲ್ಲದಿದ್ದರೆ ಇನ್ನೂ ಏನೇನು ಹಣೆಪಟ್ಟಿ ಪಡೆದುಕೊಳ್ಳುತ್ತಿದ್ದೆನೊ... ಅಪ್ಪ-ಅಮ್ಮ ನಾಲ್ಕು ಜನರೊಂದಿಗೆ ಹೇಗೆ ಹೊಂದಿಕೊಂಡು ಹೋಗಬೇಕು ಎನ್ನುವುದನ್ನು ಕಲಿಸುತ್ತಾರೆ. ಆದರೆ 'ಒಬ್ಬಳೇ ಮಗಳು' ಎಂದು ಹೇಳಿದಂತೆ ಕುಣಿಯುವುದು ನಮಗೆ ದೊಡ್ಡವರಾದ ಮೇಲೆ ಕಷ್ಟ ನೀಡುತ್ತದೆ. ಮನೆಯಿಂದ ಹೊರಗೆ ಬಂದ ಮೇಲೆಯೇ ಗೊತ್ತಾಗುತ್ತಿರುವುದು ನಾನು ಎಷ್ಟು wrong ಎಂದು.

ಮನೆಯಲ್ಲಿ ನಾನು ಮಾಡಿದ್ದಕ್ಕೆ ಎದುರಾಡುವವರಿಲ್ಲವಾದ್ದರಿಂದ ನಾನು ಮಾಡಿದ್ದೆಲ್ಲ ನನ್ನ ದೃಷ್ಟಿಯಲ್ಲಿ ಸರಿಯಾಗಿಯೇ ಇತ್ತು. ಆದರೆ ಹಾಸ್ಟೆಲ್‌ನಲ್ಲಿ ನಮ್ಮ ವಯಸ್ಸಿನ ನಾಲ್ಕು ಹುಡುಗಿಯರೊಂದಿಗೆ ಬೆರೆಯುತ್ತೇವೆ. ಸ್ವಾಭಾವಿಕವಾಗಿಯೇ ಇನ್ನೊಬ್ಬರೊಂದಿಗೆ ಹೋಲಿಸಿಕೊಳ್ಳುತ್ತೇವೆ. ಆಗ ಅರ್ಥವಾಗುತ್ತದೆ ನಾನೆ? ಸರಿ ಎಂದು... - ಸುಮಿ

Saturday, June 19, 2010

ಜನರು ಯಾಕೆ ಹೀಗೆ? ನನಗಂತೂ ಅರ್ಥವೇ ಆಗುತ್ತಿಲ್ಲ

ಅಜ್ಜ ತನ್ನ ನೀಳ ಬೆರಳೆತ್ತಿ ಅಮ್ಮನೆಡೆಗೆ ತೋರಿದರೆ ಸಾಕು; ಅಮ್ಮ ಸುಮ್ಮನೆ ಒಳಹೋಗುತ್ತಿದ್ದರು. ಹಾಗಾಗಿ ಅಜ್ಜ ನನಗೊಬ್ಬ ಆಪದ್ಭಾಂದವನಾಗಿದ್ದ. ನನ್ನ ಮೊಮ್ಮಗಳನ್ನು ದೊಡ್ಡ ಆಫೀಸರ್ ಮಾಡುತ್ತೇನೆ ಎಂದು ಬಂದವರೆದುರು ಹೊಗಳಿ ನನ್ನ ಅಟ್ಟಕೇರಿಸುತ್ತಿದ್ದ ನನ್ನಜ್ಜ... ಸುಳ್ಳೆ ಸುಳ್ಳೆ ಕಥೆ ಹೇಳಿ ತಾನೂ ನಕ್ಕು ನನ್ನನ್ನು ನಗಿಸುತ್ತಿದ್ದ ಅಜ್ಜ, ನನ್ನನ್ನು ನಾನು 'ರಾಜಕುಮಾರಿ' ಎಂದೇ ಭಾವಿಸುವಂತೆ ಮಾಡಿದ ನನ್ನಜ್ಜ....
ಮುಂದೆ...

