Saturday, September 4, 2010

ದೊಡ್ಡವರೆಲ್ಲ ಜಾಣರಲ್ಲ. ..

ಅಜ್ಜ ಮೊಮ್ಮಕ್ಕಳ ನಡುವೆ ಸಾಮಾನ್ಯವಾಗಿ ಒಂದು ಮಧುರ ಬಾಂಧವ್ಯವಿರುತ್ತದೆ. ಮೊಮ್ಮಗುವಿನ ತಪ್ಪು ಅಜ್ಜನಿಗೆ ತಪ್ಪಾಗಿ ಕಾಣಿಸದೆ ಬಾಲಲೀಲೆಯಂತೆ ಕಾಣಿಸುತ್ತದೆ. ಮೊಮ್ಮಗುವಿಗಂತೂ ಅಜ್ಜನೇ ಪ್ರಪಂಚ.

ಆದರೆ ಈ ಮಾದಜ್ಜ ಮಾತ್ರ ಸ್ವಲ್ಪ ವಿಚಿತ್ರ. ಶ್ರೀಮಂತ ಒಂಟಿ ಮುದುಕ. ಅವನ ಆರಡಿಯ ಗೌರವ ವರ್ಣದ ದೇಹ ನೋಡಿದರೇ ಭಯ-ಭಕ್ತಿ ಉಂಟಾಗುತ್ತಿತ್ತು. ಯಾರನ್ನೂ ಸುಲಭಕ್ಕೆ ನಂಬುವುದಿಲ್ಲ. ಯಾರನ್ನು ಹಚ್ಚಿಕೊಳ್ಳುತ್ತಲೂ ಇರಲಿಲ್ಲ. ವೇದ-ತರ್ಕ ಅಂತ ಬಹಳ ಓದಿಕೊಂಡಿದ್ದ. ಸಿಕ್ಕಾಪಟ್ಟೆ ಮಡಿ, ತಾಸುಗಟ್ಟಲೆ ದೇವರಪೂಜೆ ಮಾಡುತ್ತಿದ್ದ. ಅವನಿಗೆ ಎದುರು ಹೇಳುವವರೇ ಇಲ್ಲ.

ನಮಗೆ ದೂರದ ಸಂಬಂಧಿ. ಒಂಟಿತನ ಬೇಸರ ತರಿಸಿದಾಗಲೆಲ್ಲ ನಮ್ಮ ಮನೆಗೆ ಬರುತ್ತಾನೆ. ಅವನು ಬಂದ ಎಂದರೆ ಎಲ್ಲರಿಗೂ ತಲೆನೋವು. ಆದರೂ ಪಾಪ ವಯಸ್ಸಾಗಿದೆ. ಹಿಂದೆ ಮುಂದೆ ದಿಕ್ಕಿಲ್ಲದವನು ಎಂದು ಉಪಚರಿಸುತ್ತಿದ್ದರು.

ಅದರಲ್ಲೂ ಮಕ್ಕಳಿಗಂತೂ ಬಹಳ ಕಿರಿಕಿರಿ. ಪ್ರತಿಯೊಂದಕ್ಕೂ ಮಾದಜ್ಜನ ಗೊಣಗಾಟವಿರುತ್ತಿತ್ತು. ಮಕ್ಕಳು ಅವನ ಎದುರು ಹಾದು ಹೋದರೂ ಸಾಕು ಮಾದಜ್ಜನ ಬಾಯಿಗೆ ಅವರು ಬಿದ್ದರು ಅಂತಲೇ ಅರ್ಥ. ಮಾದಜ್ಜ ಬಂದ ಅಂದರೆ ಸಾಕು ನಾವು ಮಕ್ಕಳೆಲ್ಲ ಇಲಿ ತರಹ ಮೂಲೆ ಸೇರಿಕೊಂಡುಬಿಡುತ್ತಿದ್ದೆವು. ಅವನ ಬೈಗುಳಗಳೇ ಹಾಗಿರುತ್ತಿದ್ದವು. ನಮ್ಮ ಆತ್ಮವಿಶ್ವಾಸ, ನಗು ಎಲ್ಲ ಅವನ ಬೈಗುಳದ ಎದುರು ಪುಡಿಪುಡಿ ಆಗಿಬಿಡುತ್ತಿದ್ದವು. ಯಾವ ಕ್ಷಣದಲ್ಲಿ ಮಾದಜ್ಜನ ಬೈಗುಳ ಬಂದು ಎರಗುತ್ತೋ ಅಂತ ಟೆನ್ಷನ್‌ಲೇ ದಿನ ಕಳೆಯುತ್ತಿದ್ದೆವು.

ಒಂದು ಶನಿವಾರ ಮನೆಗೆ ಹೋದಾಗ ಮಾದಜ್ಜನೂ ಬಂದಿದ್ದ. ಅವನನ್ನು ನೋಡಿದಾಕ್ಷಣ ನನ್ನ ಅರ್ಧ ಉತ್ಸಾಹ ಬತ್ತಿಹೋಗಿತ್ತು. ನಾನು ಫ್ರಾಕು ಬಿಟ್ಟು ಚೂಡಿದಾರ ಹಾಕಿ ಕಾಲೇಜಿಗೆ ಹೋಗಲು ಪ್ರಾರಂಭಿಸಿದ ಮೇಲೆ ಇದೇ ಮೊದಲ ಬಾರಿಗೆ ಅವನು ನನ್ನನ್ನು ನೋಡಿದ್ದು. ಮೇಲಿನಿಂದ ಕೆಳಗಿನವರೆಗೆ ಒಮ್ಮೆ ನೋಡಿ, "ಈ ಕಾಲದ ಹೆಣ್ಣುಮಕ್ಕಳೋ, ಅವರ ವೇಷವೋ ಎಂದು ಮೂಗು ಮುರಿದ. ಒಮ್ಮೆಲೇ ಸಿಟ್ಟು ಬಂತು. ಆದರೂ ಅಮ್ಮ ಹೇಳುತ್ತಿದ್ದ 'ಮನುಷ್ಯನ ವ್ಯಕ್ತಿತ್ವಕ್ಕೆ ಗೌರವವಿಲ್ಲದಿದ್ದರೂ ಕೊನೇ ಪಕ್ಷ ಅವನ ವಯಸ್ಸಿಗಾದರೂ ಗೌರವ ನೀಡಬೇಕು' ಎನ್ನುವ ಮಾತು ನೆನಪಾಗಿ ಸುಮ್ಮನಾದೆ.

ಅಡುಗೆ ಮನೆಗೆ ಓಡಿಹೋದವಳೇ ಅಮ್ಮನ ಕುತ್ತಿಗೆಗೆ ಜೋತುಬಿದ್ದು ಕಾಲೇಜಿನ ಕಥೆ ಎಲ್ಲ ಹೇಳುತ್ತ ಜೋರಾಗಿ ನಗುತ್ತಿದ್ದೆ. ಮತ್ತೆ ಮಾದಜ್ಜನ ಪ್ರವೇಶವಾಯಿತು. 'ಈಗಿನ ಕಾಲದ ಮಕ್ಕಳಿಗೆ ಹಿರಿಯರು ಅನ್ನುವ ಗೌರವವೇ ಇಲ್ಲ. ನಾವೆಲ್ಲ ಅಪ್ಪ ಅಮ್ಮರಿಂದ ಮಾರು ದೂರ ನಿಂತುಮಾತನಾಡುತ್ತಿದ್ದೆವು' ಎಂದು ಗೊಣಗಿದ. ಇವತ್ತು ಸುಮ್ಮನಿರಲು ಸಾಧ್ಯವೇ ಇಲ್ಲ ಎನ್ನುವಷ್ಟು ಕೋಪ ಬಂತು. ಅಮ್ಮನ ಕಣ್ಸನ್ನೆ ನೋಡಿ ನನ್ನ ಪಾಡಿಗೆ ನಾನು ಹೋದೆ.

