Showing posts with label ಪ್ರೀತಿ. Show all posts
Showing posts with label ಪ್ರೀತಿ. Show all posts

Friday, March 4, 2011

ಭಾರವೆನಿಸುವ ಅವಳ ಗೆಳೆತನ...

ಹಿಂದೆ....
"ಯಾಕೆ ಅವಳಿಗೆ ಆ ತರ ಮಾಡುತ್ತೀಯಾ? ಪಾಪ. ಎಂದು ನನಗೇ ಬೈಯುತ್ತಾಳೆ. ನನಗೂ ಇದೆಲ್ಲ ಹೊಸದು"...ಮುಂದಕ್ಕೆ...

ಸಂಬಂಧಗಳನ್ನು ಸಂಭಾಳಿಸುವುದು ತುಂಬಾ ಕಷ್ಟವಪ್ಪ.. ಅಪ್ಪ ಅಮ್ಮ, ಅಣ್ಣ, ಅಕ್ಕ, ಅಜ್ಜಿ ಅಜ್ಜ..ಗೆಳೆಯ, ಗೆಳತಿ.. ಹೀಗೆ ಮಾನವ ಸಂಬಂಧಗಳಿಗೆ ಹೆಸರನ್ನು ನೀಡಿ, ಚೌಕಟ್ಟು ಮಾಡಿದ್ದರೂ ಮಾನವ ಸಂಬಂಧಗಳ ಉದ್ದ ಅಗಲಗಳನ್ನು ಅಳೆಯುವುದು ಅಸಾಧ್ಯ.

ಇತ್ತೀಚೆಗೆ ಭಾರತಿ ಏನಾದರೂ ಹಾಗೆ ಹೀಗೆ ಎಂದು ತನ್ನ ಪರ್ಸನಲ್ ವಿಷಯಗಳನ್ನು ಚರ್ಚೆ ಮಾಡಲು ಬಂದರೆ ಸಿಡುಕುತ್ತೇನೆ. ಸಾಕಪ್ಪಾ ಅವಳ ಸಹವಾಸ ಎನಿಸಿಬಿಟ್ಟಿದೆ. ಹೇಗಾದರೂ ಅವಳ ಕೈಯಿಂದ ತಪ್ಪಿಸಿಕೊಂಡರೆ ಸಾಕು ಎಂದೆನಿಸುತ್ತದೆ. ಕುಮ್ಮಿ, ಭಾರತಿ ಇಬ್ಬರೂ ನನಗೆ ಗೆಳತಿಯರೇ.. ಆದರೆ ಎಷ್ಟು ವ್ಯತ್ಯಾಸ. ನಾನು ಆ ಗೆಳೆತನವನ್ನು ನಿಭಾಯಿಸುವುದರಲ್ಲಿ ಅಜಗಜಾಂತರ.

ನಾನೂ ಬಹಳಷ್ಟು ಸಾರಿ ವಿಚಾರ ಮಾಡಿದ್ದೇನೆ.. ಭಾರತಿಯ ಗೆಳೆತನ ಯಾಕೆ ಉಸಿರುಕಟ್ಟಿಸುತ್ತದೆ ಎಂದು .. ಕುಮ್ಮಿ ಪ್ರತಿಯೊಂದಕ್ಕೂ ನನ್ನನ್ನು ಎದುರು ನೋಡುತ್ತ ಕುಳಿತುಕೊಳ್ಳುವುದಿಲ್ಲ. ಗೆಳತಿಯೆಂದು ನನ್ನನ್ನು ಬಹಳ ಹಚ್ಚಿಕೊಂಡರೂ ಯಾವುದಕ್ಕೂ ನನ್ನ ಮೇಲೆ ಡಿಪೆಂಡಾಗಿಲ್ಲ. ನಾನು ಅನ್ಯಾಯವಾಗಿ ಅವಳ ಮೇಲೆ ರೇಗಿದರೂ ತಪ್ಪೆಣಿಸುವುದಿಲ್ಲ. ಸ್ವಲ್ಪ ಹೊತ್ತಿಗೇ ನಾವಿಬ್ಬರೂ ಒಂದು. ಆದರೆ ಕುಮ್ಮಿ ಜೊತೆ ಒಂದು ತರಹ ಸ್ವಾತಂತ್ರ್ಯ ಅನುಭವಿಸುತ್ತೇನೆ.

ಆದರೆ ಭಾರತಿ ವಿಷಯದಲ್ಲಿ ಹಾಗಾಗುವುದೇ ಇಲ್ಲ. ಅಪ್ಪಿತಪ್ಪಿ ನಾನವಳ ಮೇಲೆ ರೇಗಿದರೆ ಮುಗಿದೇ ಹೋಯಿತು. ಒಂದು ನಾಲ್ಕು ದಿನ ಅದನ್ನೇ ಮನಸ್ಸಿನಲ್ಲಿರಿಸಿ ಕೊಳ್ಳುತ್ತಾಳೆ. ನನ್ನ ಪ್ರತಿ ಮಾತಿಗೂ ಅದರ ಹಿಂದಿನ ಅರ್ಥವನ್ನು ಹುಡುಕುತ್ತಾ ಹೊರಡುತ್ತಾಳೆ. ನೀನ್ಯಾಕೆ ಹೀಗೆ ಮಾಡಿದೆ, ಹಾಗೆ ಯಾಕೆ ಹೇಳಿದೆ ಎಂದು ಪ್ರಶ್ನೆಗಳಿಂದ ತಿವಿಯುತ್ತಾಳೆ... ಅಯ್ಯೋ, ಅವಳ ಜೊತೆ ಇರುವುದೊಂದು ದೊಡ್ಡ ಟಾರ್ಚರ್...

ಇದರಲ್ಲಿ ಅವಳ ತಪ್ಪೇನೂ ಇಲ್ಲ. ಆದರೆ ನನ್ನಿಂದ ಅವಳನ್ನು ಸಹಿಸಲೂ ಸಾಧ್ಯವಿಲ್ಲ. ಅವಳ ಜೊತೆ ಹೇಗೆ ಇರಬೇಕು, ಹೇಗೆ ಮಾತಾಡಬೇಕು ಎಂದೇ ಅರ್ಥವಾಗುವುದಿಲ್ಲ. ನನ್ನ ಯಾವ ಮಾತನ್ನು ಹೇಗೆ ಅರ್ಥೈಸಿಕೊಳ್ಳುತ್ತಾಳೋ, ಯಾವಾಗ ಅಳುತ್ತಾಳೋ... ಅವಳ ಜೊತೆ ಇರುವಷ್ಟು ಹೊತ್ತೂ ಒಂದು ತರಹ ಭಯದಲ್ಲೇ ಕಳೆಯುತ್ತೇನೆ..

ಭಾರತಿಗೆ ನನ್ನ ಈ ಭಾವನೆ ಅರ್ಥವಾಗುತ್ತಿಲ್ಲವೆ? ಖಂಡಿತ ಗೊತ್ತು. ಆದರೆ ಅದನ್ನು ಒಪ್ಪಿಕೊಳ್ಳಲು ಅವಳೇ ಸಿದ್ಧಳಿಲ್ಲ. ಪದೇ ಪದೇ ವಿವಿಧ ಪ್ರಶ್ನೆಗಳನ್ನು ಹಾಕಿ ನಾನು ಅವಳನ್ನು ನೆಗ್ಲೆಕ್ಟ್ ಮಾಡುತ್ತಿದ್ದೇನೆ ಎನ್ನುವುದನ್ನು ಕನ್‌ಫರ್ಮ್ ಮಾಡಿಕೊಳ್ಳುತ್ತಾಳೆ. ಭಾರತಿ ಗೆಳೆತನದಿಂದ ಸ್ವಲ್ಪ ಕಸಿವಿಸಿ ಉಂಡಿದ್ದರೂ, ಅದರಿಂದ ನಾನು
ಕಲಿತದ್ದು ಮಾತ್ರ ಬಹಳ.

ಯಾವುದೇ ಸಂಬಂಧವಿರಲಿ ಒಂದು ಮಿತಿ ಇದ್ದರೇ ಸುಂದರವಾಗಿರುತ್ತದೆ. ಹೌದು, ಪ್ರೀತಿಗೆ ಯಾವುದೇ ಗಡಿ, ಮಿತಿ ಇಲ್ಲ. ಆದರೆ ಅಂತ ಪ್ರೀತಿಯಂತಹ ಪ್ರೀತಿಯೂ ಅತಿಯಾದರೆ ವಿಷವಾಗುತ್ತದೆ, ಉಸಿರುಗಟ್ಟಿಸುತ್ತದೆ. ಯಂಡಮೂರಿ ಹೇಳುವಂತೆ 'ಪ್ರೀತಿ ಎಂದರೆ ನಮ್ಮ ಇಷ್ಟಗಳನ್ನು ಬಲಿಕೊಡುವುದಲ್ಲ. ನಮ್ಮ ಇಷ್ಟಗಳೊಂದಿಗೆ ಅವರ ಇಷ್ಟಗಳನ್ನೂ ಗೌರವಿಸುವುದೇ ಪ್ರೀತಿ'. ತನ್ನತನವನ್ನು ತೊರೆದು ಪ್ರೀತಿಸಿದರೆ ಖಂಡಿತ ಅದೊಂದು 'ಗ್ರೇಟ್' ಅಲ್ಲ.

ಅರಳಿಸುವುದೇ ಪ್ರೀತಿ, ಗೆಳೆತನ. ಸ್ನೇಹದ ಸಲುಗೆಯನ್ನು 'ಟೇಕನ್ ಫಾರ್ ಗ್ರ್ಯಾಂಟೆಡ್' ಎಂದುಕೊಂಡರೆ ತೊಂದರೆ ಗ್ಯಾರಂಟಿ. ಗೆಳೆತನದಲ್ಲಿ ಪರಸ್ಪರ ಸಮಾನ ಪ್ರೀತಿ ಇದ್ದರೆ ಸರಿ, ಸ್ವಲ್ಪ ಹೆಚ್ಚು ಕಡಿಮೆ ಆಯಿತು ಎಂದರೂ, ಹರಿದು ಹೋಗುವ ನಾಜೂಕು ಎಳೆ ಗೆಳೆತನ...-ಸುಮಿ

Friday, December 24, 2010

ಮಾನಸಿಕ ಅವಲಂಬನೆ

ಭಾರತಿ... ನಿಜಕ್ಕೂ ಅವಳು ಅವಳ ರೂಪದಂತೆ ಸುಂದರ ಮನಸಿನ ಹುಡುಗಿ. ಪ್ರಭಾವಿ ಶ್ರೀಮಂತರ ಮನೆಯ ಒಬ್ಬಳೇ ಮಗಳು. ಸ್ವಲ್ಪವೂ ಸೊಕ್ಕಿಲ್ಲ. ಶಾಂತ ಸ್ವಭಾವ. ಅನವಶ್ಯಕವಾಗಿ ಯಾರನ್ನೂ ಜರೆದವಳಲ್ಲ. ಆದರೆ ಒದಿಬ್ಬರನ್ನು ಬಿಟ್ಟರೆ ಮತ್ತ್ಯಾರ ಜೊತೆಗೂ ಬೆರೆಯುವುದಿಲ್ಲ. ಉಳಿದ ಹುಡುಗಿಯರು ಅವಳನ್ನು ಒಬ್ಬ ವಿಐಪಿ ಎಂದು ಪರಿಗಣಿಸಿ ದೂರವೆ ಇರಿಸಿಬಿಟ್ಟಿದ್ದರು. ಮಾತಾನಾಡುವಾಗಲೂ ಅಷ್ಟೆ, ಅಳೆದು ತೂಗಿ ಮಿತಿ ಮೀರದ ಮಾತುಗಳು. ಅಭ್ಯಾಸದಲ್ಲೂ
ಮುಂದು.