ಕೆಲವೊಮ್ಮೆ ನನಗನಿಸುತ್ತದೆ, ಕೆಲವು ಜನರು ಎಷ್ಟೇ ಬುದ್ಧಿವಂತರಿರಲಿ, ಎಷ್ಟೇ ಉತ್ಕೃಷ್ಟ ಶಿಕ್ಷಣ ಪಡೆದಿರಲಿ ಕೀಳು ಪ್ರವೃತ್ತಿಯನ್ನು ಬಿಡಲಾರರು. ಉನ್ನತವಾಗಿ ವಿಚಾರ ಮಾಡಲಾರರು. ಸಂಕುಚಿತ ಮನೋಭಾವದವರಾಗಿ, ಆಚೀಚಿನವರ ಬಗ್ಗೆ ಕೆಳಮಟ್ಟದಲ್ಲಿ ವಿಚಾರ ಮಾಡುತ್ತ ತಾವೂ ನೆಮ್ಮದಿಯಾಗಿರದೇ ಉಳಿವರನ್ನೂ ನೆಮ್ಮದಿಯಾಗಿ ಇರಲು ಬಿಡುವುದಿಲ್ಲ.

ಬಹುಶಃ ಎಲ್ಲರಿಗೂ ಇಂಥವರು ಕಾಡುತ್ತಾರೋ ಬಿಡುತ್ತಾರೋ ಗೊತ್ತಿಲ್ಲ. ಆದರೆ ವಯಸ್ಸಿಗೆ ಬಂದ ಹುಡುಗಿಯರನೇಕರು ಇಂಥ ಕಟುಕಿ ಮಾತನಾಡುವ ಕಟುಕರಿಂದ ಕುಟುಕಿಸಿಕೊಳ್ಳುತ್ತಾರೆ. ಒಮ್ಮೊಮ್ಮೆ ಈ ಕೊಂಕು ನುಡಿಯುವವರ ಕಾಟ ಎಲ್ಲಿಯವರೆಗಿರುತ್ತದೆ ಎಂದರೆ, ಆ ಹುಡುಗಿಯರು ಆತ್ಮಹತ್ಯೆಯ ತನಕ ಯೋಚಿಸಬೇಕು!

ನನ್ನ ಹಿಂದಿನ ಡೆಸ್ಕ್‌ನಲ್ಲಿ ಕುಳಿತುಕೊಳ್ಳುತ್ತಿದ್ದ ವೀಣಾ...ಏನು ತಪ್ಪು ಮಾಡಿದ್ದಳು ಅವಳು!? ತಾನು ಮಾಡದ ತಪ್ಪಿಗಾಗಿ ಅವಳಿಗೇಕೆ ಶಿಕ್ಷೆ?! ಸರಳವಾಗಿ ನಗುತ್ತ, ಎಲ್ಲರ ಜೊತೆಯೂ ಬೆರೆತರೆ ತಪ್ಪೆ? ಅಥವಾ ನಾಲ್ಕು ಜನರ ನಡುವೆ ಎದ್ದು ಕಾಣುವಂತೆ ಸುಮ್ದರವಾಗಿರುವುದು ತಪ್ಪೇ? ಅಥವಾ ಪ್ಯಾಂಟ್-ಶರ್ಟ್ ಹಾಕಿಕೊಂಡು ಬಂದಿದ್ದೇ ತಪ್ಪಾ? ಅಶ್ಲೀಲವಾಗಿ ಅವಳೆನೂ ಡ್ರೆಸ್ ಮಾಡ್ಕೋತಿರಲಿಲ್ಲ. ಆದರೂ ಅವಳು ಹುಡುಗಿಯರಾದಿಯಾಗಿ ಎಲ್ಲರ ಹರಿತ ದೃಷ್ಟಿಗೆ ಗ್ರಾಸವಾಗಿದ್ದಳು.