ಚಿಕ್ಕಂದಿನಿಂದಲೂ ಅಣ್ಣನ ಅಂಗಿ-ಪ್ಯಾಂಟು ಅಂದರೆ ನನಗಿಷ್ಟ. ಅದನ್ನು ಮನೆಯಲ್ಲಷ್ಟೇ ಹಾಕುತ್ತಿದ್ದೆ. ಅದಕ್ಕೆ ಯಾರ ತಕರಾರೂ ಇರಲಿಲ್ಲ. ಮಾದಜ್ಜ ನೋಡಿದವನೇ 'ನಿನ್ನಲ್ಲಿ ಒಂದೂ ಹುಡುಗಿಯರ ಲಕ್ಷಣವೇ ಇಲ್ಲ ಎಂದು ಜರೆದ. ಮಾದಜ್ಜನ ಮಾತು ನನ್ನಲ್ಲಿದ್ದ ಸ್ವಾಭಿಮಾನ, ಸ್ತ್ರೀತ್ವ ಕೆಣಕಿದಂತಾಯಿತು.

ಎಲ್ಲಿತ್ತೋ ಧೈರ್ಯ ಗೊತ್ತಿಲ್ಲ. 'ಮಾದಜ್ಜ, ಸ್ತ್ರೀತ್ವವನ್ನು ಅಳೆಯುವ ಮಾಪಕ ಯಾವುದು? ನಿನ್ನ ಪ್ರಕಾರ ಯಾವ ಲಕ್ಷಣ ಇದ್ದರೆ ಅವಳು ಸ್ತ್ರೀ ಆಗುತ್ತಾಳೆ? ಎಂದು ಸ್ವಲ್ಪ ಜೋರಾಗಿ ಕೇಳಿದ್ದೆ. ಮಾದಜ್ಜ ನನ್ನ ಅನಿರೀಕ್ಷಿತ ಪ್ರಶ್ನೆಯಿಂದ ಕಂಗಾಲಾಗಿಬಿಟ್ಟಿದ್ದ. ಉತ್ತರಕ್ಕಾಗಿ ಮಾದಜ್ಜ ತಡವರಿಸುತ್ತಿದ್ದಾಗಲೆ ನಾನು ಮುಂದುವರಿಸಿದೆ.

'ತಲೆ ಬಗ್ಗಿಸಿಕೊಂಡು, ಗಟ್ಟಿಯಾಗಿ ಮಾತನಾಡದೆ, ಜೋರಾಗಿ ನಗದೆ ಇದ್ದುಬಿಡುವುದೇ ಹುಡುಗಿಯರ ಲಕ್ಷಣವಾ? ಒಬ್ಬಳು ಹೂವು ಮುಡಿದುಕೊಂಡು, ದೊಡ್ಡ ಕುಂಕುಮ ಇಟ್ಟು ಕೈತುಂಬ ಬಳೆ ತೊಟ್ಟುಕೊಂಡು ಮನದ ತುಂಬ ಹುಳುಕು ತುಂಬಿಕೊಂಡರೆ ಅವಳು ನನ್ನ ಪ್ರಕಾರ ಸ್ತ್ರೀಯೇ ಅಲ್ಲ! ಸಹನೆ, ಆದರಾತಿಥ್ಯ, ಬೇರೆಯವರ ಕಷ್ಟಕ್ಕೆ ಸ್ಪಂದಿಸುವುದು, ಎಲ್ಲರನ್ನೂ ಸಮಾನವಾಗಿ ನೋಡುವುದು ಇವೆಲ್ಲ ಸ್ತ್ರೀ ಆದವಳಲ್ಲಿ ಇರಬೇಕಾದದ್ದು. ಅದು ನನ್ನಲ್ಲಿದೆ!! ಎಂದು ಆವೇಶದಿಂದ ಕೂಗಿದ್ದೆ.

ಮಾದಜ್ಜ ಮರು ಮಾತಾಡಲಿಲ್ಲ. ಅಪ್ಪ ಅಮ್ಮ ನನ್ನ ಕೂಗಾಟ ಕೇಳಿ ಓಡಿಬಂದಿದ್ದರು. ಅಮ್ಮ ನನಗೆ ಬೈದು ಮಾದಜ್ಜನ ಕ್ಷಮೆ ಕೇಳಲು ಹೇಳಿದಳು. ನಾನು ಒಲ್ಲದ ಮನಸ್ಸಿನಿಂದ ತಪ್ಪಾಯ್ತು ಅಂತಲೂ ಹೇಳಿದ್ದೆ. ಇವತ್ತು ಮಾದಜ್ಜ ಬಂದಿದ್ದ. ಸರಿಯಾಗೇ ಮಾತನಾಡಿಸಿದೆ. ಆದರೆ ಮುಖ ತಿರುಗಿಸಿಕೊಂಡ. ಅವನನ್ನು ಬದಲಾಯಿಸುವ ಅಗತ್ಯ ನನಗಿಲ್ಲ. ಅದು ಸಾಧ್ಯವೂ ಇಲ್ಲ. ವಯಸ್ಸು ಹೆಚ್ಚಿದರೆ, ದೊಡ್ಡ ದೊಡ್ಡ ಗ್ರಂಥ ಪಠಿಸಿದ ಮಾತ್ರಕ್ಕೆ ಮನಸ್ಸು ಬೆಳೆಯದು.

Monday, August 30, 2010

ಎಲ್ಲಿ ಹೋಯಿತು ಆ ಸಂಭ್ರಮಾಚರಣೆ?

ಪುಟ್ಟ ಮಕ್ಕಳಿರುವಾಗ ಅಗಸ್ಟ್ ೧೫, ಜನವರಿ ೨೬, ಗಾಂಧಿ ಜಯಂತಿ, ಮಕ್ಕಳ ದಿನಾಚರಣೆ ಯಾವುದೇ ವಿಶೇಷ ದಿನ ಇರಲಿ, ಎಷ್ಟು ಸಂಭ್ರಮವಿತ್ತು.. ಎರಡು ದಿನ ಮೊದಲಿನಿಂದಲೇ ತಯಾರಿ ಶುರುವಾಗುತ್ತಿತ್ತು.