ನಾನು ಕಾಲೇಜಿಗೆ ಸೇರಿದ ಹೊಸದರಲ್ಲಿ ಅವಳಿಗೆ ನಾನು ಜೋರಾಗಿ ನಗುವುದು, ಗೆಳತಿಯರೊಂದಿಗೆ ಸೇರಿ ಕ್ಲಾಸಿನಲ್ಲಿ ಗಲಾಟೆ ಮಾಡುವುದು ಎಲ್ಲ ಸಹ್ಯವಾಗುತ್ತಿರಲಿಲ್ಲ. ಆದರೆ ಸುಮಾರು ಮೂರು ತಿಂಗಳ ಹಿಂದೆ, ಮಧ್ಯಾಹ್ನದ ಬ್ರೇಕ್ ಟೈಮಿನಲ್ಲಿ ಭಾರತಿ ಬಹಳ ಸಪ್ಪೆ ಮೋರೆ ಮಾಡಿಕೊಂಡು ಅವಳಷ್ಟಕ್ಕೆ ಅವಳು ಮೂಲೆ ಬೆಂಚು ಏರಿ ಕುಳಿತಿದ್ದಳು. ಭಾರತಿಗೆ ಮನೆಯಲ್ಲಿ ಅಪ್ಪ ಅಮ್ಮನ ಜೊತೆ ಅಷ್ಟು ಸಲುಗೆಯಿರಲಿಲ್ಲ. ಒಡನಾಡಲು ಜೊತೆಗೆ ಹುಟ್ಟಿದವರಾರೂ ಇಲ್ಲ. ಹೇಳಿಕೊಳ್ಳುವಂತಹ ಆಪ್ತ ಸ್ನೇಹಿತರೂ ಇಲ್ಲ. ಯಾಕೋ.. ನನಗೆ ಅವಳನ್ನು ನೋಡಿ ಪಾಪ ಎನ್ನಿಸಿತು. "ಏನಾಯ್ತೆ ಭಾರತಿ ಎಂದು ಆಪ್ತತೆಯಿಂದ ಕೇಳುತ್ತ ಪಕ್ಕದಲ್ಲಿ ಹೋಗಿ ಕುಳಿತೆ.

ನಮಗೆ ಅಂತಹ ಬಾಂಧವ್ಯವೇನೂ ಇರಲಿಲ್ಲ. ಆದರೆ ಅವಳಿಗೆ ಆ ಸಮಯಕ್ಕೆ ಹೇಳಿಕೊಳ್ಳಲು ಯಾರಾದರೂ ಬೇಕಾಗಿತ್ತೇನೋ.. ಅಳುತ್ತ ಅವಳ ಮನೆ ಬಗ್ಗೆ, ತನ್ನ ಒಂಟಿತನದ ಬಗ್ಗೆ ಹೇಳಿಕೊಂಡಳು, " ನೋಡು ಭಾರತಿ, ಅಪ್ಪ-ಅಮ್ಮನಿಗೆ ನಿನ್ನ ಜೊತೆ ಕಳೆಯಲು ಟೈಮೇ ಇಲ್ಲ ಎಂದು ಕೊರಗುತ್ತೀಯಾ. ಆದರೆ ನೋಡು, ನಮ್ಮ ಕ್ಲಾಸಿನ ಶ್ವೇತಾಗೆ ಅಪ್ಪ ಅಮ್ಮನೇ ಇಲ್ಲ ಹೀಗೆ ನನಗೆ ತೋಚಿದಂತೆ ಸಮಾಧಾನ ಮಾಡಿದೆ.

ಈ ಘಟನೆ ನಡೆದ ಮೇಲೆ ತೀರ ಎನ್ನುವಷ್ಟು ನನ್ನನ್ನು ಹಚ್ಚಿಕೊಂಡಳು. ಎಲ್ಲದಕ್ಕೂ ನನ್ನ ಸಲಹೆ ಕೇಳುತ್ತಾಳೆ. ಸ್ವಲ್ಪ ಬ್ರೇಕ್ ಸಿಕ್ಕರೂ ಸಾಕು. ಪಕ್ಕದಲ್ಲಿ ಬಂದು ಕುಳಿತುಬಿಡುತ್ತಾಳೆ.

ಬಹಳ ಆಶ್ಚರ್ಯವಾಗುತ್ತದೆ. ಒಂದು ಚಿಕ್ಕ ಸಮಾಧಾನ ಇಷ್ಟೆಲ್ಲ ಮಾಡುತ್ತದೆಯಾ?! ಇದೇನೆ ಇದ್ದರೂ ಭಾರತಿಯ ಅತಿಯಾದ ಅವಲಂಬನೆ ನನಗೆ ಒಂಥರಾ ಉಸಿರು ಕಟ್ಟಿಸುತ್ತದೆ. ಚಿಕ್ಕಪುಟ್ಟ, ಅತೀ ಪರ್ಸನಲ್ ವಿಷ್ಯಗಳಿಗೆ ನನ್ನ ಸಲಹೆ ಬೇಕು ಎನ್ನುವ ಅವಳ ರೀತಿ ಮುಜುಗರ ಉಂಟುಮಾಡುತ್ತದೆ. ಯಾವುದೇ ಕಾರಣಕ್ಕೂ ಅವಳು ನನ್ನನ್ನು ವಿಮರ್ಶೆ ಮಾಡುವುದೇ ಇಲ್ಲ. ನಾನು ಹೇಳಿದ್ದೆಲ್ಲ ವೇದವಾಕ್ಯಎಂಬಂತೆ ಆಡುತ್ತಾಳೆ. ಇದೆಲ್ಲ ನನಗೆ ಸ್ವಲ್ಪವೂ ಇಷ್ಟವಾಗುತ್ತಿಲ್ಲ.

ಇದನ್ನೆ ನೇರವಾಗಿ ಹೇಳಿದರೆ "ನೀನು ನನ್ನ ಬಿಟ್ಟು ಹೋಗುತ್ತೀಯಾ" ಅಂತ ಅಳುತ್ತಾಳೆ. ಈಗೀಗಂತೂ ಅವಳು ಬಂದಳು ಎಂದರೆ ಎಲ್ಲಾದರೂ ಹೋಗಿ ಅಡಗಿಕೊಳ್ಳಬೇಕು ಎನಿಸುತ್ತದೆ. ಉದ್ದೇಶಪೂರ್ವಕವಾಗಿ ಅವಳಕಣ್ಣುತಪ್ಪಿಸಿದರೆ "ನನ್ನನ್ನು ಅವಾಯ್ಡ್ ಮಾಡುತ್ತೀಯಾ" ಎಂದು ಬೇಸರಿಸಿಕೊಳ್ಳುತ್ತಾಳೆ.

ಖಂಡಿತವಾಗಿಯೂ ಅವಳಿಗೆ ಬೇಜಾರು ಮಾಡಲು ನನಗೆ ಇಷ್ಟವಿಲ್ಲ. ಆದರೆ ಅವಳನ್ನು ಸಹಿಸಿಕೊಳ್ಳುವುದೂ ಕಷ್ಟ. ಹಾಗಾದರೆ ಅವಳ ಈ ಡಿಪೆಂಡೆನ್ಸಿ ತಪ್ಪಾ? ಅಥವಾ ಅವಳನ್ನು ಸಹಿಸಿಕೊಳ್ಳಲಾಗದಿರುವುದು ನನ್ನದೇ ತಪ್ಪಾ?

ಕುಮ್ಮಿ ನಾನು ಒಳ್ಳೆಯ ಗೆಳತಿಯರು. ಪರ್ಸನಲ್ ವಿಷ್ಯಗಳನ್ನು ಹಂಚಿಕೊಳ್ಳುತ್ತೇವೆ. ಆದರೆ ಯಾವತ್ತೂ ನನಗೆ ಅವಳು 'ಭಾರ' ಅನ್ನಿಸಿದ್ದೇ ಇಲ್ಲ. ಆದರೆ ಭಾರತಿ ವಿಷಯದಲ್ಲಿ ಮಾತ್ರ ಯಾಕೆ ಹೀಗನಿಸುತ್ತದೆ?

ಕುಮ್ಮಿ ಕೆಲವೊಮ್ಮೆ ಕೇಳುತ್ತಾಳೆ, "ಯಾಕೆ ಅವಳಿಗೆ ಆ ತರ ಮಾಡುತ್ತೀಯಾ? ಪಾಪ." ಎಂದು ನನಗೇ ಬೈಯುತ್ತಾಳೆ. ನನಗೂ ಇದೆಲ್ಲ ಹೊಸದು...

Saturday, November 20, 2010

ಇವತ್ತು ಒಂದು ಹಿಂದಿ ವಾಕ್ಯ ಓದಿದೆ.

'ಅಗರ್ ತುಮ್ಹೆ ಪ್ಯಾರ್ ಕರ್‌ನೆ ಕೇ ಲಿಯೆ ವಕ್ತ್ ಕಮ್ ಪಡತೆ ಹೈ ತೊ, ಉಸೆ ನಫರತ್ ಕರನೆ ಮೆ ಕ್ಯೂ ಬರ್‌ಬಾದ್ ಕರ್‌ತೆ ಹೊ?' (ನಿನಗೆ ಪ್ರೀತಿ ಮಾಡಲು ಸಮಯವೇ ಇಲ್ಲವೆಂದಾದರೆ, ಅದನ್ನು ದ್ವೇಷ ಮಾಡಲು ಯಾಕೆ ಹಾಳು ಮಾಡುತ್ತೀಯಾ?) ಓದಿದಾಗಲಿಂದ ಯಾಕೋ ಬಹಳ ನನ್ನನ್ನು ಕಾಡುತ್ತಿದೆ..

ಬಹುಶಃ ಮುಂದೊಂದು ದಿನ ಈ ಡೈರಿಯನ್ನು ತೆರೆದು ಓದಿದರೆ ಮನುಷ್ಯರ ವಿರುದ್ಧ ದೂರಿನ ಒಂದು ದೊಡ್ಡ ಪಟ್ಟಿಯಂತೆ ಇರುತ್ತದೆಯೆನೋ! ಅಷ್ಟು ವಕ್ರಗಳನ್ನು ಕಾಣುತ್ತಿದ್ದೇನೆ ಈ ಮಾನವರಲ್ಲಿ. ಮನದಲ್ಲಿ ದಯೆ, ಪ್ರೀತಿ, ಮಮತೆಗಳಂತಹ ಉನ್ನತ ಗುಣಗಳನ್ನು ಸೃಷ್ಟಿಸಿದ ದೇವರು ಈ ಅಸೂಯೆ, ದ್ವೇಷ, ಹಿಂಸೆ, ಸ್ವಾರ್ಥಗಳನ್ನು ಏಕೆ ಇರಿಸಿದನೋ...

ದ್ವೇಷ ಅಸೂಯೆಗಳೂ ಒಮ್ಮೊಮ್ಮೆ ಒಳ್ಳೆಯದೇನೋ, ಆದರೆ ಇವುಗಳೇ ಉತ್ತಮ ಗುಣಗಳನ್ನು ನುಂಗಿ ಹಾಕುತ್ತವಲ್ಲ? ಇದು ಯಾಕೆ? ಪ್ರೀತಿ ಮಾಡಲು ಯಾರಿಗೂ ಸಮಯವಿಲ್ಲ. ಅದೇ ಏನಾದ್ರೂ ಜಗಳ, ದ್ವೇಷ ಮಾಡುವುದಿದ್ದರೆ ಎಲ್ಲರೂ ಒಂದಾಗಿಬಿಡುತ್ತಾರೆ! ಏನು ಕೂಗಾಟ, ಏನು ಪ್ರತಿಭಟನೆ...

ಇತಿಹಾಸ, ಮತ, ತತ್ವ, ಧರ್ಮ ಎಲ್ಲದರಲ್ಲೂ ಗೊಂದಲ. ದೇವರಿದ್ದಾನೆಯೋ ಇಲ್ಲವೋ, ನಂಬಿಕೆ ದೊಡ್ಡದೋ-ವಿಜ್ಞಾನವೋ, ಅಯೋಧ್ಯೆಯಲ್ಲಿ ಬಾಬ್ರಿ ಮಸೀದಿ ಇರಬೇಕೋ-ರಾಮ ಮಂದಿರವಿರಬೇಕೋ,ಬಸವಣ್ಣ ಯಾವ ಜಾತಿಯವನು, ಟಿಪ್ಪು ದೇಶಪ್ರೇಮಿಯೋ-ದ್ರೋಹಿಯೋ, ಮೊಘಲರು ಹಿಂದೂ ದೇವಾಲಯಗಳನ್ನು ಒಡೆದರೋ- ಇಲ್ಲವೊ..