ಕಾಲೇಜಿಗೆ ಬಂದ ಕೆಲವೇ ದಿನಗಳಲ್ಲಿ ಅವಳ ಬಗ್ಗೆ ಅಪಪ್ರಚಾರ ಪ್ರಾರಂಭವಾಗಿತ್ತು. "ನಿನಗೆ ಗೊತ್ತಾ, ಅವಳ ಅಪ್ಪ-ಅಮ್ಮ ಎಷ್ಟು ಒಳ್ಳೆಯವರಂತೆ ಗೊತ್ತಾ? ಆದರೂ ಇವಳನ್ನು ನೋಡು ಹೇಗೆ ಆಡ್ತಾಳೆ ಅಂತ! ಅಂತ ಗೆಳತಿ ಅನ್ನಿಸಿಕೊಂಡವರೇ ಅವಳ ಬೆನ್ನ ಹಿಂದೆ ಮಾತನಾಡಿಕೊಳ್ಳುತ್ತಿದ್ದರು. ಈ ಹುಡುಗಿಯರು ಅವಳ ಬಗ್ಗೆ ಆಡಿಕೊಂಡಷ್ಟು ಕೆಟ್ಟದಾಗಿ ಹುಡುಗರೂ ಹೇಳುತ್ತಿರಲಿಲ್ಲ!

ಯಾರೋ ಅವಳು 'ಫಾಸ್ಟ್' ಎಂದು ಹಬ್ಬಿಸಿದ ಸುದ್ದಿ ಕಾಲೇಜ್ ಕ್ಯಾಂಪಸ್ ದಾಟಿ ಸುತ್ತಮುತ್ತಲೂ ಹರಡಿತ್ತು. ರಸ್ತೆಯಲ್ಲಿ ಜನರು ಅವಳನ್ನು ನೋಡುವ ದೃಷ್ಟಿಕೋನವೇ ಬದಲಾಗಿ ಹೋಯಿತು. ಅವಳು ಕಾಲೇಜಿಗೆ ಬರುವಾಗ ತಲೆತಗ್ಗಿಸಿಕೊಂಡು ಬರುತ್ತಿದ್ದಳು. ಮೊದಲೆಲ್ಲ ಚೆನ್ನಾಗಿಯೇ ಮಾತನಾಡುತ್ತಿದ್ದವಳು ಈಗ ಯಾರ ಜೊತೆಗೂ ಅಷ್ಟಾಗಿ ಬೆರೆಯುತ್ತಿರಲಿಲ್ಲ. ಆದರೂ ಸುದ್ದಿ ಹರಡಿಸುವವರ ದಾಹವಿನ್ನೂ ತೀರಿರಲಿಲ್ಲ.

ಆ ಚಿಕ್ಕ ಊರಿನಲ್ಲಿ ಸುದ್ದಿಯೊಂದು ಹರಡಿದರೆ ಸುಮಾರು ಒಂದು ತಿಂಗಳು ಚಾಲ್ತಿಯಲ್ಲಿರುತ್ತದೆ. ಇನ್ನು ಇಂಥ ಸುದ್ದಿ ಸಿಕ್ಕರಂತೂ ಕೇಳುವುದೇ ಬೇಡ. ಅವಳಿಗೆ ಈ ಹಿಂಸೆ ಎಷ್ಟು ಹೆಚ್ಚಾಯಿತೆಂದರೆ ಒಂದು ದಿನ ಕಾಲೇಜನ್ನೇ ಬಿಟ್ಟು ಹೋದಳು. ಎಲ್ಲಿ ಹೋದಳು ಎಂದು ಯಾರಿಗೂ ಗೊತ್ತಿಲ್ಲ. ಆಡಿಕೊಳ್ಳುವವರು ಮಾತ್ರ "ಯಾವನೋ ಒಬ್ಬನ ಜೊತೆ ಇರುವುದನ್ನು ಪ್ರಿನ್ಸಿಪಾಲರೇ ಸ್ವತಃ ನೋಡಿದರಂತೆ. ಆದ್ದರಿಂದ ಡಿಬಾರ್ ಮಾಡಿದರಂತೆ..." ಹೀಗೆ ಒಬ್ಬೊಬ್ಬರಿಗೆ ತೋಚಿದಂತೆ ಒಂದೊಂದು ಸುದ್ದಿಗಳು...