ಬೆಳ್ಳನೆಯ ಹೊಚ್ಚ ಹೊಸ ಬ್ಲೌಸು, ನೀಲಿ ಲಂಗ.. ಮನ ತುಂಬಾ ಉತ್ಸಾಹ. "ಪೂಜೆ ಮಾಡಲಾದರೂ ಸ್ವಲ್ಪ ಹೂ ಇಡೆ" ಎಂಬ ಅಜ್ಜಿಯ ಕೂಗನ್ನೂ ಕಿವಿ ಮೇಲೆ ಹಾಕಿಕೊಳ್ಳುತ್ತಿರಲಿಲ್ಲ. ಮನೆಯ ದೇವರ ಪಾಲಿನ ಹೂವೆಲ್ಲ ಶಾಲೆಗೆ ಸೇರುತ್ತಿದ್ದವು. ಯಾರು ಹೆಚ್ಚಿಗೆ ಹೂವನ್ನು ತರುತ್ತಾರೆ ಎಂದು ನಮ್ಮ ನಮ್ಮಲ್ಲೇ ಕಾಂಪಿಟೇಶನ್.

ಈ ದಿನಾಚರಣೆಗಳು ಬಂದರೆ ಮನೆಯ ಹಿರಿಯರಿಗೆಲ್ಲ ತಲೆನೋವು. ಭಾಷಣ ಬರೆದುಕೊಡು ಎಂದು ಎಲ್ಲರಿಗೂ ದುಂಬಾಲು ಬೀಳುತ್ತಿದ್ದೆವು. 'ಮಾನ್ಯ ಅಧ್ಯಕ್ಷರೇ, ಪೂಜ್ಯ ಗುರುಗಳೇ..'ಎಂದು ಒಂಚೂರೂ ತಪ್ಪದಂತೆ ಕಷ್ಟಪಟ್ಟು ಉರುಹೊಡೆದು ಶಿಕ್ಷಕರಿಗೆ ಒಪ್ಪಿಸುವುದೇ ಒಂದು ಪ್ರಿಯ ಸಾಹಸವಾಗಿತ್ತು.

ಊರ ಹಿರಿಯರೊಬ್ಬರಿಗೇ ಅಧ್ಯಕ್ಷರ ಸ್ಥಾನ ಮೀಸಲಾಗಿರುತ್ತಿತ್ತು. ಪ್ರತಿ ವರ್ಷ ಅದೇ ಅಧ್ಯಕ್ಷರು, ಅದೇ ಭಾಷಣ ವರ್ಷವೊಂದು ಬದಲಾಗಿರುತ್ತಿತ್ತು ಅಷ್ಟೇ. ಉತ್ಸಾಹ ಮಾತ್ರ ಸ್ವಲ್ಪವೂ ಕಡಿಮೆಯಾಗುತ್ತಿರಲಿಲ್ಲ.

ಈ ದಿನಾಚರಣೆಗಳ ಉತ್ಸಾಹ ಒಂದು ರೀತಿಯದ್ದಾದರೆ ಚೌತಿ, ದೀಪಾವಳಿ, ಯುಗಾದಿ ಹಬ್ಬಗಳದ್ದೇ ಇನ್ನೊಂದು ರೀತಿ. ಹಬ್ಬ ಅಮ್ಮನ ಸುತ್ತಮುತ್ತ ತಿರುಗುತ್ತ, ಎಷ್ಟು ಹೊತ್ತಿಗೆ ಆ ಕಜ್ಜಾಯಗಳೆಲ್ಲ ನಮ್ಮ ಕೈಸೇರುತ್ತವೆಯೋ ಎಂಬ ತವಕ. ಜೀವ ಹೋಗುತ್ತದೆ ಎಂಬಷ್ಟು ಹೆದರಿಕೆಯಾದರೂ ಪಟಾಕಿ ಹೊಡೆಯುವ ಕಾತರ. ಹಬ್ಬದ ಮರುದಿನ ಮನೆ ತುಂಬ ಸೇರುವ ನೆಂಟರು. ಮಾತು ಬಿಟ್ಟು ಅದೆಷ್ಟು ದಿನಗಳಾಗಿವೆಯೋ ಎಂಬಂತೆ ಮಾತು.. ಮಾತು.. ಮಾತು.

ಉದ್ದದ ಊಟದ ಪಂಕ್ತಿ. ಒಂದು ಕಡೆ ಸೇರುವ ಮಕ್ಕಳ ಕೂಟ. ಆಹಾ ಎಷ್ಟು ಸುಂದರ ದಿನಗಳು.. ಆ ಎಳೇ ವಯಸ್ಸಿನಲ್ಲಿ ಹಬ್ಬಗಳ ಆಕರ್ಷಣೆಯೇ ಹಾಗಿರುತ್ತಿತ್ತು.

ಆದರೆ ಕೆಲವೇ ವರ್ಷಗಳಲ್ಲಿ ಅದೆಂತಹ ಬದಲಾವಣೆ! ಒಂದರೆಡು ದಿನ ನೆಂಟರಿಷ್ಟರೊಂದಿಗೆ ಸೇರಿ ಕಾಲ ಕಳೆಯಲು ಯಾರಿಗೂ ಟೈಮಿಲ್ಲ. ಮನೆ ಬಿಟ್ಟು ಬಹಳ ದಿನ ಇರುವಂತಿಲ್ಲ. ಏಕೆಂದರೆ ಇದು ವಿಭಕ್ತ ಕುಟುಂಬದ ಅನಿವಾರ್ಯತೆ. ಅಷ್ಟು ಒತ್ತಾಯ ಮಾಡಿ ಕರೆದರೆ ಊಟದ ಹೊತ್ತಿಗೆ ಬಂದು ಊಟ ಮುಗಿಸಿ ತಕ್ಷಣ ತಿರುಗಿ ಮನೆಗೆ. ಹರಕೆ ತೀರಿಸಲು ಬಂದವರಂತೆ ಭೇಟಿ. ತಮ್ಮವರ ಜೊತೆಗೆ ಮನ ಬಿಚ್ಚಿ ಮಾತನಾಡುವುದಿರಲಿ, ನಗಲೂ ಸಲುಗೆ ಇಲ್ಲ! ಇನ್ನು ಬಂದ ಮಕ್ಕಳಿಗೋ, ತಮಗೆ ಇವರೆಲ್ಲ ಏನು ಆಗಬೇಕೆಂದು ತಿಳಿಯದಷ್ಟು ಗೊಂದಲ.

ಇನ್ನು ರಾಷ್ಟೀಯ ದಿನಾಚರಣೆಗಳೋ... ಅವು ಕೇವಲ ಈಗ ರಜಾ ದಿನಗಳು ಅಷ್ಟೇ! ಅವತ್ತು ಫುಲ್ ರಿಲೀಫ್. ಹೈಸ್ಕೂಲ್ ತನಕ ಶಿಕ್ಷಕರ ಹೆದರಿಕೆಯಿಂದಲಾದರೂ ಹೋಗುತ್ತಿದ್ದೆವು. ಈಗ ಕಾಲೇಜಿಗೆ ಬಂದಮೇಲೆ ಅದೆಲ್ಲ ಸಿಲ್ಲಿ.. ಪ್ರಿನ್ಸಿ, ಕೆಲವು ಲೆಕ್ಚರರ್‌ಗಳು, ಅಟೆಂಡರುಗಳು ಕಾಟಾಚಾರಕ್ಕೆ ಎಂಬಂತೆ ಧ್ವಜ ಹಾರಿಸುತ್ತಾರೆ.