ಯಾವನೋ ಒಬ್ಬ ಬುದ್ಧಿಜೀವಿ ಅನ್ನಿಸಿ(ಅಂದು)ಕೊಂಡವನು ತನ್ನ ವಿಚಾರ ಮಂಡಿಸುತ್ತಾನೆ. ಅವನದೊಂದು ಪಂಗಡ. ಅವನ ವಿರುದ್ಧ ವಿಚಾರದವನದೊಂದು ಪಂಗಡ. ಎಲ್ಲರಿಗೂ ತಮ್ಮ ವಾದವೇ ಸರಿ, ಕೊನೆ. ಅವರವರ ದೃಷ್ಟಿಯಲ್ಲಿ ಅವರವರ ವಿಚಾರ ಸರಿ. ಆದರೆ ಅದನ್ನು ಎಲ್ಲರೂ ಒಪ್ಪಲೇಬೇಕು ಎನ್ನುವ ಮನೋಭಾವ ಯಾಕೆ? ನಾನ್‌ಸೆನ್ಸ್!! ಯಾರ ಉದ್ಧಾರಕ್ಕಾಗಿ ಇವೆಲ್ಲ? ಈ ವಾದಗಳು ಹೊಟ್ಟೆತುಂಬಿಸುತ್ತವಾ? ಒಂದು ವೇಳೆ ದೇವರಿದ್ದಾನೆ ಎಂದು ಎಲ್ಲರೂ ಒಪ್ಪಿಕೊಂಡರೆ ದೇವರು ಬಂದು ಈ ಬಡತನ-ಕಷ್ಟಗಳನ್ನು ದೂರ ಮಾಡಿಬಿಡುತ್ತಾನಾ? ನಂಬಿಕೆಯೇ ದೊಡ್ಡದೆಂದು ಸಾಬೀತಾದರೆ ವಿಜ್ಞಾನದ ಬೆಳವಣಿಗೆ ನಿಂತು ಬಿಡುತ್ತದೆಯೆ?

ಬಸವಣ್ಣ ಕೆಳ ವರ್ಗದವನು ಎನ್ನುವುದೇ ಸತ್ಯವಾದರೆ ಅವನ ವಿಚಾರಗಳೂ ಕೀಳಾಗಿಬಿಡುತ್ತದೆಯೆ? ಮೊಘಲರು ಹಿಂದೂ ದೇವಾಲಯಗಳನ್ನು ಕೆಡವಿದ್ದುಹೌದಾದರೆ ಮೊಘಲರು ಮತ್ತೆ ಬಂದು ಆ ದೇವಾಲಯಗಳನ್ನು ಕಟ್ಟಿಕೊಡಲು ಸಾಧ್ಯವೇ? ಅಯೋಧ್ಯೆಯಲ್ಲಿ ಮಸೀದಿ ಮಂದಿರ ಎರಡನ್ನೂ ಕಟ್ಟಲು ಸಾಧ್ಯವಿಲ್ಲವೆ. ಬಸವಣ್ಣನ ಜಾತಿಯಾವುದಾದರೇನು ಅವರ ಉನ್ನತ ವಿಚಾರಗಳನ್ನು ಜಾತಿ ಮಂಕು ಮಾಡಲು ಸಾಧ್ಯವಿಲ್ಲ. ಯಾರು ಕೆಡವಿದರು ಯಾರು ಕಟ್ಟಿದರು ಎಂದು ಚರ್ಚಿಸುವುದಕ್ಕಿಂತ ನಮ್ಮ ಶ್ರೇಷ್ಠ ಸಂಸ್ಕೃತಿ ವಿಚಾರಗಳನ್ನು ಉಳಿಸಿ ಬೆಳೆಸಿಕೊಳ್ಳಲು ಪ್ರಯತ್ನಿಸುವುದು ಒಳ್ಳೆಯದು.

ಯಾರೂ ದ್ವೇಷವನ್ನು ಬಯಸುವುದಿಲ್ಲ. ಎಲ್ಲರಿಗೂ ಪ್ರೀತಿ, ಶಾಂತಿ ಬೇಕು. ಆದರೆ ಕೇವಲ ’ಬೇಕು ಎಂದರೆ ಆಯಿತೆ, ತನ್ನಿಂದಲೂ ಅದನ್ನು ಬೇರೆಯವರು ಬಯಸುತ್ತಾರೆಎನ್ನುವುದನ್ನು ಮರೆತುಬಿಡುತ್ತಾರೆ... ಹೌದು, ನಾನು ಇನ್ನೂ ಪ್ರಪಂಚವನ್ನು ಸರಿಯಾಗಿ ನೋಡಿಲ್ಲ. ಜೀವನಕ್ಕೆ ನೇರ ಮುಖಾಮುಖಿಯಾಗಿಲ್ಲ. ಚಿಂತನೆ ನಡೆಸುವಷ್ಟು ಅನುಭವಿಯೂ ನಾನಲ್ಲ. ಪರಿಸ್ಥಿತಿಗಳು ನನ್ನನ್ನು ಬದಲಿಸಬಹುದು. ಆದರೆ ಈ ಕ್ಷಣಕ್ಕೆ ನನಗೆ ಇದೇ ಸತ್ಯ, ಈ ವಿಚಾರವೇ ಸರಿ. ಖಂಡಿತ ಈ ವಿಚಾರಗಳನ್ನು ಯಾರೂ ಒಪ್ಪಬೇಕಾಗಿಲ್ಲ.

Saturday, September 4, 2010

ದೊಡ್ಡವರೆಲ್ಲ ಜಾಣರಲ್ಲ. ..

ಅಜ್ಜ ಮೊಮ್ಮಕ್ಕಳ ನಡುವೆ ಸಾಮಾನ್ಯವಾಗಿ ಒಂದು ಮಧುರ ಬಾಂಧವ್ಯವಿರುತ್ತದೆ. ಮೊಮ್ಮಗುವಿನ ತಪ್ಪು ಅಜ್ಜನಿಗೆ ತಪ್ಪಾಗಿ ಕಾಣಿಸದೆ ಬಾಲಲೀಲೆಯಂತೆ ಕಾಣಿಸುತ್ತದೆ. ಮೊಮ್ಮಗುವಿಗಂತೂ ಅಜ್ಜನೇ ಪ್ರಪಂಚ.

ಆದರೆ ಈ ಮಾದಜ್ಜ ಮಾತ್ರ ಸ್ವಲ್ಪ ವಿಚಿತ್ರ. ಶ್ರೀಮಂತ ಒಂಟಿ ಮುದುಕ. ಅವನ ಆರಡಿಯ ಗೌರವ ವರ್ಣದ ದೇಹ ನೋಡಿದರೇ ಭಯ-ಭಕ್ತಿ ಉಂಟಾಗುತ್ತಿತ್ತು. ಯಾರನ್ನೂ ಸುಲಭಕ್ಕೆ ನಂಬುವುದಿಲ್ಲ. ಯಾರನ್ನು ಹಚ್ಚಿಕೊಳ್ಳುತ್ತಲೂ ಇರಲಿಲ್ಲ. ವೇದ-ತರ್ಕ ಅಂತ ಬಹಳ ಓದಿಕೊಂಡಿದ್ದ. ಸಿಕ್ಕಾಪಟ್ಟೆ ಮಡಿ, ತಾಸುಗಟ್ಟಲೆ ದೇವರಪೂಜೆ ಮಾಡುತ್ತಿದ್ದ. ಅವನಿಗೆ ಎದುರು ಹೇಳುವವರೇ ಇಲ್ಲ.

ನಮಗೆ ದೂರದ ಸಂಬಂಧಿ. ಒಂಟಿತನ ಬೇಸರ ತರಿಸಿದಾಗಲೆಲ್ಲ ನಮ್ಮ ಮನೆಗೆ ಬರುತ್ತಾನೆ. ಅವನು ಬಂದ ಎಂದರೆ ಎಲ್ಲರಿಗೂ ತಲೆನೋವು. ಆದರೂ ಪಾಪ ವಯಸ್ಸಾಗಿದೆ. ಹಿಂದೆ ಮುಂದೆ ದಿಕ್ಕಿಲ್ಲದವನು ಎಂದು ಉಪಚರಿಸುತ್ತಿದ್ದರು.

ಅದರಲ್ಲೂ ಮಕ್ಕಳಿಗಂತೂ ಬಹಳ ಕಿರಿಕಿರಿ. ಪ್ರತಿಯೊಂದಕ್ಕೂ ಮಾದಜ್ಜನ ಗೊಣಗಾಟವಿರುತ್ತಿತ್ತು. ಮಕ್ಕಳು ಅವನ ಎದುರು ಹಾದು ಹೋದರೂ ಸಾಕು ಮಾದಜ್ಜನ ಬಾಯಿಗೆ ಅವರು ಬಿದ್ದರು ಅಂತಲೇ ಅರ್ಥ. ಮಾದಜ್ಜ ಬಂದ ಅಂದರೆ ಸಾಕು ನಾವು ಮಕ್ಕಳೆಲ್ಲ ಇಲಿ ತರಹ ಮೂಲೆ ಸೇರಿಕೊಂಡುಬಿಡುತ್ತಿದ್ದೆವು. ಅವನ ಬೈಗುಳಗಳೇ ಹಾಗಿರುತ್ತಿದ್ದವು. ನಮ್ಮ ಆತ್ಮವಿಶ್ವಾಸ, ನಗು ಎಲ್ಲ ಅವನ ಬೈಗುಳದ ಎದುರು ಪುಡಿಪುಡಿ ಆಗಿಬಿಡುತ್ತಿದ್ದವು. ಯಾವ ಕ್ಷಣದಲ್ಲಿ ಮಾದಜ್ಜನ ಬೈಗುಳ ಬಂದು ಎರಗುತ್ತೋ ಅಂತ ಟೆನ್ಷನ್‌ಲೇ ದಿನ ಕಳೆಯುತ್ತಿದ್ದೆವು.

ಒಂದು ಶನಿವಾರ ಮನೆಗೆ ಹೋದಾಗ ಮಾದಜ್ಜನೂ ಬಂದಿದ್ದ. ಅವನನ್ನು ನೋಡಿದಾಕ್ಷಣ ನನ್ನ ಅರ್ಧ ಉತ್ಸಾಹ ಬತ್ತಿಹೋಗಿತ್ತು. ನಾನು ಫ್ರಾಕು ಬಿಟ್ಟು ಚೂಡಿದಾರ ಹಾಕಿ ಕಾಲೇಜಿಗೆ ಹೋಗಲು ಪ್ರಾರಂಭಿಸಿದ ಮೇಲೆ ಇದೇ ಮೊದಲ ಬಾರಿಗೆ ಅವನು ನನ್ನನ್ನು ನೋಡಿದ್ದು. ಮೇಲಿನಿಂದ ಕೆಳಗಿನವರೆಗೆ ಒಮ್ಮೆ ನೋಡಿ, "ಈ ಕಾಲದ ಹೆಣ್ಣುಮಕ್ಕಳೋ, ಅವರ ವೇಷವೋ ಎಂದು ಮೂಗು ಮುರಿದ. ಒಮ್ಮೆಲೇ ಸಿಟ್ಟು ಬಂತು. ಆದರೂ ಅಮ್ಮ ಹೇಳುತ್ತಿದ್ದ 'ಮನುಷ್ಯನ ವ್ಯಕ್ತಿತ್ವಕ್ಕೆ ಗೌರವವಿಲ್ಲದಿದ್ದರೂ ಕೊನೇ ಪಕ್ಷ ಅವನ ವಯಸ್ಸಿಗಾದರೂ ಗೌರವ ನೀಡಬೇಕು' ಎನ್ನುವ ಮಾತು ನೆನಪಾಗಿ ಸುಮ್ಮನಾದೆ.

ಅಡುಗೆ ಮನೆಗೆ ಓಡಿಹೋದವಳೇ ಅಮ್ಮನ ಕುತ್ತಿಗೆಗೆ ಜೋತುಬಿದ್ದು ಕಾಲೇಜಿನ ಕಥೆ ಎಲ್ಲ ಹೇಳುತ್ತ ಜೋರಾಗಿ ನಗುತ್ತಿದ್ದೆ. ಮತ್ತೆ ಮಾದಜ್ಜನ ಪ್ರವೇಶವಾಯಿತು. 'ಈಗಿನ ಕಾಲದ ಮಕ್ಕಳಿಗೆ ಹಿರಿಯರು ಅನ್ನುವ ಗೌರವವೇ ಇಲ್ಲ. ನಾವೆಲ್ಲ ಅಪ್ಪ ಅಮ್ಮರಿಂದ ಮಾರು ದೂರ ನಿಂತುಮಾತನಾಡುತ್ತಿದ್ದೆವು' ಎಂದು ಗೊಣಗಿದ. ಇವತ್ತು ಸುಮ್ಮನಿರಲು ಸಾಧ್ಯವೇ ಇಲ್ಲ ಎನ್ನುವಷ್ಟು ಕೋಪ ಬಂತು. ಅಮ್ಮನ ಕಣ್ಸನ್ನೆ ನೋಡಿ ನನ್ನ ಪಾಡಿಗೆ ನಾನು ಹೋದೆ.

