Saturday, July 9, 2011

ಶೋಷಣೆಯ ಸ್ವರೂಪವೊಂದು ಬದಲಾಗಿದೆಯ?...


ಅಜ್ಜಿ ಏನೇ ಹೇಳಲಿ, ಅವಳ ಅಭಿಪ್ರಾಯ ಏನೇ ಇರಲಿ ನನಗಂತೂ ಅಬ್ಬೆಯ ಮೇಲಿನ ಅಭಿಪ್ರಾಯ ಬದಲಾಗುವುದಿಲ್ಲ. ಅಬ್ಬೆಯನ್ನು ನೋಡಿದಾಗಲೆಲ್ಲ ಸ್ತ್ರೀ ಶೋಷಣೆಯ ಒಂದು ನಮೂನೆಯಾಗಿಯೇ ಕಾಣುತ್ತಾಳೆ.

ಗಂಡ ಸತ್ತಾಗ ಕತ್ತಿನಲ್ಲಿದ್ದ ತಾಳಿಯನ್ನು ತೆಗೆಯಲ್ಲಿಲ್ಲ ಎನ್ನುವ ಚಿಕ್ಕ ಕಾರಣಕ್ಕೇ ಅಷ್ಟೆಲ್ಲ ಅವಮಾನಕ್ಕೆ ಒಳಗಾದವಳು... ಸ್ವಾಭಾವಿಕ ಆಸೆಗಳನ್ನು ಆಪ್ತ ಗೆಳತಿ ಎಂದುಕೊಂಡವಳ ಹತ್ತಿರ ಹಂಚಿಕೊಂಡಿದ್ದಕ್ಕೇ ಆ ಆಪ್ತಗೆಳತಿಯ ನಿಷ್ಠೂರಕ್ಕೆ ಒಳಗಾದವಳು... ಸಾಯುವತನಕ ಪ್ರೀತಿಯನ್ನು ಕಾಣದೆ ಬದುಕುವ ಅನಿವಾರ್ಯತೆಗೆ ಒಳಗಾದವಳು... ಅಂಥವಳ ಮೇಲೆ ದ್ವೇಷವಾದರೂ ಹೇಗೆ ಹುಟ್ಟೀತು?

ಈ ವೈಧವ್ಯದ ಹೆಸರಿನಲ್ಲಿ ಸ್ತ್ರೀಯರು ಅನುಭವಿಸುವ ಹಿಂಸೆಗಿಂತ 'ಸಹಗಮನವೇ ಉತ್ತಮವಾದುದೇನೋ... ಆದರೆ ಅಮಾನುಷ ಎಂದು ಆ ಪದ್ಧತಿಯನ್ನು ಕೈಬಿಡಲಾಯಿತಂತೆ! ಹೆಣ್ಣು ತನ್ನ ಪ್ರಮುಖ ಹಕ್ಕೆಂದು ತಿಳಿಯುವ ಸೌಂದರ್ಯವನ್ನು ತನ್ನ ಸಮಾಧಾನಕ್ಕೆಂದು ವೈಧವ್ಯದ ಹೆಸರಿನಲ್ಲಿ ಹಾಳುಗೆಡವುದು ಅಮಾನುಷವಲ್ಲವೇ?! 'ಜೀವನ ಪೂರ್ತಿ ಸಂತೋಷ, ಪ್ರೀತಿ ಏನೂ ಇಲ್ಲದೆ ಒಂದು ವಸ್ತುವಿನಂತೆ ಬಾಳು' ಹೇರುವುದು ಅಮಾನುಷವಲ್ಲವೇ?

ಇದನ್ನೆಲ್ಲ ಅಜ್ಜಿಯನ್ನು ಕೇಳಬೇಕು ಎಂದುಕೊಳ್ಳುತ್ತೇನೆ. ಆದರೆ "ಹೌದು, ಎರಡಕ್ಷರ ಕಲಿತದ್ದಕೆ ಬುದ್ಧಿವಂತೆ ಅಂದುಕೊಂಡುಬಿಟ್ಟೆಯಾ? ಬೇರೆ ಏನಾದರೂ ಕೆಲಸ ಇದ್ದರೆ ನೋಡು ನಡೆ" ಎನ್ನುವ ಬೈಗುಳವಲ್ಲದೆ ಮತ್ತೇನೂ ಅಜ್ಜಿಯಿಂದ ನಿರೀಕ್ಷಿಸುವಂತಿಲ್ಲ.