ಮನುಷ್ಯ ಬೆಳೆದಂತೆ ಯಾಕೆ ಈ ಎಲ್ಲ ಬದಲಾವಣೆ? ಈ ಆಚರಣೆಗಳು, ಸಂಭ್ರಮ ಕೇವಲ ಮಕ್ಕಳಿಗೆ ಮಾತ್ರವೇ ಸೀಮಿತವೆ?!

Tuesday, August 24, 2010

ಇತ್ತೀಚೆಗೆ ನನ್ನ ಡೈರಿಯ ತುಂಬ ಅವನೆ...

ವಿವೇಕ್.. ವಿವೇಕ್ ಇದೇ ಹೆಸರು ಅದೆಷ್ಟು ಸಾರಿ ಬರೆದುಕೊಂಡಿದ್ದೆನೋ...ಯಾಕೆ ಕಾಡ್ತಾನೆ ಅವನು ನನ್ನನ್ನು ಈ ರೀತಿ? ನಿಜವಾಗಿಯೂ ಅವನ ಮೇಲೆ ಪ್ರೀತಿ ಆಗಿಬಿಟ್ಟಿದೆಯಾ? ಹೀಗೆಲ್ಲಾ ಅಂದುಕೊಂಡ್ರೆ ಯಾಕೋ ತುಂಬ ಭಯ ಆಗುತ್ತೆ...

ಏನೋ ತಪ್ಪು ಕೆಲಸ ಮಾಡ್ತಾ ಇದ್ದೇನೆ ಅನಿಸುತ್ತೆ. ಅಪ್ಪ ಅಮ್ಮನಿಗೆ ಮೋಸ ಮಾಡ್ತಾ ಇದೀನೆನೋ ಅಂತ ಫೀಲ್ ಆಗುತ್ತೆ. ನನ್ನ ವಯಸ್ಸಾದ್ರೂ ಏನು? ಈಗಿರೋ ನನ್ನ ಜವಾಬ್ದಾರಿ ಆದ್ರೂ ಏನು? ಚೆನ್ನಾಗಿ ಓದಲಿ ಮಗಳು ಅಂತ ಅಪ್ಪ ಅಮ್ಮ ಕಾಲೇಜಿಗೆ ಕಳಿಸಿದ್ರೆ ನಾನು ಮಾಡ್ತಾ ಇರೋದಾದ್ರೂ ಏನು! ಡೈರಿ ತುಂಬ ವಿವೇಕನ ಹೆಸರನ್ನು ಬರೆಯುತ್ತ ಕುಳಿತಿರೋದು!!

ಛೇ.. ನನ್ನ ಮೇಲೆ ನನಗೇ ಬೇಜಾರು ಆಗ್ತಾ ಇದೆ. ದಿನವಿಡೀ ಮೂಡೇ ಇಲ್ಲ. ಈಗಾಗಲೇ ಕುಮ್ಮಿಗೂ ನನ್ನ ಮೇಲೆ ಅನುಮಾನ ಮೂಡಿದೆ. Guilt ನಿಂದ ಮನೆಗೆ ಹೋದರೆ ಅಪ್ಪನ ಮುಖ ನೋಡಿ ಮಾತನಾಡೋಕೂ ಹೆದರಿಕೆ. ಯಾವುದಕ್ಕೂ ಒಂದು ಸಾರಿ ಶೀಲಕ್ಕನ ಭೇಟಿ ಮಾಡಿ ಮಾತನಾಡುವುದು ಒಳ್ಳೆಯದು.

ಇಂತಹದ್ದಕ್ಕೆಲ್ಲ ಶೀಲಕ್ಕನ ಬಿಟ್ಟು ಇನ್ಯಾರನ್ನು ಕೇಳಲಿ? ಅವಳು ಮಾತ್ರ ನನ್ನ ಪ್ರಶ್ನೆಗೆ ಉತ್ತರ ಕೊಡಬಲ್ಲಳು. ಈ ವಾರ ಮನಗೆ ಹೋದಾಗ ನನ್ನ ಪುಣ್ಯ ಎಂಬಂತೆ ದೂರದ ಊರಲ್ಲಿ ಕಲಿಯುತ್ತಿದ್ದ ಶೀಲಕ್ಕ ಕೂಡ ಬಂದಿದ್ದಳು. ಕಂಡಕೂಡಲೇ ನೇರ ಸ್ವಭಾವದ ಶೀಲಕ್ಕ ನೇರವಾಗಿ ಕೇಳಿದ್ದಳು, "ಪಿಯುಸಿ ಅಂತೀಯಾ ಲವ್ವು-ಗಿವ್ವು ಏನೂ ಇನ್ನೂ ಮಾಡಿಲ್ವಾ?" ಎಂದು ಕೇಳ್ತಾ ತುಂಟ ನಗೆ ಬೀರಿದಳು.

ಇಷ್ಟು ದಿನ ಮನದಲ್ಲೇ ಇರಿಸಿಕೊಂಡಿದ್ದ ಗೊಂದಲ, ತಳಮಳ ಎಲ್ಲ ಶೀಲಕ್ಕನ ಈ ಪ್ರಶ್ನೆಯಿಂದ ಕಣ್ಣೀರಾಗಿ ಹೊರಬಂತು.
ಗಾಬರಿಯಿಂದ ಶೀಲಕ್ಕ ಹತ್ತಿರ ಓಡಿಬಂದಳು. "ಏನಾಯ್ತೆ ಸುಮಿ.." ಕಕ್ಕುಲಾತಿಯಿಂದ ಕೇಳಿದಳು. ಅಂದು ರಾತ್ರಿ ಬಸ್ಸು ಕೆಟ್ಟು ವಿವೇಕ್ ಮನೆಯ ತನಕ ಬಿಟ್ಟು ಹೋದದ್ದು, ಕಾಲೇಜ್‌ನಲ್ಲಿ ಅವನು ಬೇಕಾದಷ್ಟಕ್ಕೆ ಮಾತನಾಡೋದು, ಡೈರಿ ತುಂಬ ಅವನ ಹೆಸರನ್ನೇ ಬರೆದುಕೊಂಡಿರೋದು.. ಎಲ್ಲ ವಿವರವಾಗಿ ಹೇಳಿದೆ.

ಶೀಲಕ್ಕ ಸಣ್ಣದಾಗಿ ನಕ್ಕು, "ಅವನಿಗೆ ನಿನ್ನ ಪ್ರೀತಿಯ ವಿಷಯ ಗೊತ್ತಾ?" ನಾನು ಇಲ್ಲವೆಂದು ತಲೆಯಾಡಿಸಿದೆ. "ಮತ್ತೆ ನೀನು ಯಾಕೆ ಇಷ್ಟೆಲ್ಲ ಅತ್ತು, tension ಮಾಡಿಕೊಳ್ತಾ ಇದಿಯಾ? ನೋಡು, ಕಷ್ಟದಲ್ಲಿ ಇರೋ ಸ್ತ್ರೀಗೆ ಸಹಾಯ ಮಾಡೋದು ಪುರುಷರ ಸಹಜ ಗುಣ. ತನ್ನ ರಕ್ಷಣೆ ಮಾಡಿದ ಪುರುಷನ ಕಡೆ ಸ್ವಾಭಾವಿಕವಾಗಿ ಸ್ತ್ರೀ ಸೆಳೆಯಲ್ಪಡುತ್ತಾಳೆ. ಈಗ ನಿನಗಾಗಿರುವುದೂ ಅಷ್ಟೆ.