ಚಿಕ್ಕಂದಿನಿಂದಲೂ ಅಣ್ಣನ ಅಂಗಿ-ಪ್ಯಾಂಟು ಅಂದರೆ ನನಗಿಷ್ಟ. ಅದನ್ನು ಮನೆಯಲ್ಲಷ್ಟೇ ಹಾಕುತ್ತಿದ್ದೆ. ಅದಕ್ಕೆ ಯಾರ ತಕರಾರೂ ಇರಲಿಲ್ಲ. ಮಾದಜ್ಜ ನೋಡಿದವನೇ 'ನಿನ್ನಲ್ಲಿ ಒಂದೂ ಹುಡುಗಿಯರ ಲಕ್ಷಣವೇ ಇಲ್ಲ ಎಂದು ಜರೆದ. ಮಾದಜ್ಜನ ಮಾತು ನನ್ನಲ್ಲಿದ್ದ ಸ್ವಾಭಿಮಾನ, ಸ್ತ್ರೀತ್ವ ಕೆಣಕಿದಂತಾಯಿತು.

ಎಲ್ಲಿತ್ತೋ ಧೈರ್ಯ ಗೊತ್ತಿಲ್ಲ. 'ಮಾದಜ್ಜ, ಸ್ತ್ರೀತ್ವವನ್ನು ಅಳೆಯುವ ಮಾಪಕ ಯಾವುದು? ನಿನ್ನ ಪ್ರಕಾರ ಯಾವ ಲಕ್ಷಣ ಇದ್ದರೆ ಅವಳು ಸ್ತ್ರೀ ಆಗುತ್ತಾಳೆ? ಎಂದು ಸ್ವಲ್ಪ ಜೋರಾಗಿ ಕೇಳಿದ್ದೆ. ಮಾದಜ್ಜ ನನ್ನ ಅನಿರೀಕ್ಷಿತ ಪ್ರಶ್ನೆಯಿಂದ ಕಂಗಾಲಾಗಿಬಿಟ್ಟಿದ್ದ. ಉತ್ತರಕ್ಕಾಗಿ ಮಾದಜ್ಜ ತಡವರಿಸುತ್ತಿದ್ದಾಗಲೆ ನಾನು ಮುಂದುವರಿಸಿದೆ.

'ತಲೆ ಬಗ್ಗಿಸಿಕೊಂಡು, ಗಟ್ಟಿಯಾಗಿ ಮಾತನಾಡದೆ, ಜೋರಾಗಿ ನಗದೆ ಇದ್ದುಬಿಡುವುದೇ ಹುಡುಗಿಯರ ಲಕ್ಷಣವಾ? ಒಬ್ಬಳು ಹೂವು ಮುಡಿದುಕೊಂಡು, ದೊಡ್ಡ ಕುಂಕುಮ ಇಟ್ಟು ಕೈತುಂಬ ಬಳೆ ತೊಟ್ಟುಕೊಂಡು ಮನದ ತುಂಬ ಹುಳುಕು ತುಂಬಿಕೊಂಡರೆ ಅವಳು ನನ್ನ ಪ್ರಕಾರ ಸ್ತ್ರೀಯೇ ಅಲ್ಲ! ಸಹನೆ, ಆದರಾತಿಥ್ಯ, ಬೇರೆಯವರ ಕಷ್ಟಕ್ಕೆ ಸ್ಪಂದಿಸುವುದು, ಎಲ್ಲರನ್ನೂ ಸಮಾನವಾಗಿ ನೋಡುವುದು ಇವೆಲ್ಲ ಸ್ತ್ರೀ ಆದವಳಲ್ಲಿ ಇರಬೇಕಾದದ್ದು. ಅದು ನನ್ನಲ್ಲಿದೆ!! ಎಂದು ಆವೇಶದಿಂದ ಕೂಗಿದ್ದೆ.

ಮಾದಜ್ಜ ಮರು ಮಾತಾಡಲಿಲ್ಲ. ಅಪ್ಪ ಅಮ್ಮ ನನ್ನ ಕೂಗಾಟ ಕೇಳಿ ಓಡಿಬಂದಿದ್ದರು. ಅಮ್ಮ ನನಗೆ ಬೈದು ಮಾದಜ್ಜನ ಕ್ಷಮೆ ಕೇಳಲು ಹೇಳಿದಳು. ನಾನು ಒಲ್ಲದ ಮನಸ್ಸಿನಿಂದ ತಪ್ಪಾಯ್ತು ಅಂತಲೂ ಹೇಳಿದ್ದೆ. ಇವತ್ತು ಮಾದಜ್ಜ ಬಂದಿದ್ದ. ಸರಿಯಾಗೇ ಮಾತನಾಡಿಸಿದೆ. ಆದರೆ ಮುಖ ತಿರುಗಿಸಿಕೊಂಡ. ಅವನನ್ನು ಬದಲಾಯಿಸುವ ಅಗತ್ಯ ನನಗಿಲ್ಲ. ಅದು ಸಾಧ್ಯವೂ ಇಲ್ಲ. ವಯಸ್ಸು ಹೆಚ್ಚಿದರೆ, ದೊಡ್ಡ ದೊಡ್ಡ ಗ್ರಂಥ ಪಠಿಸಿದ ಮಾತ್ರಕ್ಕೆ ಮನಸ್ಸು ಬೆಳೆಯದು.

Monday, August 30, 2010

ಎಲ್ಲಿ ಹೋಯಿತು ಆ ಸಂಭ್ರಮಾಚರಣೆ?

ಪುಟ್ಟ ಮಕ್ಕಳಿರುವಾಗ ಅಗಸ್ಟ್ ೧೫, ಜನವರಿ ೨೬, ಗಾಂಧಿ ಜಯಂತಿ, ಮಕ್ಕಳ ದಿನಾಚರಣೆ ಯಾವುದೇ ವಿಶೇಷ ದಿನ ಇರಲಿ, ಎಷ್ಟು ಸಂಭ್ರಮವಿತ್ತು.. ಎರಡು ದಿನ ಮೊದಲಿನಿಂದಲೇ ತಯಾರಿ ಶುರುವಾಗುತ್ತಿತ್ತು.

ಬೆಳ್ಳನೆಯ ಹೊಚ್ಚ ಹೊಸ ಬ್ಲೌಸು, ನೀಲಿ ಲಂಗ.. ಮನ ತುಂಬಾ ಉತ್ಸಾಹ. "ಪೂಜೆ ಮಾಡಲಾದರೂ ಸ್ವಲ್ಪ ಹೂ ಇಡೆ" ಎಂಬ ಅಜ್ಜಿಯ ಕೂಗನ್ನೂ ಕಿವಿ ಮೇಲೆ ಹಾಕಿಕೊಳ್ಳುತ್ತಿರಲಿಲ್ಲ. ಮನೆಯ ದೇವರ ಪಾಲಿನ ಹೂವೆಲ್ಲ ಶಾಲೆಗೆ ಸೇರುತ್ತಿದ್ದವು. ಯಾರು ಹೆಚ್ಚಿಗೆ ಹೂವನ್ನು ತರುತ್ತಾರೆ ಎಂದು ನಮ್ಮ ನಮ್ಮಲ್ಲೇ ಕಾಂಪಿಟೇಶನ್.

ಈ ದಿನಾಚರಣೆಗಳು ಬಂದರೆ ಮನೆಯ ಹಿರಿಯರಿಗೆಲ್ಲ ತಲೆನೋವು. ಭಾಷಣ ಬರೆದುಕೊಡು ಎಂದು ಎಲ್ಲರಿಗೂ ದುಂಬಾಲು ಬೀಳುತ್ತಿದ್ದೆವು. 'ಮಾನ್ಯ ಅಧ್ಯಕ್ಷರೇ, ಪೂಜ್ಯ ಗುರುಗಳೇ..'ಎಂದು ಒಂಚೂರೂ ತಪ್ಪದಂತೆ ಕಷ್ಟಪಟ್ಟು ಉರುಹೊಡೆದು ಶಿಕ್ಷಕರಿಗೆ ಒಪ್ಪಿಸುವುದೇ ಒಂದು ಪ್ರಿಯ ಸಾಹಸವಾಗಿತ್ತು.

ಊರ ಹಿರಿಯರೊಬ್ಬರಿಗೇ ಅಧ್ಯಕ್ಷರ ಸ್ಥಾನ ಮೀಸಲಾಗಿರುತ್ತಿತ್ತು. ಪ್ರತಿ ವರ್ಷ ಅದೇ ಅಧ್ಯಕ್ಷರು, ಅದೇ ಭಾಷಣ ವರ್ಷವೊಂದು ಬದಲಾಗಿರುತ್ತಿತ್ತು ಅಷ್ಟೇ. ಉತ್ಸಾಹ ಮಾತ್ರ ಸ್ವಲ್ಪವೂ ಕಡಿಮೆಯಾಗುತ್ತಿರಲಿಲ್ಲ.

ಈ ದಿನಾಚರಣೆಗಳ ಉತ್ಸಾಹ ಒಂದು ರೀತಿಯದ್ದಾದರೆ ಚೌತಿ, ದೀಪಾವಳಿ, ಯುಗಾದಿ ಹಬ್ಬಗಳದ್ದೇ ಇನ್ನೊಂದು ರೀತಿ. ಹಬ್ಬ ಅಮ್ಮನ ಸುತ್ತಮುತ್ತ ತಿರುಗುತ್ತ, ಎಷ್ಟು ಹೊತ್ತಿಗೆ ಆ ಕಜ್ಜಾಯಗಳೆಲ್ಲ ನಮ್ಮ ಕೈಸೇರುತ್ತವೆಯೋ ಎಂಬ ತವಕ. ಜೀವ ಹೋಗುತ್ತದೆ ಎಂಬಷ್ಟು ಹೆದರಿಕೆಯಾದರೂ ಪಟಾಕಿ ಹೊಡೆಯುವ ಕಾತರ. ಹಬ್ಬದ ಮರುದಿನ ಮನೆ ತುಂಬ ಸೇರುವ ನೆಂಟರು. ಮಾತು ಬಿಟ್ಟು ಅದೆಷ್ಟು ದಿನಗಳಾಗಿವೆಯೋ ಎಂಬಂತೆ ಮಾತು.. ಮಾತು.. ಮಾತು.

ಉದ್ದದ ಊಟದ ಪಂಕ್ತಿ. ಒಂದು ಕಡೆ ಸೇರುವ ಮಕ್ಕಳ ಕೂಟ. ಆಹಾ ಎಷ್ಟು ಸುಂದರ ದಿನಗಳು.. ಆ ಎಳೇ ವಯಸ್ಸಿನಲ್ಲಿ ಹಬ್ಬಗಳ ಆಕರ್ಷಣೆಯೇ ಹಾಗಿರುತ್ತಿತ್ತು.