ಆದರೆ ನೈಜ ಸತ್ಯ ಯಾರಿಗೂ ಗೊತ್ತಿಲ್ಲ; ಅವರಿಗೆ ಅದು ಬೇಡ ಕೂಡ. ರೋಚಕವಾದ ಸುಳ್ಳು ಸುದ್ದಿ ಇರುವಾಗ ಸಪ್ಪೆ ಸತ್ಯ ಯಾರಿಗೆ ಬೇಕು? ಅಷ್ಟಕ್ಕೂ ಸತ್ಯ ವಿಷಯದ ಅಗತ್ಯ ಯಾರಿಗೆ ಇದೆ. ಅವರಿಗೆ ಬಾಯಿಯಲ್ಲಿ ಹಾಕಿಕೊಂಡು ಅಗೆಯಲು ಒಂದು ಸುದ್ದಿ ಬೇಕು ಅಷ್ಟೇ?. ನನಗೇನೂ ಅವಳು ಅಂತರಂಗ ಹಂಚಿಕೊಳ್ಳುವಷ್ಟು ಹತ್ತಿರದ ಗೆಳತಿಯಲ್ಲ. ಆದರೆ ಅವಳನ್ನು ನೋಡಿದರೆ ನಿಜಕ್ಕೂ ಕನಿಕರವಾಗುತ್ತದೆ.

'ಪ್ಯಾಂಟ್ ಹಾಕೊಂಡವರೆಲ್ಲ 'ಫಾಸ್ಟ್'.. ಸೀರೆ ಉಟ್ಟವರೆಲ್ಲ ಸಾಫ್ಟ್. ಜೋರಾಗಿ ನಕ್ಕರೆ ಜಾರಿಣಿ. ತಲೆ ಎತ್ತಿ ನಡೆದರೆ bold, ತಲೆತಗ್ಗಿಸಿ ನಡೆದರೆ Traditional'ಹೀಗೆ ಬ್ರ್ಯಾಂಡ್ ಮಾಡಿಬಿಡುತ್ತಾರೆ. ಜನರು ಯಾಕೆ ಹೀಗೆ? ನನಗಂತೂ ಅರ್ಥವೇ ಆಗುತ್ತಿಲ್ಲ...- ಸುಮಿ

Saturday, June 12, 2010

ಅಜ್ಜ... ನನಗೆ ನೀನು ಬೇಕಜ್ಜ...


ನನಗನ್ನಿಸಿದಂತೆ ಒಬ್ಬಳು ಹುಡುಗಿ ಒಬ್ಬ ಹುಡುಗನೊಂದಿಗೆಎಕೆ? ಆಳವಾದ ಪ್ರೀತಿಯಲ್ಲಿರಲಿ; ಬೇರೆ ಹುಡುಗರನ್ನು ಇಷ್ಟ ಪಡದೇ ಹೋಗಲಾರಳು. ಅವಳು ಹೇಳಿಕೊಳ್ಳುವುದಿಲ್ಲ;

ಅಷ್ಟೇ.. ಹೇಳಿಕೊಂಡರೆ ಆಗಲಿರುವ ಅನಾಹುತದ ಬಗ್ಗೆ ಅವಳು ಯೋಚಿಸಿಯೇ ಸುಮ್ಮನಾಗಿಬಿಡುತ್ತಾಳೆ. ಮುಚ್ಚಿಟ್ಟರೆ ಯಾರಿಗೂ ಗೊತ್ತಾಗುವುದಿಲ್ಲ
ಸರಿ; ಆದರೆ ವಿಷಯ ಮಾತ್ರ ಸತ್ಯ ಆಗಿರುವುದಿಲ್ಲವೆ? ನನಗೆ ಗೊತ್ತು, ಇದನ್ನು ಡೈರಿಯಲ್ಲಲ್ಲದೆ ಇನ್ನೆಲ್ಲೂ ಹೇಳಲಾರೆ. ಹೇಳಿದರೆ ನನಗೂ 'ಫ್ಲರ್ಟ್ ಎನಿಸಿಕೊಳ್ಳುವ ಭಯ!

ಮುಂದಕ್ಕೆ...