ಇದಕ್ಕೆ ನೀನು ವಿಶೇಷ ಅರ್ಥ ಹಚ್ಚಿ ತಲೆ ಕೆಡಿಸಿಕೊಳ್ಳುವ ಅಗತ್ಯವೇ ಇಲ್ಲ. ಮೊದಲು ಒಂದು ಹಂತದವರಗೆ ನಿನ್ನ ವಿದ್ಯಾಭ್ಯಾಸವನ್ನು complete ಮಾಡು. ಅಲ್ಲಿ ತನಕ ನಿನಗೆ ಯಾವುದು ಸರಿ, ಯಾವುದು ತಪ್ಪು, ಯಾವುದು ಪ್ರೀತಿ, ಯಾವುದು ಆಕರ್ಷಣೆ ಎಂದು ನಿರ್ಧರಿಸುವ ತಿಳುವಳಿಕೆ ಮೂಡಿರುತ್ತದೆ. ದುಡುಕ ಬೇಡ. ಎಳೇ ವಯಸ್ಸು ನಿಂದು. ನಾಳೆ ಕಾಲೇಜಲ್ಲಿ ಅವನನ್ನು ಸಹಜವಾಗಿ ಮಾತನಾಡಿಸು. ಅವನ ಮಾತುಗಳಿಗೆ ವಿಶೇಷ ಅರ್ಥ ಕಲ್ಪಿಸಬೇಡ. ಒಂದು ಒಳ್ಳೆಯ ಸ್ನೇಹ ಬೆಳೆಯಲಿ ನಿಮ್ಮಿಬ್ಬರ ನಡುವೆ... "

ಶೀಲಕ್ಕನ ಮಾತು ಕೇಳಿ ಒಮ್ಮೆ ಕಣ್ಣೆದುರು ಕಟ್ಟಿದ ಭ್ರಮೆಯ ಪೊರೆ ಕಳಚಿದಂತಾಯಿತು. ಇಲ್ಲದೆ ಹೋದದ್ದನ್ನೆಲ್ಲ ಕಲ್ಪಿಸಿಕೊಂಡು ಸುಮ್ಮನೇ ಕಾಲಹರಣ ಮಾಡಿದೆ. ನಾಳೆಯಿಂದ ಎಲ್ಲರ ಜೊತೆ ಹೇಗೆ ಇರುತ್ತೇನೋ ಅವನ ಜೊತೆಗೂ ಹಾಗೆ ಇರುತ್ತೇನೆ. ಈ ಪ್ರೀತಿಯ ಜಂಜಾಟವೆಲ್ಲ ಈಗಲೇ ಬೇಡ. ಹೊಸ ನಿರ್ಧಾರದೊಂದಿಗೆ, ಹೊಸ ಹುಮ್ಮಸ್ಸಿನಿಂದ ಶೀಲಕ್ಕನ ಮನೆಯಿಂದ ಹಿಂದಿರುಗಿದ್ದೆ.

Sunday, August 1, 2010

ಎಲ್ಲಿ ಹೋಯ್ತು ಆ ಮುಗ್ಧ ಸ್ನೇಹ...

ಹಿಂದೆ..
ಹಾಗಾದರೆ ಪ್ರೀತಿ ಅಂದರೆ ಹೀಗೆ ಇರುತ್ತಾ? ಇದ್ಯಾವುದಕ್ಕೂ ನನ್ನಲ್ಲಿ ಉತ್ತರವಿಲ್ಲ. ಇದಕ್ಕೆ ಉತ್ತರ ಕಂಡುಕೊಳ್ಳುವುದಾದರೂ ಹೇಗೆ?
ಮುಂದೆ...

ಮನುಷ್ಯ ಬೆಳೆದಂತೆ ಅವನ ವಿಚಾರಗಳೂ ಎಷ್ಟು ಬದಲಾಗಿಬಿಡುತ್ತವೆ! ಅಥವಾ ಸಮಾಜವೇ ಅವನನ್ನು ಬದಲಾಯಿಸಿ ಬಿಡುತ್ತವೆಯೊ? 8-10 ವರ್ಷಗಳಲ್ಲಿ ಎಂತಹ ಬದಲಾವಣೆ!

ಜೊತೆಯಲ್ಲಿ ಆಡಿ ಬೆಳೆದ ಸ್ನೇಹಿತ ಅಪರಿಚಿತನಾಗಿಬಿಟ್ಟಿದ್ದ!! ನಾನು ದೊಡ್ಡ ಮನೆಯ ಮಗಳು ಎಂಬ ಕಾರಣವೋ ಅಥವಾ ಜಾತಿಯೋ ನಮ್ಮಿಬ್ಬರ ನಡುವೆ ಅಡ್ಡ ಬಂದಿದ್ದು? ಏನೇ ಇದ್ದರೂ ಮಾತನಾಡಿಸದ? ಕಂದಕವೆ?!

ವಿನಾಯಕ.. ಉಹುಂ ಗೊಣ್ಣೆ ವಿನ್ನಿ. ಆ ಹೆಸರೇ ಅವನಿಗೆ ಹೊಂದಿಕೆಯಾಗುವುದು. ನಾವೆಲ್ಲಾಅವನನ್ನು ಕರೆಯುತ್ತಿದ್ದುದೇ ಆ ಹೆಸರಿನಿಂದ. ಯಾವಾಗಲೂ ಮೂಗಿನಿಂದ ಸುರಿಯುತ್ತಿರುವ ಗೊಣ್ಣೆ, ಹರಕು ಮುರುಕು ಅಂಗಿಯ ತೋಳಿನಿಂದ ಅದನ್ನು ಒರೆಸಿಕೊಳ್ಳುವ ವ್ಯರ್ಥ ಪ್ರಯತ್ನ ಇನ್ನೂ ಕಣ್ಣಿಗೆ ಕಟ್ಟಿದಂತಿದೆ.

ಕೂಲಿಗೆ ಹೋಗುವ ಅವನಮ್ಮ ಅವನನ್ನು ಕೈಲಾದಷ್ಟು ಸ್ವಚ್ಛವಾಗಿ ಇಡುವ ಪ್ರಯತ್ನ ಮಾಡುತ್ತಿದ್ದಳು. ಆದರೆ ಅದೆಲ್ಲ ಕೆಲವೇ ಕ್ಷಣಗಳಲ್ಲಿ ಮಣ್ಣುಪಾಲು ಆಗುವುದೆಂದು ಅವಳಿಗೂ ಗೊತ್ತು. ಅಂತಹ ತುಂಟ ಅವನು. ಹಕ್ಕಿ, ಹೂವು, ಹಣ್ಣು, ಮರಗಳ
ಹೆಸರೆಲ್ಲ ಅವನಿಗೆ ಬಾಯಿಪಾಠ. ನಮಗೆಲ್ಲ ಒಂದು ಥರ ಸ್ಫೂರ್ತಿ, ಸೋಜಿಗವಾಗಿದ್ದ.