ಆದರೆ ಕೆಲವೇ ವರ್ಷಗಳಲ್ಲಿ ಅದೆಂತಹ ಬದಲಾವಣೆ! ಒಂದರೆಡು ದಿನ ನೆಂಟರಿಷ್ಟರೊಂದಿಗೆ ಸೇರಿ ಕಾಲ ಕಳೆಯಲು ಯಾರಿಗೂ ಟೈಮಿಲ್ಲ. ಮನೆ ಬಿಟ್ಟು ಬಹಳ ದಿನ ಇರುವಂತಿಲ್ಲ. ಏಕೆಂದರೆ ಇದು ವಿಭಕ್ತ ಕುಟುಂಬದ ಅನಿವಾರ್ಯತೆ. ಅಷ್ಟು ಒತ್ತಾಯ ಮಾಡಿ ಕರೆದರೆ ಊಟದ ಹೊತ್ತಿಗೆ ಬಂದು ಊಟ ಮುಗಿಸಿ ತಕ್ಷಣ ತಿರುಗಿ ಮನೆಗೆ. ಹರಕೆ ತೀರಿಸಲು ಬಂದವರಂತೆ ಭೇಟಿ. ತಮ್ಮವರ ಜೊತೆಗೆ ಮನ ಬಿಚ್ಚಿ ಮಾತನಾಡುವುದಿರಲಿ, ನಗಲೂ ಸಲುಗೆ ಇಲ್ಲ! ಇನ್ನು ಬಂದ ಮಕ್ಕಳಿಗೋ, ತಮಗೆ ಇವರೆಲ್ಲ ಏನು ಆಗಬೇಕೆಂದು ತಿಳಿಯದಷ್ಟು ಗೊಂದಲ.

ಇನ್ನು ರಾಷ್ಟೀಯ ದಿನಾಚರಣೆಗಳೋ... ಅವು ಕೇವಲ ಈಗ ರಜಾ ದಿನಗಳು ಅಷ್ಟೇ! ಅವತ್ತು ಫುಲ್ ರಿಲೀಫ್. ಹೈಸ್ಕೂಲ್ ತನಕ ಶಿಕ್ಷಕರ ಹೆದರಿಕೆಯಿಂದಲಾದರೂ ಹೋಗುತ್ತಿದ್ದೆವು. ಈಗ ಕಾಲೇಜಿಗೆ ಬಂದಮೇಲೆ ಅದೆಲ್ಲ ಸಿಲ್ಲಿ.. ಪ್ರಿನ್ಸಿ, ಕೆಲವು ಲೆಕ್ಚರರ್‌ಗಳು, ಅಟೆಂಡರುಗಳು ಕಾಟಾಚಾರಕ್ಕೆ ಎಂಬಂತೆ ಧ್ವಜ ಹಾರಿಸುತ್ತಾರೆ.

ಮನುಷ್ಯ ಬೆಳೆದಂತೆ ಯಾಕೆ ಈ ಎಲ್ಲ ಬದಲಾವಣೆ? ಈ ಆಚರಣೆಗಳು, ಸಂಭ್ರಮ ಕೇವಲ ಮಕ್ಕಳಿಗೆ ಮಾತ್ರವೇ ಸೀಮಿತವೆ?!

Tuesday, August 24, 2010

ಇತ್ತೀಚೆಗೆ ನನ್ನ ಡೈರಿಯ ತುಂಬ ಅವನೆ...

ವಿವೇಕ್.. ವಿವೇಕ್ ಇದೇ ಹೆಸರು ಅದೆಷ್ಟು ಸಾರಿ ಬರೆದುಕೊಂಡಿದ್ದೆನೋ...ಯಾಕೆ ಕಾಡ್ತಾನೆ ಅವನು ನನ್ನನ್ನು ಈ ರೀತಿ? ನಿಜವಾಗಿಯೂ ಅವನ ಮೇಲೆ ಪ್ರೀತಿ ಆಗಿಬಿಟ್ಟಿದೆಯಾ? ಹೀಗೆಲ್ಲಾ ಅಂದುಕೊಂಡ್ರೆ ಯಾಕೋ ತುಂಬ ಭಯ ಆಗುತ್ತೆ...

ಏನೋ ತಪ್ಪು ಕೆಲಸ ಮಾಡ್ತಾ ಇದ್ದೇನೆ ಅನಿಸುತ್ತೆ. ಅಪ್ಪ ಅಮ್ಮನಿಗೆ ಮೋಸ ಮಾಡ್ತಾ ಇದೀನೆನೋ ಅಂತ ಫೀಲ್ ಆಗುತ್ತೆ. ನನ್ನ ವಯಸ್ಸಾದ್ರೂ ಏನು? ಈಗಿರೋ ನನ್ನ ಜವಾಬ್ದಾರಿ ಆದ್ರೂ ಏನು? ಚೆನ್ನಾಗಿ ಓದಲಿ ಮಗಳು ಅಂತ ಅಪ್ಪ ಅಮ್ಮ ಕಾಲೇಜಿಗೆ ಕಳಿಸಿದ್ರೆ ನಾನು ಮಾಡ್ತಾ ಇರೋದಾದ್ರೂ ಏನು! ಡೈರಿ ತುಂಬ ವಿವೇಕನ ಹೆಸರನ್ನು ಬರೆಯುತ್ತ ಕುಳಿತಿರೋದು!!

ಛೇ.. ನನ್ನ ಮೇಲೆ ನನಗೇ ಬೇಜಾರು ಆಗ್ತಾ ಇದೆ. ದಿನವಿಡೀ ಮೂಡೇ ಇಲ್ಲ. ಈಗಾಗಲೇ ಕುಮ್ಮಿಗೂ ನನ್ನ ಮೇಲೆ ಅನುಮಾನ ಮೂಡಿದೆ. Guilt ನಿಂದ ಮನೆಗೆ ಹೋದರೆ ಅಪ್ಪನ ಮುಖ ನೋಡಿ ಮಾತನಾಡೋಕೂ ಹೆದರಿಕೆ. ಯಾವುದಕ್ಕೂ ಒಂದು ಸಾರಿ ಶೀಲಕ್ಕನ ಭೇಟಿ ಮಾಡಿ ಮಾತನಾಡುವುದು ಒಳ್ಳೆಯದು.

ಇಂತಹದ್ದಕ್ಕೆಲ್ಲ ಶೀಲಕ್ಕನ ಬಿಟ್ಟು ಇನ್ಯಾರನ್ನು ಕೇಳಲಿ? ಅವಳು ಮಾತ್ರ ನನ್ನ ಪ್ರಶ್ನೆಗೆ ಉತ್ತರ ಕೊಡಬಲ್ಲಳು. ಈ ವಾರ ಮನಗೆ ಹೋದಾಗ ನನ್ನ ಪುಣ್ಯ ಎಂಬಂತೆ ದೂರದ ಊರಲ್ಲಿ ಕಲಿಯುತ್ತಿದ್ದ ಶೀಲಕ್ಕ ಕೂಡ ಬಂದಿದ್ದಳು. ಕಂಡಕೂಡಲೇ ನೇರ ಸ್ವಭಾವದ ಶೀಲಕ್ಕ ನೇರವಾಗಿ ಕೇಳಿದ್ದಳು, "ಪಿಯುಸಿ ಅಂತೀಯಾ ಲವ್ವು-ಗಿವ್ವು ಏನೂ ಇನ್ನೂ ಮಾಡಿಲ್ವಾ?" ಎಂದು ಕೇಳ್ತಾ ತುಂಟ ನಗೆ ಬೀರಿದಳು.

ಇಷ್ಟು ದಿನ ಮನದಲ್ಲೇ ಇರಿಸಿಕೊಂಡಿದ್ದ ಗೊಂದಲ, ತಳಮಳ ಎಲ್ಲ ಶೀಲಕ್ಕನ ಈ ಪ್ರಶ್ನೆಯಿಂದ ಕಣ್ಣೀರಾಗಿ ಹೊರಬಂತು.
ಗಾಬರಿಯಿಂದ ಶೀಲಕ್ಕ ಹತ್ತಿರ ಓಡಿಬಂದಳು. "ಏನಾಯ್ತೆ ಸುಮಿ.." ಕಕ್ಕುಲಾತಿಯಿಂದ ಕೇಳಿದಳು. ಅಂದು ರಾತ್ರಿ ಬಸ್ಸು ಕೆಟ್ಟು ವಿವೇಕ್ ಮನೆಯ ತನಕ ಬಿಟ್ಟು ಹೋದದ್ದು, ಕಾಲೇಜ್‌ನಲ್ಲಿ ಅವನು ಬೇಕಾದಷ್ಟಕ್ಕೆ ಮಾತನಾಡೋದು, ಡೈರಿ ತುಂಬ ಅವನ ಹೆಸರನ್ನೇ ಬರೆದುಕೊಂಡಿರೋದು.. ಎಲ್ಲ ವಿವರವಾಗಿ ಹೇಳಿದೆ.

ಶೀಲಕ್ಕ ಸಣ್ಣದಾಗಿ ನಕ್ಕು, "ಅವನಿಗೆ ನಿನ್ನ ಪ್ರೀತಿಯ ವಿಷಯ ಗೊತ್ತಾ?" ನಾನು ಇಲ್ಲವೆಂದು ತಲೆಯಾಡಿಸಿದೆ. "ಮತ್ತೆ ನೀನು ಯಾಕೆ ಇಷ್ಟೆಲ್ಲ ಅತ್ತು, tension ಮಾಡಿಕೊಳ್ತಾ ಇದಿಯಾ? ನೋಡು, ಕಷ್ಟದಲ್ಲಿ ಇರೋ ಸ್ತ್ರೀಗೆ ಸಹಾಯ ಮಾಡೋದು ಪುರುಷರ ಸಹಜ ಗುಣ. ತನ್ನ ರಕ್ಷಣೆ ಮಾಡಿದ ಪುರುಷನ ಕಡೆ ಸ್ವಾಭಾವಿಕವಾಗಿ ಸ್ತ್ರೀ ಸೆಳೆಯಲ್ಪಡುತ್ತಾಳೆ. ಈಗ ನಿನಗಾಗಿರುವುದೂ ಅಷ್ಟೆ.

ಇದಕ್ಕೆ ನೀನು ವಿಶೇಷ ಅರ್ಥ ಹಚ್ಚಿ ತಲೆ ಕೆಡಿಸಿಕೊಳ್ಳುವ ಅಗತ್ಯವೇ ಇಲ್ಲ. ಮೊದಲು ಒಂದು ಹಂತದವರಗೆ ನಿನ್ನ ವಿದ್ಯಾಭ್ಯಾಸವನ್ನು complete ಮಾಡು. ಅಲ್ಲಿ ತನಕ ನಿನಗೆ ಯಾವುದು ಸರಿ, ಯಾವುದು ತಪ್ಪು, ಯಾವುದು ಪ್ರೀತಿ, ಯಾವುದು ಆಕರ್ಷಣೆ ಎಂದು ನಿರ್ಧರಿಸುವ ತಿಳುವಳಿಕೆ ಮೂಡಿರುತ್ತದೆ. ದುಡುಕ ಬೇಡ. ಎಳೇ ವಯಸ್ಸು ನಿಂದು. ನಾಳೆ ಕಾಲೇಜಲ್ಲಿ ಅವನನ್ನು ಸಹಜವಾಗಿ ಮಾತನಾಡಿಸು. ಅವನ ಮಾತುಗಳಿಗೆ ವಿಶೇಷ ಅರ್ಥ ಕಲ್ಪಿಸಬೇಡ. ಒಂದು ಒಳ್ಳೆಯ ಸ್ನೇಹ ಬೆಳೆಯಲಿ ನಿಮ್ಮಿಬ್ಬರ ನಡುವೆ... "

ಶೀಲಕ್ಕನ ಮಾತು ಕೇಳಿ ಒಮ್ಮೆ ಕಣ್ಣೆದುರು ಕಟ್ಟಿದ ಭ್ರಮೆಯ ಪೊರೆ ಕಳಚಿದಂತಾಯಿತು. ಇಲ್ಲದೆ ಹೋದದ್ದನ್ನೆಲ್ಲ ಕಲ್ಪಿಸಿಕೊಂಡು ಸುಮ್ಮನೇ ಕಾಲಹರಣ ಮಾಡಿದೆ. ನಾಳೆಯಿಂದ ಎಲ್ಲರ ಜೊತೆ ಹೇಗೆ ಇರುತ್ತೇನೋ ಅವನ ಜೊತೆಗೂ ಹಾಗೆ ಇರುತ್ತೇನೆ. ಈ ಪ್ರೀತಿಯ ಜಂಜಾಟವೆಲ್ಲ ಈಗಲೇ ಬೇಡ. ಹೊಸ ನಿರ್ಧಾರದೊಂದಿಗೆ, ಹೊಸ ಹುಮ್ಮಸ್ಸಿನಿಂದ ಶೀಲಕ್ಕನ ಮನೆಯಿಂದ ಹಿಂದಿರುಗಿದ್ದೆ.