ಅಪ್ಪನ ಮುಖ ದುಃಖದಿಂದ ಕಪ್ಪಿಟ್ಟಿತ್ತು... ನಾನೆಂದೂ ಈ ಸ್ಥಿತಿಯಲ್ಲಿ ಅಪ್ಪನನ್ನು ನೋಡಿಯೇ ಇರಲಿಲ್ಲ. ನನ್ನನ್ನು ಆದಷ್ಟು ಬೇಗನೆ ಕರೆದುಕೊಂಡು ಹೋಗಲು ಓಡಿ ಬಂದಿದ್ದರು. ಕಾಲೇಜಿನ ಹತ್ತಿರ."ಪುಟ್ಟಿ ಅಜ್ಜನಿಗೆ ಸಿರಿಯಸ್ಸು... ಬಾ ಮನೆಗೆ" ಅಷ್ಟೇ ನನ್ನೊಡನೆ ಅವರಾಡಿದ್ದ ಮಾತು. ಸರ್ ಹತ್ತಿರ ಅಪ್ಪ ಅದಾಗಲೇ ಮಾತನಾಡಿದ್ದಂತಿತ್ತು. ಬ್ಯಾಗ್ ಕೈಗೆತ್ತಿಕೊಂಡವಳೇ ಅಪ್ಪನ ಬೈಕ್ ಏರಿದ್ದೆ.

ನನಗೇನೂ ವಿಚಾರ ಮಾಡಲು ತೋಚುತ್ತಿರಲಿಲ್ಲ..."ಅಜ್ಜನಿಗೆಸೀರಿಯಸ್" ಎನ್ನುವ ಅಪ್ಪನ ಧ್ವನಿಯೇ ಕಿವಿಯಲ್ಲಿ ಗುಂಯ್‌ಗುಡುತ್ತಿತ್ತು. ವಯಸ್ಸಾದ ಕಾರಣದಿಂದ ಮತ್ತು ಸತತವಾಗಿ ಸೇದುತ್ತಿದ್ದ ಬೀಡಿಯಿಂದಾಗಿ ಕೆಮ್ಮು-ದಮ್ಮು ಸ್ವಲ್ಪ ಇದ್ದರೂ "ಸೀರಿಯಸ್" ಆಗುವಂತಹ ಯಾವುದೇ ಖಾಯಿಲೆ ಇರಲಿಲ್ಲ ನನ್ನಜ್ಜನಿಗೆ. ಆದರೆ ಅದ್ಹೇಗೆ ಒಂದೇ ಸಲಕ್ಕೆ ಅಜ್ಜನಿಗೆ ಈ ರೀತಿಯಾಯಿತೋ...

ನಾನು ಮನೆ ತಲುಪುವಷ್ಟವರಲ್ಲಿ ಅತ್ತೆ-ಮಾವಂದಿರು ಎಲ್ಲ ಅಜ್ಜನ ಸುತ್ತ ಕುಳಿತಿದ್ದರು.. ಅತ್ತೆಯಂದಿರು ಸೆರಗನ್ನು ಬಾಯಿಗಡ್ಡ ಹಿಡಿದು ಮುಸಿ- ಮುಸಿ ಅಳುತ್ತಿದ್ದರು. ಆರಡಿ ಎತ್ತರದ ನನ್ನಜ್ಜ ನಿಸ್ತೇಜನವಾಗಿ ಹಾಸಿಗೆ ಮೇಲೆ ಮಲಗಿದ್ದ. ಗೌರವ ವರ್ಣದ ಸುಂದರ ನನ್ನಜ್ಜನ ಮುಖ ಬಾಡಿಹೋಗಿತ್ತು. ಏನು ಹೇಳಲು ಪ್ರಯತ್ನಿಸುತ್ತಿದ್ದನೋ ಅಥವಾ ಹಾರಿ ಹೋಗಲಿರುವ ಉಸಿರನ್ನು ಹಿಡಿದಿಡುವ ಪ್ರಯತ್ನವೋ, ಆಗಾಗ ಬಾಯಿ ತೆರೆಯುತ್ತಿದ್ದ... ನನಗೆ ದುಃಖಕ್ಕಿಂತ ಹೆಚ್ಚು ಭಯವಾಗುತ್ತಿತ್ತು. ಅಪ್ಪ ನಿಧಾನವಾಗಿ ನನ್ನ ಕೈಹಿಡಿದುಕೊಂಡು ಅಜ್ಜನ ಹತ್ತಿರ ಕರೆದುಕೊಂಡು ಹೋದರು.