ಆದರೆ ಅವನು ಸಮಾಜದ ಕೆಳಸ್ತರದವನು. ಅವನ ಅಪ್ಪ-ಅಮ್ಮ ಮಾಡುತ್ತಿದ್ದದ್ದು ಕೂಲಿ ಕೆಲಸ. ನಾವು ಆ ಶಾಲೆಯಲ್ಲಿದ್ದ 8-10 ಮಕ್ಕಳು. ನಮಗೆ ಆ ಜಾತಿ ಭೇದವಿರಲಿಲ್ಲ. ನಾವೆಲ್ಲ ಒಟ್ಟಿಗೇ ಅ ಆ ಇ ಕಲಿತಿದ್ದು, ಆಡಿದ್ದು, ತಪ್ಪು ಲೆಕ್ಕ ಮಾಡಿ ಕಾವೇರಿ ಟೀಚರ್ ಹತ್ತಿರ ಬಾಸುಂಡೆ ಬರುವಂತೆ ಹೊಡೆಸಿಕೊಂಡಿದ್ದು..

ನಾನು ವಿನ್ನಿ ವಿನಿಮಯ ಮಾಡಿಕೊಂಡ ವಸ್ತುಗಳೆಷ್ಟೋ..ನನ್ನ ಬಳಪಕ್ಕೆ ಅವನ ಪುಟ್ಟ ಬಾತುಕೋಳಿ ಗೊಂಬೆ, ಮುರುಕು ಪೆನ್ನಿಗೆ ಬೆಂಕಿಪೊಟ್ಟಣದ ಚಾಪಾ... ಹೀಗೆ ಅದೆಷ್ಟೋ ಅವನ ಇಷ್ಟೊ ಇಷ್ಟದ ವಸ್ತುಗಳು ನನ್ನ ಸ್ಕೂಲ್ ಬ್ಯಾಗ್ ಸೇರಿದ್ದವು. ಶನಿವಾರ ಶಾಲೆಯಿಂದ ಮರಳುವಾಗ ಮಡಿಲು ತುಂಬುವಷ್ಟು ನೇರಳೆ ಹಣ್ಣು, ಕಾಡಿನ ಅಪರೂಪದ ಹಣ್ಣುಗಳು ವಿನ್ನಿಯ ಕೃಪೆಯಿಂದ ಸಿಗುತ್ತಿದ್ದವು. ನಮ್ಮ ನಡುವೆ ಮೇಲು ಕೀಳೆಂಬ ಭಾವ ಇರಲಿಲ್ಲ. ಅವನು ನಾಲ್ಕನೆ ಕ್ಲಾಸಿಗೆ ಶಾಲೆ ಬಿಟ್ಟಿದ್ದ. ಆದರೆ ದಾರಿಯಲ್ಲಿ ಸಿಕ್ಕರೆ 2-3 ವರ್ಷದವರೆಗೆ ನಮ್ಮಲ್ಲಿ ಅದೇ ಸಲುಗೆ ಇತ್ತು. ನಂತರ ನನ್ನ ಹೈಸ್ಕೂಲು, ಕಾಲೇಜು ಎಂದು ವಿನ್ನಿ ಮರೆತುಹೋಗಿದ್ದ..

ಆದರೆ ಇವತ್ತು ಏನಾಗಿಬಿಟ್ಟಿತ್ತು ಅವನಿಗೆ? ಬಾಲ್ಯದ ಒಳ್ಳೆಯ ಸ್ನೇಹಿತ. ಜೊತೆಯಲ್ಲೆ ಆಡಿ, ಕುಣಿದು, ಅತ್ತುಬೆಳೆದವರು. ಇವತ್ತು ನಮ್ಮ ಮನೆ ಜಗುಲಿ ಕಟ್ಟೆಯ ಮೇಲೆ ಕುಳಿತವನು ಮುಖ ತಿರುಗಿಸಿಕೊಂಡು ಅನಿವಾರ್ಯ ಎಂಬಂತೆ ನನ್ನ ಜೊತೆ ಮಾತನಾಡಿದ್ದ.. ಅದೂ ಬಹುವಚನ ಕೊಟ್ಟು!  "ಏನು.. ಸುಮಾ ಹೆಗಡ್ತೀರು... ಯಾವಾಗ ಬಂದ್ರಿ?...  ನಾನು "ಏನೋ ಗೊಣ್ಣೆ,ಹೇಗಿದಿಯಾ?" ಎಂದು ಸಲುಗೆಯಿಂದ ಮಾತನಾಡಲು ಹೊರಟವಳು...

ಆದರೆ ಅವನ ಬಹುವಚನ, ಮುಜುಗರ ನನ್ನ ಮಾತನ್ನು ಕಟ್ಟಿ ಹಾಕಿದ್ದವು..ನಾನು 'ಹೂಂ' ಎಂದು ತಲೆ ಅಲ್ಲಾಡಿಸಿ ಎದ್ದು ಒಳ ಹೋದೆ. ಯಾಕೋ... ಮಂಕು ಕವಿದಂತಾಗಿತ್ತು. ಎಲ್ಲಿ ಹೋಯ್ತು ಆ ಗೆಳೆತನ?

ಹೌದು.. ಇನ್ನು ಜೀವನವಿಡೀ ಆ ಕಂದಕವನ್ನು ನಾವಿಬ್ಬರೂ ಜೀವಂತವಾಗೇ ಇಡುತ್ತೇವೆ. ಜಾತಿಯ ಗೆರೆಯನ್ನು ನಾವಿಬ್ಬರೂ ದಾಟಲಾರೆವು. ಅಕಸ್ಮಾತ್ ನಾನು ಮೊದಲಿನ ಸ್ನೇಹವನ್ನು ಜೀವಂತವಾಗಿಸಲು ಯತ್ನಿಸಿದರೆ ಅವನೇ ಅದನ್ನು ಕೊಲ್ಲುತ್ತಾನೆ.. ಅಷ್ಟು ಕೀಳರಿಮೆ ಕಂಡಿದ್ದೇನೆ ಅವನ ಕಣ್ಣುಗಳಲ್ಲಿ!

ಕೇವಲ ಜಾತಿ ಬಂಧನದ ಬಗ್ಗೆ ಪಠ್ಯಪುಸ್ತಕಗಳಲ್ಲಿ ಓದಿದ್ದೆ... ಇವತ್ತು ಜೀವನದಲ್ಲಿ ಮೊದಲನೇ ಸಲ ನೇರವಾಗಿ ಅನುಭವಿಸಿದೆ...

Monday, July 26, 2010

ಇದೇನಾ ಪ್ರೀತಿಗೆ ಒಂದು ಸುಂದರ ಪ್ರತಿಕ್ರಿಯೆ

ಇದೇನಾ ಪ್ರೇಮ ಲೇಖನಕ್ಕೆ ಅಭಯ ಸಿಂಹ ಅವರು ನೀಡಿದ ಪ್ರತಿಕ್ರಿಯೆಯನ್ನು ಹಾಗೆ ಪ್ರಕಟಿಸಲು ಸಂತೋಷವಾಗುತ್ತಿದೆ. ನನ್ನ ಲೇಖನಿಗೆ ಇನ್ನಷ್ಟು ಸ್ಫೂರ್ತಿಯ ಇಂಕು ತುಂಬಿದ್ದಂತ್ತಾಗಿದೆ.  ಅಭಯ್ ಅವರ ಲೇಖನ ಓದಿ-ಸುಮಿ

ಹಿಂದೆ...