Monday, July 26, 2010

ಇದೇನಾ ಪ್ರೀತಿಗೆ ಒಂದು ಸುಂದರ ಪ್ರತಿಕ್ರಿಯೆ

ಇದೇನಾ ಪ್ರೇಮ ಲೇಖನಕ್ಕೆ ಅಭಯ ಸಿಂಹ ಅವರು ನೀಡಿದ ಪ್ರತಿಕ್ರಿಯೆಯನ್ನು ಹಾಗೆ ಪ್ರಕಟಿಸಲು ಸಂತೋಷವಾಗುತ್ತಿದೆ. ನನ್ನ ಲೇಖನಿಗೆ ಇನ್ನಷ್ಟು ಸ್ಫೂರ್ತಿಯ ಇಂಕು ತುಂಬಿದ್ದಂತ್ತಾಗಿದೆ.  ಅಭಯ್ ಅವರ ಲೇಖನ ಓದಿ-ಸುಮಿ

ಹಿಂದೆ...

ಆಕೆ ರೂಪ. ನನಗೆ ಆಕೆಯ ಹೆಸರು ಗೊತ್ತು. ಆದರೆ ಆಕೆಗೆ ನನ್ನ ಹೆಸರೂ ಗೊತ್ತಿಲ್ಲ ಎನ್ನುವುದೂ ನನಗೆ ಚೆನ್ನಾಗೇ ಗೊತ್ತು. ಬಸ್ಸು ಹಾಳಾದಾಗ ನನ್ನಲ್ಲಿ ಸಹಾಯ ಕೇಳಲು ನಾಚುವಷ್ಟು ಅಪರಿಚಿತ ನಾನು ಆಕೆಗೆ. ಹೋಗಲಿ ನಾನೇ ಮಾತನಾಡಿಸುವೆ ಆಕೆಯನ್ನು ಎನ್ನುತ್ತಿರುವಾಗಲೇ, ನೀನೇ ನನ್ನ ಮಾತನಾಡಿಸಬಾರದೇ ಎನ್ನುವಂಥಾ ಕಡೆಕಣ್ಣ ನೋಟ ಬೀರಿದಳು ಆಕೆ ನನ್ನೆಡೆಗೆ. ನಾನು ಯಾಂತ್ರಿಕವಾಗಿ ಕೇಳಿದೆ, "ಈಗೇನು ಮಾಡುತ್ತೀರಿ?"
ಮುಂದಕ್ಕೆ...

ಆಕೆಯ ಕೆನ್ನೆಯ ಮೇಲೆ ಇನ್ನೇನು ನೀರಹನಿಗಳು ಉರುಳಲಿದ್ದವು. ಆದರೆ ಹುಡುಗಿಯರು ಹೀಗೆ ಇನ್ನೇನು ಅಳುವಂಥಾ ಅಸಹಾಯಕರಾಗಿರುವಾಗ ಎಷ್ಟು ಸುಂದರವಾಗಿ ಕಾಣಿಸುತ್ತಾರೆ ಎಂದು ಆಕೆಗೇನು ಗೊತ್ತು? ಆದರೆ ನಾನು ಸಾವರಿಸಿಕೊಂಡೆ. ಅಷ್ಟರಲ್ಲಿ ಆಕೆ "ಮನೆಯೂ ದೂರ... ಇಲ್ಲೆಲ್ಲೂ ಫೋನೂ ಇಲ್ಲ" ಎಂದಳು. ಹಾ! ದೂರದಲ್ಲೆಲ್ಲೂ ಹಾದು ಹೋಗುತ್ತಿದ್ದ ಕಾರೊಂದರ ಬೆಳಕಿನಿಂದ ಆಕೆಯ ಮುಂಗುರುಳು ಚಿನ್ನದ ಬಣ್ಣಕ್ಕೆ ತಿರುಗಿದ್ದವು. ಕಣ್ಣಾಲಿಗಳಲ್ಲಿ ತುಂಬಿದ್ದ ನೀರು ಕಣ್ಣಿಗೊಂದು ಹೊಸ ಹೊಳಪನ್ನೇ ನೀಡಿತ್ತು. ಆ ಒಂದು ಕ್ಷಣ ಆಕೆಗೆ ಸಹಾಯ ಮಾಡದೇ ಇನ್ನೇನೂ ದಾರಿಯೇ ಕಾಣಲಿಲ್ಲ ನನಗೆ. ನನಗೇ ಅರಿವಿಲ್ಲದಂತೆ ನನ್ನ ಬಾಯಿ ಉಲಿದಿತ್ತು, "ನಾನು ಬಿಟ್ಟು ಬಿಡಲಾ?"

ಒಂಟಿ ಹುಡುಗಿಯ ಮುಂದೆ ಹೀರೋ ಆಗುತ್ತಿದ್ದೇನೆಂದೇನಾದರೂ ಆಕೆ ಅಂದುಕೊಳ್ಳಬಹುದೇ? ಹೀಗೆ ಯೋಚನೆಯೊಂದು ಸುಳಿದು ಹೋಯಿತು ನನ್ನ ಮನಸಲ್ಲಿ. ಆದರೆ ಕೆಲವೊಮ್ಮೆ ಪರಿಸ್ಥಿತಿ ಹೇಗೆ ವಿಚಿತ್ರವಾಗಿರುತ್ತೆ ಅಂದ್ರೆ, ಕೆಟ್ಟ ಸಿನೆಮಾದಲ್ಲಿ ನೂರು ಬಾರಿ ನೋಡಿ ಹಳಸಿದ ದೃಶ್ಯವೂ ನಮ್ಮ ಜೀವನದಲ್ಲಿ ಅಷ್ಟೇ ಸ್ವಾಭಾವಿಕವಾಗಿ ಎದುರಾದರೂ ಅಸ್ವಾಭಾವಿಕವಾಗದಿರುವ ಹೋರಾಟ ನಡೆಸಿ ನಾವು ಪರಿಸ್ಥಿತಿಯನ್ನು ಚೋದ್ಯವನ್ನಾಗಿಸುತ್ತೇವಲ್ಲಾ! ಹಾ! ಎಂಥಾ ವೈಚಿತ್ರ್ಯ ಇದು! ನಮ್ಮಲ್ಲಿ ಇದ್ದಿದ್ದು ಒಂದೇ ಕೊಡೆ. ನನ್ನ ಕೈ ಆಕೆಯ ಕೈ ಮತ್ತೆ ಮತ್ತೆ ನನ್ನ ಕೈಗೆ ತಾಗುತ್ತಿತ್ತು. ನಾನೆಷ್ಟು ತಪ್ಪಿಸಿದರೂ ಮತ್ತೆ ಕೈ ತಾಗುತ್ತಿತ್ತು. ಒಂದು ಕ್ಷಣ, ಪರಿಸ್ಥಿತಿಯ ಉಪಯೋಗವನ್ನು ಪಡೆಯುತ್ತಿದ್ದಾಳೇಯೇ ಆಕೆ ಎಂದು ನನಗೇ ಅನುಮಾನವಾಯಿತು. "ನನ್ನಿಂದ ನಿಮಗೂ ತೊಂದರೆ..." ಎಂದಳು ಆಕೆ.

ನಾನು ಕೊಂಚ ನೇರವಾಗಿ "ಹೂಂ. ತೊಂದ್ರೆನೇ..ಆದ್ರೆ ನನ್ನ ತೊಂದ್ರೆಗಿಂತ ನಿಮ್ಮ ಫಜೀತಿ ಕಂಡು ಮರುಕ ಹುಟ್ಟಿತು. ಅದಕ್ಕಾಗಿ ಬಂದೆ. ಅಲ್ಲದೆ, ಇಂಥ ರಾತ್ರಿಯಲ್ಲಿ ಒಬ್ಬಳೇ ಹುಡುಗಿ ಹೋಗುವುದು ಸರಿ ಕಾಣಲಿಲ್ಲ" ಎಂದೆ. ನನ್ನ ಉದ್ದೇಶ ನೇರ ಎಂದು ತಿಳಿಸುವುದು ಅಗತ್ಯ ಎನಿಸಿತ್ತು ನನಗೆ. ಮಾತು ಹೊರಟ ನಂತರ, ಅಯ್ಯೋ! ಪಾಪ ತುಂಬಾ ತೀಕ್ಷ್ಣವಾಯಿತೇನೋ ನನ್ನ ಮಾತು ಎನಿಸಿ ತುಸು ಬೇಸರವಾಯಿತು. ಸುಮಾರು 5 ಕಿ.ಮೀ ದೂರ ಮೌನದ ಪಯಣ. ಆಕೆಯ ಮನೆಯ ದೀಪ ಕಾಣಿಸುತ್ತಿತ್ತು. ಅಪ್ಪ ಹೊರಗೇ ಕೂತು ಕಾಯುತ್ತಿದ್ದ. ಮುಖದಲ್ಲಿ ಆತಂಕದ ಕೋಪ. ಇನ್ನೇನು ಬೈಯಬೇಕು, ಅಷ್ಟರಲ್ಲಿ ನನ್ನನ್ನು ನೋಡಿ ಸುಮ್ಮನಾದರು.

"ಇವರ್ಯಾರು" ಕೇಳಿದರು ಅವರು. ಹ! ಆಕೆಗೆ ನನ್ನ ಹೆಸರೇ ಗೊತ್ತಿಲ್ಲವಲ್ಲಾ? ನಾನೇ ಹೇಳಿದೆ "ನಾನು... ವಿವೇಕ್" ಆಕೆ ನಡೆದದ್ದನ್ನೆಲ್ಲಾ ತನ್ನ ತಂದೆಗೆ ವಿವರಿಸಿದಳು. ನನಗೇನೂ ಕೇಳಿಸಲಿಲ್ಲ. ಆಕೆ ಕೈ ಆಡಿಸುತ್ತಾ, ದೊಡ್ಡದಾಗಿ ಕಣ್ಣು ಬಿಡುತ್ತಾ ಆಗಿದ್ದಕ್ಕೆ ಒಂದಿಷ್ಟು ರಂಗು ಸೇರಿಸುತ್ತಾ ಮಾತನಾಡುತ್ತಿದ್ದಾಗ ನಾವು ನಡೆದ ಐದು ಕಿಲೋಮೀಟರ್ ಒಂದು ರಾತ್ರಿಯಿಡೀ ನಡೆದ ಕಥೆಯಾಕಾಗಿರಬಾರದು ಎನಿಸಿತು ನನಗೆ. ಆದರೆ ಮರುಕ್ಷಣಕ್ಕೆ ಸ್ವಲ್ಪ ಸಿಲ್ಲಿ ಅನಿಸಿ ಅಲ್ಲಿಂದ ಹೊರಟೆ ನಾನು. ಅವರಲ್ಲೇ ರಾತ್ರಿ ಕಳೆಯುವಂತೆ ಅವರೆಲ್ಲರೂ ಒತ್ತಾಯ ಮಾಡಿದರೂ, ಪರಿಸ್ಥಿತಿಗೆ ನಾನು ತಲೆಕೊಟ್ಟರೆ ನದಿಯೊಂದರ ಸುಳಿಗೆ ಸಿಕ್ಕಿ ಚೂರಾಗುವ ಕುಂಬಾದ ಮರದ ಕೊಂಬೆಯಂತೆ ನಾನಾಗುವುದರಲ್ಲಿ ಸಂಷಯವೇ ಇರಲಿಲ್ಲ. ಹಾಗೇ ನಡೆದೆ, ಕೊಡೆ ಮಡಿಸಿ ಮಳೆಗೆ ತಲೆಕೊಟ್ಟು ನಡೆದೆ.