"ಅಪ್ಪಯ್ಯ, ನೋಡು ನಿನ್ನ ಮೊಮ್ಮಗಳು ಸುಮಿ ಬಂದಿದ್ದಾಳೆ ಎಂದು ಜೋರಾಗಿಯೇ ಹೇಳಿದರು. ಅರೆಕ್ಷಣ ಕತ್ತನ್ನು ಹೊರಳಿಸಿ ನೋಡಿದ್ದ ಅಜ್ಜ. ..ಅಪ್ಪ ಹೇಳಿದ್ದು ಕೇಳಿಸಿತೋ ಇಲ್ಲವೋ, ಅವನಿಗೆ ನನ್ನ ಗುರುತು ಸಿಕ್ಕಿತೋ ಇಲ್ಲವೋ ನನಗಂತೂ ಅರ್ಥವಾಗಲಿಲ್ಲ. ಅಜ್ಜನದು ಅದೇ ಕೊನೆಯ ನೋಟ... ಅಜ್ಜನ ತಲೆಯ ಪಕ್ಕ ಕುಳಿತು ಬಾಯಿಗೆ ನೀರುಹಾಕುತ್ತಲೇ ಇದ್ದ ಮಾವ ಅಜ್ಜನ ತುಟಿಯನ್ನು ಮೀರಿ ಹರಿಯುತ್ತಿದ್ದ ನೀರನ್ನು ನೋಡಿ ಅಜ್ಜ ಇನ್ನಿಲ್ಲವೆಂದ!

ಅಯ್ಯೋ! ಅಜ್ಜ... ನನ್ನಜ್ಜ.... ನನ್ನನ್ನು ಭುಜದ ಮೇಲೆ ಕುಳಿಸಿಕೊಂಡು ಊರೆಲ್ಲ ಮೆರೆಸಿದ ಅಜ್ಜ.. ಭಾವನೆಗಳ, ವಾಸ್ತವತೆಯ, ದುಃಖದ ಒತ್ತಡ ತಾಳಲಾಗದೆ ಕಂಪಿಸುತ್ತಿದ್ದೆ. ಅಪ್ಪನಿಗೆ ನನ್ನ ಸ್ಥಿತಿ ಕಂಡು ಕನಿಕರಕ್ಕಿಂತ ಹೆಚ್ಚು ಭಯವಾಗಿರಬೇಕು, ಓಡಿ ಬಂದು ನನ್ನನ್ನು ತಬ್ಬಿಕೊಂಡರು. 'ಅಜ್ಜ' ಎಂದು ಚೀರಿ ಅಪ್ಪನನ್ನು ಹಿಡಿದುಕೊಂಡು ಹಿಸ್ಟೀರಿಯ ಬಂದವಳಂತೆ ಅತ್ತೆ... ಅಪ್ಪ ಏನೇನೋ ಸಮಾಧಾನ ಮಾಡುತ್ತಿದ್ದರು. ಒಂದೂ ನನ್ನ ಕಿವಿ ಮುಟ್ಟುತ್ತಿರಲಿಲ್ಲ. ಮೈಯಲ್ಲ ಹೊತ್ತಿ ಉರಿದ ಭಾವನೆ...

ನಾನು ಅಜ್ಜನ ಜೊತೆ ಕಳೆದ ಕ್ಷಣಗಳೆಲ್ಲವೂ ಆ ಕ್ಷಣಾರ್ಧದಲ್ಲಿ ನನ್ನ ಮೇಲೆ ಧಾಳಿಯಿಟ್ಟಿದ್ದವು... ಒಂದೊಂದಾಗಿ ನೆನಪು ಮಿದುಳಿನಲ್ಲಿ ಹಾದು ಹೋದರೆ ಏನೂ ಅನ್ನಿಸದು. ಆದರೆ ಆ ನೆನಪುಗಳೆಲ್ಲ ಒಮ್ಮೆಲೇ ನುಗ್ಗಿಬಿಟ್ಟರೆ ನಿಭಾಯಿಸಿಕೊಳ್ಳುವುದು ಅಸಾಧ್ಯ. ನನ್ನ ಅಜ್ಜನ ಬಾಂಧವ್ಯವೇ ಹಾಗಿತ್ತು....