ಆಕೆ ರೂಪ. ನನಗೆ ಆಕೆಯ ಹೆಸರು ಗೊತ್ತು. ಆದರೆ ಆಕೆಗೆ ನನ್ನ ಹೆಸರೂ ಗೊತ್ತಿಲ್ಲ ಎನ್ನುವುದೂ ನನಗೆ ಚೆನ್ನಾಗೇ ಗೊತ್ತು. ಬಸ್ಸು ಹಾಳಾದಾಗ ನನ್ನಲ್ಲಿ ಸಹಾಯ ಕೇಳಲು ನಾಚುವಷ್ಟು ಅಪರಿಚಿತ ನಾನು ಆಕೆಗೆ. ಹೋಗಲಿ ನಾನೇ ಮಾತನಾಡಿಸುವೆ ಆಕೆಯನ್ನು ಎನ್ನುತ್ತಿರುವಾಗಲೇ, ನೀನೇ ನನ್ನ ಮಾತನಾಡಿಸಬಾರದೇ ಎನ್ನುವಂಥಾ ಕಡೆಕಣ್ಣ ನೋಟ ಬೀರಿದಳು ಆಕೆ ನನ್ನೆಡೆಗೆ. ನಾನು ಯಾಂತ್ರಿಕವಾಗಿ ಕೇಳಿದೆ, "ಈಗೇನು ಮಾಡುತ್ತೀರಿ?"
ಮುಂದಕ್ಕೆ...

ಆಕೆಯ ಕೆನ್ನೆಯ ಮೇಲೆ ಇನ್ನೇನು ನೀರಹನಿಗಳು ಉರುಳಲಿದ್ದವು. ಆದರೆ ಹುಡುಗಿಯರು ಹೀಗೆ ಇನ್ನೇನು ಅಳುವಂಥಾ ಅಸಹಾಯಕರಾಗಿರುವಾಗ ಎಷ್ಟು ಸುಂದರವಾಗಿ ಕಾಣಿಸುತ್ತಾರೆ ಎಂದು ಆಕೆಗೇನು ಗೊತ್ತು? ಆದರೆ ನಾನು ಸಾವರಿಸಿಕೊಂಡೆ. ಅಷ್ಟರಲ್ಲಿ ಆಕೆ "ಮನೆಯೂ ದೂರ... ಇಲ್ಲೆಲ್ಲೂ ಫೋನೂ ಇಲ್ಲ" ಎಂದಳು. ಹಾ! ದೂರದಲ್ಲೆಲ್ಲೂ ಹಾದು ಹೋಗುತ್ತಿದ್ದ ಕಾರೊಂದರ ಬೆಳಕಿನಿಂದ ಆಕೆಯ ಮುಂಗುರುಳು ಚಿನ್ನದ ಬಣ್ಣಕ್ಕೆ ತಿರುಗಿದ್ದವು. ಕಣ್ಣಾಲಿಗಳಲ್ಲಿ ತುಂಬಿದ್ದ ನೀರು ಕಣ್ಣಿಗೊಂದು ಹೊಸ ಹೊಳಪನ್ನೇ ನೀಡಿತ್ತು. ಆ ಒಂದು ಕ್ಷಣ ಆಕೆಗೆ ಸಹಾಯ ಮಾಡದೇ ಇನ್ನೇನೂ ದಾರಿಯೇ ಕಾಣಲಿಲ್ಲ ನನಗೆ. ನನಗೇ ಅರಿವಿಲ್ಲದಂತೆ ನನ್ನ ಬಾಯಿ ಉಲಿದಿತ್ತು, "ನಾನು ಬಿಟ್ಟು ಬಿಡಲಾ?"

ಒಂಟಿ ಹುಡುಗಿಯ ಮುಂದೆ ಹೀರೋ ಆಗುತ್ತಿದ್ದೇನೆಂದೇನಾದರೂ ಆಕೆ ಅಂದುಕೊಳ್ಳಬಹುದೇ? ಹೀಗೆ ಯೋಚನೆಯೊಂದು ಸುಳಿದು ಹೋಯಿತು ನನ್ನ ಮನಸಲ್ಲಿ. ಆದರೆ ಕೆಲವೊಮ್ಮೆ ಪರಿಸ್ಥಿತಿ ಹೇಗೆ ವಿಚಿತ್ರವಾಗಿರುತ್ತೆ ಅಂದ್ರೆ, ಕೆಟ್ಟ ಸಿನೆಮಾದಲ್ಲಿ ನೂರು ಬಾರಿ ನೋಡಿ ಹಳಸಿದ ದೃಶ್ಯವೂ ನಮ್ಮ ಜೀವನದಲ್ಲಿ ಅಷ್ಟೇ ಸ್ವಾಭಾವಿಕವಾಗಿ ಎದುರಾದರೂ ಅಸ್ವಾಭಾವಿಕವಾಗದಿರುವ ಹೋರಾಟ ನಡೆಸಿ ನಾವು ಪರಿಸ್ಥಿತಿಯನ್ನು ಚೋದ್ಯವನ್ನಾಗಿಸುತ್ತೇವಲ್ಲಾ! ಹಾ! ಎಂಥಾ ವೈಚಿತ್ರ್ಯ ಇದು! ನಮ್ಮಲ್ಲಿ ಇದ್ದಿದ್ದು ಒಂದೇ ಕೊಡೆ. ನನ್ನ ಕೈ ಆಕೆಯ ಕೈ ಮತ್ತೆ ಮತ್ತೆ ನನ್ನ ಕೈಗೆ ತಾಗುತ್ತಿತ್ತು. ನಾನೆಷ್ಟು ತಪ್ಪಿಸಿದರೂ ಮತ್ತೆ ಕೈ ತಾಗುತ್ತಿತ್ತು. ಒಂದು ಕ್ಷಣ, ಪರಿಸ್ಥಿತಿಯ ಉಪಯೋಗವನ್ನು ಪಡೆಯುತ್ತಿದ್ದಾಳೇಯೇ ಆಕೆ ಎಂದು ನನಗೇ ಅನುಮಾನವಾಯಿತು. "ನನ್ನಿಂದ ನಿಮಗೂ ತೊಂದರೆ..." ಎಂದಳು ಆಕೆ.