***

ಈ ಘಟನೆಯ ನಂತರ ಆಕೆ ನನಗೆ ಕಾಲೇಜಲ್ಲಿ ಸಿಕ್ಕಿದಾಗ ನಾನು ಆಕೆಯನ್ನು ಹೇಗೆ ಎದುರಿಸುವುದು ಎಂದು ಗೊತ್ತಾಗದೆ ತಬ್ಬಿಬ್ಬಾಗಿ ಮುಗುಳ್ನಕ್ಕೆ. ಆಕೆ ನರುನಕ್ಕಳು. ನಡೆದ ಆಘಟನೆ ಆಕೆಗೆ ನನ್ನ ಪರಿಚಯವನ್ನು ಮಾಡಿಸಿತ್ತು ಎನ್ನುವುದನ್ನು ಬಿಟ್ಟರೆ ಬೇರೇನೂ ಪ್ರಭಾವ ಆದಂತಿರಲಿಲ್ಲ ಆಕೆಯಲ್ಲಿ. ನನಗೆ ಆಕೆಯ ಇದೇ ಗುಣ ಇಷ್ಟವಾಗಿತ್ತು. ಹುಡುಗರಾಗಲಿ, ಹುಡುಗಿಯರಾಗಲಿ ಎಲ್ಲರನ್ನೂ ಚೆನ್ನಾಗಿ ನೋಡುವ, ಗೌರವಿಸುವ ಈ ಹುಡುಗಿ ನನಗಿಷ್ಟವಾಗಿದ್ದಳು. ಆದರೆ ಅದೇ ಕಾರಣಕ್ಕೆ ಆಕೆ ನನ್ನನ್ನು ವಿಶೇಷವಾಗಿ ಗುರುತಿಸಿ ಮಾತನಾಡಿಸುತ್ತಿರಲಿಲ್ಲ. ಆದರೆ ನನಗೆ ಮಾತ್ರ ದಿನದಿಂದ ದಿನಕ್ಕೆ ಅವನನ್ನು ಮಾತನಾಡಿಸುವ ಕಾತರ ಹೆಚ್ಚುತ್ತಿದೆ.

ಆದರೆ ವಿನಾಕಾರಣ ಹೇಗೆ ಮಾತನಾಡಿಸುವುದು? ನಾನೇ ಮೇಲೆ ಬಿದ್ದು ಮಾತನಾಡಿಸುವುದು ನನ್ನಿಂದಾಗದು. ಇಷ್ಟಕ್ಕೂ ನನಗೇಕೆ ಅವಳನ್ನು ಮಾತನಾಡಿಸಬೇಕು ಅನ್ನಿಸುತ್ತದೆ? ನಾನೇನಾದರೂ ಆಕೆಯನ್ನು ಪ್ರೀತಿಸುತ್ತಿದ್ದೇನಾ?! ಹಾಗಾದರೆ ಪ್ರೀತಿ ಅಂದರೆ ಹೀಗೆ ಇರುತ್ತಾ? ಇದ್ಯಾವುದಕ್ಕೂ ನನ್ನಲ್ಲಿ ಉತ್ತರವಿಲ್ಲ. ಇದಕ್ಕೆ ಉತ್ತರ ಕಂಡುಕೊಳ್ಳುವುದಾದರೂ ಹೇಗೆ?... ಇದೇನಾ ಪ್ರೇಮ...?

Thursday, July 22, 2010

ಇದೇನಾ ಪ್ರೇಮ?

ಹಿಂದೆ....
ಹೆಸರೇ ಸರಿಯಾಗಿ ಗೊತ್ತಿಲ್ಲದವನ ಬಳಿ ಏನು ಸಹಾಯ ಯಾಚಿಸುವುದು?! "ಈಗ ಏನು ಮಾಡುತ್ತೀರಿ?" ಎಂದು ಅವನಾಗಿಯೇ ಕೇಳಿದ.
ಮುಂದಕ್ಕೆ...

ನನಗೆ ಸಹಾಯ ಬೇಕಿತ್ತು. ಆದರೆ ಅವನನ್ನು ಕೇಳಲು ಮುಜುಗರ. ಕೆನ್ನೆಯ ಮೇಲೆ ಉರುಳಲು ಸಿದ್ಧವಾಗಿದ್ದ ಕಣ್ಣೀರನ್ನು ಕಷ್ಟಪಟ್ಟು ತಡೆಯುತ್ತ "ಮನೆಯೂ ದೂರ. ಇಲ್ಲೆಲ್ಲೂ ಫೋನೂ ಇಲ್ಲ...

ಏನು ಮಾಡಬೇಕೋ ತಿಳಿಯುತ್ತಿಲ್ಲ" ಎಂದೆ. ನನ್ನ ಮೇಲೆ ಅವನಿಗೆ ಅನುಕಂಪ ಮೂಡಿದ್ದು ಸ್ಪಷ್ಟವಾಗಿ ಕಾಣಿಸುತ್ತಿತ್ತು. "ನಾನು ಬಿಟ್ಟುಕೊಡಲಾ?" ಪ್ರಾಮಾಣಿಕವಾಗಿ ಕೇಳಿದ್ದ.

ಒಂಟಿ ಹುಡುಗಿಯ ಮುಂದೆ ಹೀರೋ ಆಗಬೇಕು ಎನ್ನುವ ಲಕ್ಷಣ ಯಾವುದೂ ಕಾಣಿಸಲಿಲ್ಲ. ನನಗೂ ಗತ್ಯಂತರವಿರಲಿಲ್ಲ. ನಾನೊಬ್ಬ ವಯಸ್ಸಿಗೆ ಬಂದ ಹುಡುಗಿ, ಈ ಅಪರಾತ್ರಿಯಲ್ಲಿ ಹೆಸರು ಕೂಡ ಸರಿಯಾಗಿ ಗೊತ್ತಿಲ್ಲದ ಯುವಕನ ಜೊತೆ ಹೋಗುತ್ತಿದ್ದೇನೆ. ಅಕ್ಕಪಕ್ಕದ ಮನೆಯವರು ಏನೆಂದುಕೊಂಡಾರು.. ಊಹುಂ.. ಇದ್ಯಾವುದೂ ನನ್ನ ಗಮನಕ್ಕೇ ಬರಲಿಲ್ಲ. ಯಾವುದೋ ಮೋಡಿಗೆ ಒಳಗಾದವಳಂತೆ ಅವನ ಜೊತೆನಡೆದೆ.

ಇದ್ದಿದ್ದು ಒಂದೇ ಛತ್ರಿ. ಎಷ್ಟು ಬೇಡವೆಂದರೂ ಅವನ ಮೊಣಕೈ ನನ್ನ ಕೈಗೆ ತಗಲುತ್ತಿತ್ತು. ಸುಮಾರು ದೂರ ಒಬ್ಬರಿಗೊಬ್ಬರು ಏನೂ ಮಾತನಾಡಿಕೊಳ್ಳಲಿಲ್ಲ. ಮಾತನಾಡುವುದಾದರೂ ಏನನ್ನು? ಬಹುಶಃ ಏನಾದರೂ ಮಾತನಾಡಿದರೆ ತನ್ನನ್ನು ಇವಳು ತಪ್ಪು ತಿಳಿದುಕೊಂಡಾಳು ಎನ್ನುವ ಭಾವನೆ ಬಂದಿರಬೇಕು ಅವನಿಗೆ. ನನಗೂ ಈ ಮೌನ ಅಸಹನೀಯ ಅನ್ನಿಸುತ್ತಿತ್ತು. ಔಪಚಾರಿಕವಾಗಿ "ನನ್ನಿಂದ ನಿಮಗೂ ತೊಂದರೆ..." ಎಂದೆ. 'ಹೇ, ಪರ್‍ವಾಗಿಲ್ಲ ಬಿಡಿ' ಎನ್ನುತ್ತಾನೆ ಅಂದುಕೊಂಡೆ.

ಆದ್ರೆ, "ಹೂಂ. ತೊಂದ್ರೆನೇ..ಆದ್ರೆ ನನ್ನ ತೊಂದ್ರೆಗಿಂತ ನಿಮ್ಮ ಫಜೀತಿ ಕಂಡು ಮರುಕ ಹುಟ್ಟಿತು. ಅದಕ್ಕಾಗಿ ಬಂದೆ. ಅಲ್ಲದೆ, ಇಂಥ ರಾತ್ರಿಯಲ್ಲಿ ಒಬ್ಬಳೇ ಹುಡುಗಿ ಹೋಗುವುದು ಸರಿ ಕಾಣಲಿಲ್ಲ... ಮತ್ತೇನೂ ಮಾತಿಲ್ಲ. ಸುಮಾರು 5 ಕಿ.ಮೀ ದೂರ ಮೌನದ ಪಯಣ. ನನ್ನ ಮನೆಯ ದೀಪ ಕಾಣಿಸುತ್ತಿತ್ತು.

ಅಂತೂ ಮನೆ ಸೇರಿದೆನಲ್ಲ ಅನ್ನೋ ಸಮಾಧಾನ. ಆದ್ರೆ ಇವನ ಜೊತೆ ಬಂದಿದ್ದಕ್ಕೆ ಮನೆಯಲ್ಲಿ ಏನು ಹೇಳುತ್ತಾರೋ ಎಂಬ ಭಯ. ಅಪ್ಪ ಹೊರಗೇ ಕೂತು ಕಾಯುತ್ತಿದ್ದ. ಮುಖದಲ್ಲಿ ಆತಂಕದ ಕೋಪ. ಇನ್ನೇನು ಬೈಯಬೇಕು, ಅಷ್ಟರಲ್ಲಿ ಅವನು ನನ್ನ ಹಿಂದೆ ಇದ್ದದ್ದನ್ನು ನೋಡಿದರು.

"ಇವರ್‍ಯಾರು?" ಅಪ್ಪ ಗೊಂದಲದಲ್ಲಿ ಕೇಳಿದ. "ಅಪ್ಪ ಇವರು ನನ್ನ ಕ್ಲಾಸ್‌ಮೇಟ್... ಆಗ ನೆನಪಾಯಿತು! ನನಗಿನ್ನೂ ಆತನ ಹೆಸರೇ ಗೊತ್ತಿಲ್ಲ! ಅವನೇ ಹೇಳಿಕೊಂಡ 'ವಿವೇಕ್' ಅಂತ. ನಂತರ ಮುಂದಿನ ಕತೆಯೆಲ್ಲ ವಿವರವಾಗಿ ಹೇಳಿದೆ. ಅಪ್ಪ-ಅಮ್ಮನಿಗೆ ಅಷ್ಟೇ ಅಲ್ಲ, ನನಗೂ ಕೂಡ ವಿವೇಕನ ಬಗ್ಗೆ ಒಳ್ಳೆಯ ಭಾವನೆ, ಕೃತಜ್ಞತೆ ಮೂಡಿಬಿಟ್ಟಿತ್ತು. ಆ ರಾತ್ರಿ ಇಲ್ಲೇ ಇರು ಎಂದು ಎಷ್ಟು ಹೇಳಿದರೂ ಕೇಳದೆ ಬಸ್ ಕೆಟ್ಟು ನಿಂತಿದ್ದ ಕಡೆಯೇ ಹೊರಟು ನಡೆದಿದ್ದ.

***
ಈ ಘಟನೆಯ ನಂತರ ಕಾಲೇಜ್‌ನಲ್ಲಿ ಎದುರು ಸಿಕ್ಕಾಗ ವಿವೇಕನದು ಒಂದು ಮುಗುಳ್ನಗೆ ಅಷ್ಟೇ.. ಅವತ್ತು ಇವಳಿಗೆ ತಾನೊಂದು ಸಹಾಯ ಮಾಡಿದ್ದೇನೆ ಎನ್ನುವುದೇ ಮರೆತು ಹೋದವನಂತೆ ಇದ್ದ. ಇದಕ್ಕೇ ವಿವೇಕ್ ಇಷ್ಟವಾಗುತ್ತಾನೆ. ಅವನು ಹುಡುಗಿಯಾಗಲಿ ಹುಡುಗನಾಗಲಿ ಒಂದೇ ಥರ ಟ್ರೀಟ್ ಮಾಡುತ್ತಾನೆ. ಹುಡುಗಿ ಎನ್ನುವ ಕಾರಣದಿಂದ ಸ್ಪೆಷಲ್ ಆಗಿ ಏನೂ ನೋಡುತ್ತಿರಲಿಲ್ಲ. ಆದರೆ ನನಗೆ ಮಾತ್ರ ದಿನದಿಂದ ದಿನಕ್ಕೆ ಅವನನ್ನು ಮಾತನಾಡಿಸುವ ಕಾತರ ಹೆಚ್ಚುತ್ತಿದೆ.