ಅಜ್ಜನಿಗೆ ನಾವು ಐದು ಜನ ಮೊಮ್ಮಕ್ಕಳಿದ್ದರೂ ನನ್ನನ್ನು ಕಂಡರೆ ಹೆಚ್ಚು ಪ್ರೀತಿ. ಯಾಕೆಂದರೆ ಚಿಕ್ಕವಳಿರುವಾಗ ಎಲ್ಲರಿಗಿಂತ ಹೆಚ್ಚು ಸಮಯವನ್ನು ಕಳೆಯುವುದೇ ಅಜ್ಜನೊಂದಿಗಾಗಿತ್ತು. ಅವನ ಬೀಡಿ ಮತ್ತು ಮೈನೋವಿಗಾಗಿ ಸವರಿಕೊಳ್ಳುತ್ತಿದ್ದ ಅಯೋಡೆಕ್ಸ್ ನ ವಾಸನೆ ಸೇರಿ ವಿಚಿತ್ರ ಪರಿಮಳ, ಉದ್ದನೆಯ ನಿಲುವಂಗಿ. ಫಳಫಳ ಹೊಳೆಯುವ ತಲೆ... ಎಲ್ಲ ನನಗಿಷ್ಟವಾಗಿತ್ತು.

ಅಜ್ಜನಿಗೆ ಸ್ವಲ್ಪ ಕಾಲುನೋವು ಆದರೂ ಸಾಕು "ಮಗ ಸ್ವಲ್ಪ ಕಾಲು ತಿಕ್ಕಿಕೊಡೆ ಎನ್ನುತ್ತಿದ್ದ. ಎಲ್ಲರೆದುರೂ "ನನ್ನ ಮೊಮ್ಮಗಳ ಕೈಗುಣ ಬಹಳ ಚೆನ್ನಾಗಿದೆ. ನಿನ್ನೆ ನನ್ನ ಕಾಲು ತಿಕ್ಕಿಕೊಟ್ಟಳು, ಕ್ಷಣಾರ್ಧದಲ್ಲಿ ನನ್ನ ನೋವು ಮಾಯ ಎಂದು ಹೊಗಳುತ್ತಿದ್ದ. ಅಜ್ಜನಿಗೆ ಬೆನ್ನುನೋವಾದಾಗ ಬ್ಯಾಲೆನ್ಸ್ ಮಾಡುತ್ತ ಅವನ ಬೆನ್ನ ಮೇಲೆ ಓಡಾಡುವುದೇ ಒಂದು ಮೋಜಾಗಿತ್ತು ನನಗೆ. ಅಮ್ಮ ನನಗೆ ಸ್ವಲ್ಪ ಬೈಯಲು ಬಂದರೂ ಸಾಕು ಓಡಿಹೋಗಿ ಅಜ್ಜನ ಬೆನ್ನಹಿಂದೆ ಸೇರುತ್ತಿದ್ದೆ. ಅಜ್ಜ ತನ್ನ ನೀಳ ಬೆರಳೆತ್ತಿ ಅಮ್ಮನೆಡೆಗೆ ತೋರಿದರೆ ಸಾಕು; ಅಮ್ಮ ಸುಮ್ಮನೆ ಒಳಹೋಗುತ್ತಿದ್ದರು.

ಹಾಗಾಗಿ ಅಜ್ಜ ನನಗೊಬ್ಬ ಆಪದ್ಭಾಂದವನಾಗಿದ್ದ. ನನ್ನ ಮೊಮ್ಮಗಳನ್ನು ದೊಡ್ಡ ಆಫೀಸರ್ ಮಾಡುತ್ತೇನೆ ಎಂದು ಬಂದವರೆದುರು ಹೊಗಳಿ ನನ್ನ ಅಟ್ಟಕೇರಿಸುತ್ತಿದ್ದ ನನ್ನಜ್ಜ... ಸುಳ್ಳೆ ಸುಳ್ಳೆ ಕಥೆ ಹೇಳಿ ತಾನೂ ನಕ್ಕು ನನ್ನನ್ನು ನಗಿಸುತ್ತಿದ್ದ ಅಜ್ಜ, ನನ್ನನ್ನು ನಾನು 'ರಾಜಕುಮಾರಿ ಎಂದೇ ಭಾವಿಸುವಂತೆ ಮಾಡಿದ ನನ್ನಜ್ಜ....

ಎಲ್ಲಿ ಹೋದೆ ಅಜ್ಜ... ಬಾ ಅಜ್ಜ.... ಅಮ್ಮ ಹೊಡೆಯಲು ಬಂದರೆ ಎಲ್ಲಿ ಬಚ್ಚಿಟ್ಟುಕೊಳ್ಳಲಿ...