ನಾನು ಕೊಂಚ ನೇರವಾಗಿ "ಹೂಂ. ತೊಂದ್ರೆನೇ..ಆದ್ರೆ ನನ್ನ ತೊಂದ್ರೆಗಿಂತ ನಿಮ್ಮ ಫಜೀತಿ ಕಂಡು ಮರುಕ ಹುಟ್ಟಿತು. ಅದಕ್ಕಾಗಿ ಬಂದೆ. ಅಲ್ಲದೆ, ಇಂಥ ರಾತ್ರಿಯಲ್ಲಿ ಒಬ್ಬಳೇ ಹುಡುಗಿ ಹೋಗುವುದು ಸರಿ ಕಾಣಲಿಲ್ಲ" ಎಂದೆ. ನನ್ನ ಉದ್ದೇಶ ನೇರ ಎಂದು ತಿಳಿಸುವುದು ಅಗತ್ಯ ಎನಿಸಿತ್ತು ನನಗೆ. ಮಾತು ಹೊರಟ ನಂತರ, ಅಯ್ಯೋ! ಪಾಪ ತುಂಬಾ ತೀಕ್ಷ್ಣವಾಯಿತೇನೋ ನನ್ನ ಮಾತು ಎನಿಸಿ ತುಸು ಬೇಸರವಾಯಿತು. ಸುಮಾರು 5 ಕಿ.ಮೀ ದೂರ ಮೌನದ ಪಯಣ. ಆಕೆಯ ಮನೆಯ ದೀಪ ಕಾಣಿಸುತ್ತಿತ್ತು. ಅಪ್ಪ ಹೊರಗೇ ಕೂತು ಕಾಯುತ್ತಿದ್ದ. ಮುಖದಲ್ಲಿ ಆತಂಕದ ಕೋಪ. ಇನ್ನೇನು ಬೈಯಬೇಕು, ಅಷ್ಟರಲ್ಲಿ ನನ್ನನ್ನು ನೋಡಿ ಸುಮ್ಮನಾದರು.

"ಇವರ್ಯಾರು" ಕೇಳಿದರು ಅವರು. ಹ! ಆಕೆಗೆ ನನ್ನ ಹೆಸರೇ ಗೊತ್ತಿಲ್ಲವಲ್ಲಾ? ನಾನೇ ಹೇಳಿದೆ "ನಾನು... ವಿವೇಕ್" ಆಕೆ ನಡೆದದ್ದನ್ನೆಲ್ಲಾ ತನ್ನ ತಂದೆಗೆ ವಿವರಿಸಿದಳು. ನನಗೇನೂ ಕೇಳಿಸಲಿಲ್ಲ. ಆಕೆ ಕೈ ಆಡಿಸುತ್ತಾ, ದೊಡ್ಡದಾಗಿ ಕಣ್ಣು ಬಿಡುತ್ತಾ ಆಗಿದ್ದಕ್ಕೆ ಒಂದಿಷ್ಟು ರಂಗು ಸೇರಿಸುತ್ತಾ ಮಾತನಾಡುತ್ತಿದ್ದಾಗ ನಾವು ನಡೆದ ಐದು ಕಿಲೋಮೀಟರ್ ಒಂದು ರಾತ್ರಿಯಿಡೀ ನಡೆದ ಕಥೆಯಾಕಾಗಿರಬಾರದು ಎನಿಸಿತು ನನಗೆ. ಆದರೆ ಮರುಕ್ಷಣಕ್ಕೆ ಸ್ವಲ್ಪ ಸಿಲ್ಲಿ ಅನಿಸಿ ಅಲ್ಲಿಂದ ಹೊರಟೆ ನಾನು. ಅವರಲ್ಲೇ ರಾತ್ರಿ ಕಳೆಯುವಂತೆ ಅವರೆಲ್ಲರೂ ಒತ್ತಾಯ ಮಾಡಿದರೂ, ಪರಿಸ್ಥಿತಿಗೆ ನಾನು ತಲೆಕೊಟ್ಟರೆ ನದಿಯೊಂದರ ಸುಳಿಗೆ ಸಿಕ್ಕಿ ಚೂರಾಗುವ ಕುಂಬಾದ ಮರದ ಕೊಂಬೆಯಂತೆ ನಾನಾಗುವುದರಲ್ಲಿ ಸಂಷಯವೇ ಇರಲಿಲ್ಲ. ಹಾಗೇ ನಡೆದೆ, ಕೊಡೆ ಮಡಿಸಿ ಮಳೆಗೆ ತಲೆಕೊಟ್ಟು ನಡೆದೆ.

***

ಈ ಘಟನೆಯ ನಂತರ ಆಕೆ ನನಗೆ ಕಾಲೇಜಲ್ಲಿ ಸಿಕ್ಕಿದಾಗ ನಾನು ಆಕೆಯನ್ನು ಹೇಗೆ ಎದುರಿಸುವುದು ಎಂದು ಗೊತ್ತಾಗದೆ ತಬ್ಬಿಬ್ಬಾಗಿ ಮುಗುಳ್ನಕ್ಕೆ. ಆಕೆ ನರುನಕ್ಕಳು. ನಡೆದ ಆಘಟನೆ ಆಕೆಗೆ ನನ್ನ ಪರಿಚಯವನ್ನು ಮಾಡಿಸಿತ್ತು ಎನ್ನುವುದನ್ನು ಬಿಟ್ಟರೆ ಬೇರೇನೂ ಪ್ರಭಾವ ಆದಂತಿರಲಿಲ್ಲ ಆಕೆಯಲ್ಲಿ. ನನಗೆ ಆಕೆಯ ಇದೇ ಗುಣ ಇಷ್ಟವಾಗಿತ್ತು. ಹುಡುಗರಾಗಲಿ, ಹುಡುಗಿಯರಾಗಲಿ ಎಲ್ಲರನ್ನೂ ಚೆನ್ನಾಗಿ ನೋಡುವ, ಗೌರವಿಸುವ ಈ ಹುಡುಗಿ ನನಗಿಷ್ಟವಾಗಿದ್ದಳು. ಆದರೆ ಅದೇ ಕಾರಣಕ್ಕೆ ಆಕೆ ನನ್ನನ್ನು ವಿಶೇಷವಾಗಿ ಗುರುತಿಸಿ ಮಾತನಾಡಿಸುತ್ತಿರಲಿಲ್ಲ. ಆದರೆ ನನಗೆ ಮಾತ್ರ ದಿನದಿಂದ ದಿನಕ್ಕೆ ಅವನನ್ನು ಮಾತನಾಡಿಸುವ ಕಾತರ ಹೆಚ್ಚುತ್ತಿದೆ.

ಆದರೆ ವಿನಾಕಾರಣ ಹೇಗೆ ಮಾತನಾಡಿಸುವುದು? ನಾನೇ ಮೇಲೆ ಬಿದ್ದು ಮಾತನಾಡಿಸುವುದು ನನ್ನಿಂದಾಗದು. ಇಷ್ಟಕ್ಕೂ ನನಗೇಕೆ ಅವಳನ್ನು ಮಾತನಾಡಿಸಬೇಕು ಅನ್ನಿಸುತ್ತದೆ? ನಾನೇನಾದರೂ ಆಕೆಯನ್ನು ಪ್ರೀತಿಸುತ್ತಿದ್ದೇನಾ?! ಹಾಗಾದರೆ ಪ್ರೀತಿ ಅಂದರೆ ಹೀಗೆ ಇರುತ್ತಾ? ಇದ್ಯಾವುದಕ್ಕೂ ನನ್ನಲ್ಲಿ ಉತ್ತರವಿಲ್ಲ. ಇದಕ್ಕೆ ಉತ್ತರ ಕಂಡುಕೊಳ್ಳುವುದಾದರೂ ಹೇಗೆ?... ಇದೇನಾ ಪ್ರೇಮ...?