ಆದರೆ ವಿನಾಕಾರಣ ಹೇಗೆ ಮಾತನಾಡಿಸುವುದು? ನಾನೇ ಮೇಲೆ ಬಿದ್ದು ಮಾತನಾಡಿಸುವುದು ನನ್ನಿಂದಾಗದು. ಇಷ್ಟಕ್ಕೂ ನನಗೇಕೆ ಅವನನ್ನು ಮಾತನಾಡಿಸಬೇಕು ಅನ್ನಿಸುತ್ತದೆ? ನಾನೇನಾದರೂ ಅವನನ್ನುಪ್ರೀತಿಸುತ್ತಿದ್ದೇನಾ?! ಹಾಗಾದರೆ ಪ್ರೀತಿ ಅಂದರೆ ಹೀಗೆ ಇರುತ್ತಾ? ಇದ್ಯಾವುದಕ್ಕೂ ನನ್ನಲ್ಲಿ ಉತ್ತರವಿಲ್ಲ. ಇದಕ್ಕೆ ಉತ್ತರ ಕಂಡುಕೊಳ್ಳುವುದಾದರೂ ಹೇಗೆ?... ಇದೇನಾ ಪ್ರೇಮ...?

Saturday, July 10, 2010

ಮೊದಲ ಪ್ರೀತಿ?!

ಹಿಂದೆ. . .ಪ್ಲೀಸ್ ಇದೊಂದು ಸಾರಿ ನನ್ನ ನಂಬು... ಫ್ರೆಂಡ್‌ಶಿಪ್ ಅಂದ್ರೆ ಹೇಗಿರತ್ತೆ ಅಂತ ಜನ ನಮ್ಮ ನೋಡಿ ಕಲೀಬೇಕು ಹಾಗೆ ನಿಭಾಯಿಸ್ತೀನಿ... ಯಾವತ್ತೂ ಈ ಬಾಯಿ ಇನ್ನು ಗುಟ್ಟು ಬಿಟ್ಟುಕೊಡಲ್ಲ.... ಮುಂದೆ. . .

ಆಷಾಢದ ಮಳೆಗಾಲ. ಸೂರ್ಯನನ್ನೂ ತನ್ನ ತೆಕ್ಕೆಗೆ ಎಳೆದು ಕೊಂಡಿತ್ತು ಕಪ್ಪು ಮೋಡ. ಮಳೆಯ ಮುನ್ಸೂಚನೆ ಸ್ಪಷ್ಟವಿತ್ತು. ಆದರೂ ವಾರಕ್ಕೆ ಒಂದು ಸಲ ಮಾತ್ರ ಮನೆಗೆ ಹೋಗುವ ಅವಕಾಶ. ಅದನ್ನು ತಪ್ಪಿಸಿಕೊಳ್ಳುವ ಛಾನ್ಸೇ ಇರಲಿಲ್ಲ.

ಎಲ್ಲ ತಯಾರಿ ಮಾಡಿಕೊಂಡು ಹಾಸ್ಟೆಲ್ ಬಿಡುವ ತನಕ ಸಂಜೆ ನಾಲ್ಕು ಗಂಟೆ. ಕುಮ್ಮಿ ಕಾಲೇಜಿಂದ ನೇರವಾಗಿ ಹೊರಟು ಹೋಗಿದ್ದಳು. ನಾನೊಬ್ಬಳೇ ಬಸ್ ಹಿಡಿದು ಮನೆ ಸೇರಿಕೊಳ್ಳಬೇಕಿತ್ತು.

ತಣ್ಣನೆ ಗಾಳಿಯ ಸುಖ ಅನುಭವಿಸುತ್ತ ಬಸ್ಟಾಪಿನತ್ತ ಹೆಜ್ಜೆ ಹಾಕಿದೆ. ಅಲ್ಲಿ ನನ್ನದೇ ಕ್ಲಾಸಿನ ಹುಡುಗನ ಹೊರತು ಮತ್ತೊಂದು ನರಪಿಳ್ಳೆಯೂ ಇರಲಿಲ್ಲ.

ಅವನೊಂದಿಗೆ ಮುಖತಃ ಪರಿಚಯ ಅಷ್ಟೇ. ಕ್ಲಾಸಿನಲ್ಲಿ ತಾನಾಯಿತು, ತನ್ನ ಕೆಲಸವಾಯಿತು ಎಂದುಕೊಂಡು ಸೈಲೆಂಟಾಗಿರುತ್ತಿದ್ದ. ಮೊದಲ ನೋಟಕ್ಕೇ ಬಹಳ ಚಂದ ಎನಿಸದಿದ್ದರೂ, ಕಾಲೇಜಿನಲ್ಲಿ ಆತ ಕಂಡಾಗಲೆಲ್ಲ ಎಷ್ಟು ಸುಂದರ ಅವನ ಕಣ್ಣುಗಳು ಎಂದುಕೊಳ್ಳುತ್ತಿದ್ದೆ.

ಪ್ರಪಂಚವನ್ನೇ ಗೆದ್ದು ಬಿಡುತ್ತೇನೆ ಎನ್ನುವ ಆ ಕಣ್ಣುಗಳಲ್ಲಿನ ಹುಮ್ಮಸ್ಸು ನನ್ನನ್ನು ಸೆಳೆದಿತ್ತು. ಆತನೆಡೆಗೆ ಒಂದು ಪರಿಚಯದ ನಗೆ ಬೀರಿ ಆ ಕಡೆ ಈ ಕಡೆ ನೋಡುತ್ತ ನಿಂತೆ. ಬಸ್ ಬರುವ ಮುನ್ಸೂಚನೆಯೂ ಕಾಣಿಸಲಿಲ್ಲ.

ಆಗಲೇ 5 ಗಂಟೆಯ ಮೇಲಾಗಿತ್ತು. ಇನ್ನು 10 ಕಿ.ಮೀ. ಮುಖ್ಯ ಬಸ್ಟ್ಯಾಂಡಿಗೆ. ಅಲ್ಲಿ ಮತ್ತೆ ಬಸ್ ಬದಲಿಸಿ ಮನೆಗೆ ಹೋಗಬೇಕು. ಒಟ್ಟೂ 20 ಕಿ.ಮೀ. ದೂರದಲ್ಲಿರುವ ಮನೆ ಎಷ್ಟು ಹೊತ್ತಿಗೆ ಸೇರಿಕೊಂಡೇನು ಎನ್ನುವ ಆತಂಕ ಕಾಡತೊಡಗಿತು.

ಕಾದು ಕಾದು 6.45 ಆಗುತ್ತಾ ಬಂತು. ತಿರುಗಿ ಹಾಸ್ಟೇಲ್‌ಗೆ ಹೋಗೋಣವೆಂದುಕೊಂಡೆ. ಆದರೂ ಮನೆಗೆ ಹೋಗುವ ಆಸೆ ಕೈಹಿಡಿದು ಎಳೆಯುತ್ತಿತ್ತು. ನನ್ನ ಕ್ಲಾಸಿನವನೇ ಒಬ್ಬನಿದ್ದಾನಲ್ಲ ಎನ್ನುವ ಅಲ್ಪದ ಧೈರ್ಯ. ಅಂತೂ 7.15 ಕ್ಕೆ ಓಲಾಡುತ್ತ ಹಳೆ ಮುದುಕಿಯಂತೆ ಬಸ್ ಒಂದು ಬಂತು.

ಏರಿ ಕುಳಿತವಳಿಗೆ ಒಮ್ಮೆಲೇ ನಿದ್ರೆ. ಎಚ್ಚರಾಗುವ ಹೊತ್ತಿಗೆ 8 ಗಂಟೆ! ಕಂಡಕ್ಟರ್ "ರೀ ಏಳ್ರಿ" ಎಂದು ನನ್ನ ನೋಡಿ ಕಿರುಚುತ್ತಿದ್ದ. ಬಸ್ ಹಾಳಾಗಿ ನಿಂತಿತ್ತು. ಈ ಬಸ್ ಇನ್ನು ಮುಂದೆ ಹೋಗುವುದಿಲ್ಲ ಎನ್ನುತ್ತ ಎಲ್ಲರನ್ನೂ ಕೆಳಗಿಳಿಸುತ್ತಿದ್ದ. ಬಸ್ ಈಗ ಯಾವ ಜಾಗದಲ್ಲಿದೆ ಎಂದು ಗೊತ್ತಾಗದಷ್ಟು ಕರಿಗತ್ತಲು. ಆ ಕಡೆ ಹಾಸ್ಟೆಲೂ ಇಲ್ಲ,

ಈ ಕಡೆ ಮನೆಯೂ ಇಲ್ಲ ಎಂಬಂತಹ ಅಯೋಮಯ ಪರಿಸ್ಥಿತಿ. ಏನು ಮಾಡಲೂ ತೋಚಲಿಲ್ಲ. ನನ್ನ ಪುಣ್ಯಕ್ಕೆ ಸುತ್ತಮುತ್ತ ಒಂದು ಟೆಲಿಫೋನ್ ಬೂತ್ ಇರಲಿ, ತುಣುಕು ಬೆಳಕೂ ಇರಲಿಲ್ಲ. ಈಗೇನು ಮಾಡುವುದು? ಎಲ್ಲಿಗೆ ಹೋಗುವುದು? ಅಪ್ಪನನ್ನು ಇಲ್ಲಿಗೆ ಕರೆಸುವುದಾದರೂ ಹೇಗೆ? ಇಷ್ಟು ರಾತ್ರಿಯ ಮೇಲೆ ಆ ದಾರಿಯಲ್ಲಿ ಬೇರೆ ಬಸ್ಸುಗಳೂ ಬರುವುದಿಲ್ಲ.

ಒಮ್ಮೆಲೇ ಅಣ್ಣನ ಮೇಲೆ ಕೋಪ ಉಕ್ಕಿ ಬಂತು. ಅಪ್ಪನನ್ನು ಒಂದು ಮೊಬೈಲ್ ಕೊಡಿಸು ಎಂದು ಕೇಳಿದ್ದೆ. "ಅವಳಿಗೆ ಇಷ್ಟು ಬೇಗನೆ ಮೊಬೈಲ್ ಬೇಡ. ಮೊಬೈಲ್ ಇದ್ದರೆ ಹುಡುಗಿಯರು ಬೇಗನೆ ಹಾಳಾಗುತ್ತಾರೆ" ಎಂದೆಲ್ಲ ಅಪ್ಪನಿಗೆ ಹೇಳಿ ನನ್ನ ಬೇಡಿಕೆಯ ಮೇಲೆ ಕಲ್ಲು ಹಾಕಿದ್ದ.

ಈಗ ಅನುಭವಿಸುತ್ತಿರುವವಳು ನಾನು. ಉಳಿದ ಪ್ರಯಾಣಿಕರೆಲ್ಲ ಸರಕಾರಿ ಬಸ್ಸಿಗೆ ಹಿಡಿ ಶಾಪ ಹಾಕುತ್ತ, ಈ ರಾತ್ರಿ ಎಲ್ಲಿ ಸುರಕ್ಷಿತ ತಾಣ ಸಿಕ್ಕೀತು ಎನ್ನುವ ಬಗ್ಗೆ ಚರ್ಚೆ ಮಾಡುತ್ತಿದ್ದರು. ನಾನು ಮಾತ್ರ ಒಂಟಿಯಾಗಿ ಕಣ್ಣು ಕಣ್ಣು ಬಿಡುತ್ತ ನಿಂತಿದ್ದೆ.

ಅಲ್ಲಿ ಅಲ್ಪಸ್ವಲ್ಪ ಪರಿಚಯ ಇದ್ದವನು ಅಂದರೆ ಆ ನನ್ನ ಕ್ಲಾಸ್‌ಮೇಟ್ ಮಾತ್ರ. ಏನಾದರೂ ಸಹಾಯ ಕೇಳಬೇಕು ಅಂದರೆ ಅವನನ್ನೇ ಕೇಳಬೇಕು. ಸುಮ್ಮನೆ ಅವನನ್ನೇ ನೋಡಿದೆ. ಅರ್ಥ ಮಾಡಿಕೊಂಡವನಂತೆ ತಕ್ಷಣ ನನ್ನ ಕಡೆ ನಡೆದು ಬರತೊಡಗಿದ. ಒಮ್ಮೆ ಏನು ಕೇಳಬೇಕೆಂದು ತೋಚಲಿಲ್ಲ.

ಹೆಸರೇ ಸರಿಯಾಗಿ ಗೊತ್ತಿಲ್ಲದವನ ಬಳಿ ಏನು ಸಹಾಯ ಯಾಚಿಸುವುದು?! "ಈಗ ಏನು ಮಾಡುತ್ತೀರಿ?" ಎಂದು ಅವನಾಗಿಯೇ ಕೇಳಿದ.