ಹೌದು... ಈಗ ನಮ್ಮ ತಲೆಮಾರಿನಲ್ಲಿ ವೈಧವ್ಯದ ಹೆಸರಿನ ಶೋಷಣೆ ಇಲ್ಲ. ಮರುಮದುವೆ ಸ್ವಲ್ಪ ಕಷ್ಟ ಎನಿಸಿದರೂ ಒಪ್ಪಿಕೊಳ್ಳುತ್ತಾರೆ. ಆದರೆ... ಆದರೆ ಶೋಷಣೆ ಎನ್ನುವುದು ಸಂಪೂರ್ಣವಾಗಿ ಮಾಯವೇನೂ ಆಗಿಲ್ಲ. ಸ್ವರೂಪ ಬದಲಾಗಿದೆ ಅಷ್ಟೇ!

ಇಷ್ಟೆಲ್ಲ ಮಾಡಿದರೂ ಚಕಾರವೆತ್ತದ ಅಬ್ಬೆ... ಕೆಲವೊಮ್ಮೆ ಅಪ್ಪನ ತಪ್ಪಿದ್ದರೂ ಸಹಿಸಿಕೊಂಡು ಸುಮ್ಮನಿರುವ ಅಮ್ಮ... ಬಸವ ಕುಡಿದುಬಂದು ಹೊಡೆದರೂ ವರ್ಷಕ್ಕೊಂದು ಅವನಿಗೊಂದು ಮಗು ಹೆತ್ತುಕೊಡುವ ಕೆಲಸದ ಮಾದಿ...ಒಂದು ರೀತಿ ಇವರೆಲ್ಲ ಶೋಷಣೆಗೆ ಒಳಗಾಗುತ್ತಿರುವವರೇ ಅಲ್ಲವೆ?

ಕಾಲೇಜಿನಿಂದ ಹೊರಬಿದ್ದರೆ ಎಷ್ಟು ಹೊತ್ತಿಗೆ ಮನೆ ಸೇರಿಕೊಳ್ಳುತ್ತೀನೋ ಎನಿಸುತ್ತದೆ. ಒಂದು ಹೆಣ್ಣು ಮನೆಯಿಂದ ಹೊರಬಿದ್ದಳು ಎಂದರೆ ಕಣ್ಣಲ್ಲೇ ಮೈಸವರುವ ನೂರಾರು ಕಣ್ಣುಗಳು... ರಾತ್ರಿ ಸ್ವಲ್ಪ ತಡವಾದರೂ ಶೀಲವನ್ನೇ ಶಂಕಿಸುವ ನಾಲಗೆಗಳು... ಬಸ್ಸು, ಜನನಿಬಿಡ ಪ್ರದೇಶಗಳಲ್ಲಂತೂ ಸ್ತ್ರೀಯರ ಸ್ಥಿತಿ ದೇವರಿಗೇ ಪ್ರೀತಿ... ಸಿಕ್ಕಿದ್ದೇ ಛಾನ್ಸು ಎಂದು ಕಂಡಕಂಡ ಕಡೆಯಲೆಲ್ಲ ಮುಟ್ಟುವ ಪೋಲಿ ಕೈಗಳನ್ನು ಮುರಿದು ಹಾಕಿಬಿಡುವ ಕೋಪ ಬರುತ್ತದೆ...ಆದರೆ ಆ ಧೈರ್ಯವೂ ಇಲ್ಲ. ಅಷ್ಟು ಶಕ್ತಿಯೂ ಇಲ್ಲ.

ಹುಡುಗಿಯರನ್ನು ಕಂಡರೆ ಓವರ್ ಆಕ್ಟಿಂಗ್ ಮಾಡುವ ಹಿಸ್ಟರಿ ಲೆಕ್ಚರರ್ ನ್ನಂತೂ ಚಚ್ಚಿಹಾಕಿಬಿಡುವಷ್ಟು ಕೋಪ ಬರುತ್ತದೆ. ಆದರೆ ಮಾರ್ಕ್ಸ್, ನೋಟ್ಸ್ ಎಂದು ಅವನ ಮುಂದೆ ಹಲ್ಲು ಕಿರಿಯುವ ಅನಿವಾರ್ಯತೆ...

ಹೀಗೆ ವಿಚಾರ ಮಾಡುತ್ತ ಕುಳಿತರೆ ಹೆಣ್ಣು ಜನ್ಮವೇ ಒಂದು ಕರ್ಮ ಎಂದು ಅನಿಸಲಿಕ್ಕೆ ಪ್ರಾರಂಭವಾಗುತ್ತದೆ...

ಛೇ... ನಾಳೆ ಹಿಸ್ಟರಿ ನೋಟ್ಸ್ ಸಬ್‌ಮಿಟ್ ಮಾಡಬೇಕು... ಇನ್ನೆಲ್ಲಿ ತಪ್ಪು ಕಂಡುಹಿಡಿದು ಕಾಟ ಕೊಡುತ್ತಾನೋ ಪುಣ್ಯಾತ್ಮ...

Saturday, April 16, 2011

ಅಬ್ಬೆ! ಅದೊಂದು ಮುಂಡೇದು!!

ವಿಧವೆ ಎಂದರೆ ಹೀಗಿರಬೇಕು, ಸುಮಂಗಲಿ ಎಂದರೆ ಹೀಗಿರಬೇಕು. ಹೆಣ್ಣು ಅಂದರೆ ಹೀಗಿರಬೇಕು, ಗಂಡು ಎಂದರೆ ಹೀಗಿರಬೇಕು-ಹೀಗೆ ಎಲ್ಲ ಶಬ್ದಗಳಿಗೂ ಸಮಾಜ ಒಂದು ಕಲ್ಪನೆಯನ್ನು ಬೆಳೆಸಿಕೊಂಡಿದೆ. ಅದಕ್ಕೆ ಸ್ವಲ್ಪ ಧಕ್ಕೆ ಬಂದರೂ ಸಮಾಜದ ಚುಚ್ಚು ನೋಟ, ಮಾತು ಎದುರಿಸಲೇಬೇಕು. ಸುತ್ತಲಿನ ಸಮಾಜ ನೀಡುವ ಹಿಂಸೆಗಿಂತ ಮನಸಿನ ವಿರುದ್ಧ ನಡೆವ ನೋವೇ ಲೇಸು ಎಂದು ಎಷ್ಟೋ ಬದುಕುತ್ತಾರೆ. ಇದಕ್ಕೆ ಅಬ್ಬೆಯ ಜೀವನ ಒಂದು ಉದಾಹರಣೆಯಷ್ಟೆ.

ಅಪ್ಪ, ಅಜ್ಜ ಎಲ್ಲರೂ ಅವರಿಗೆ ತಿಳಿದಷ್ಟು ಹೇಳಿದರೂ ಅಬ್ಬೆಯ ಬಗ್ಗೆ ಇನ್ನೂ ತಿಳಿದುಕೊಳ್ಳುವ ಬಯಕೆಯನ್ನು ನನ್ನ ಕೈಲಿ ಹತ್ತಿಕ್ಕಿಕೊಳ್ಳಲಾಗಲಿಲ್ಲ.

ಅಬ್ಬೆಯ ಬಗ್ಗೆ ಇವರೆಲ್ಲರಿಗಿಂತ ಬಲ್ಲವಳು ಅಜ್ಜಿ. ಆದರೆ ಅಜ್ಜಿಯ ಹತ್ತಿರ ಅಬ್ಬೆಯ ಬಗ್ಗೆ ಕೇಳಲು ಭಯ. ಅಜ್ಜಿಗೆ ಮುಂಚಿನಿಂದಲೂ ಏನೋ ಅಸಮಾಧಾನ. ಅವಳೆದುರು ಅಬ್ಬೆಯ ಸುದ್ದಿ ಎತ್ತಿದರೆ ಸಾಕು 'ಅದೊಂದು ಮುಂಡೇದು' ಅಂತಲೇ ಶಪಿಸುತ್ತಿದ್ದಳು. ಆದರೆ ಇವತ್ತು ಅಜ್ಜಿ ಏನೇ ಹೇಳಿದರೂ ಸರಿ, ಅಬ್ಬೆಯ ಬಗ್ಗೆ ಕೇಳಲೇಬೇಕು ಎಂದು ನಿರ್ಧರಿಸಿದ್ದೆ. ಅಜ್ಜಿಯನ್ನು ದಿನವಿಡೀ ಬಿಟ್ಟುಬಿಡದೆ ಕಾಡಿದೆ.

ಅಜ್ಜಿ ಅಬ್ಬೆಗೆ ಬೈಯುವ ಎಂದಿನ ಶೈಲಿಯಲ್ಲಿ 'ಅದೊಂದು ಮುದುಕಿ (ಅಜ್ಜಿಗೆ ತಾನೂ ಮುದುಕಿ ಎನ್ನುವುದು ಮರೆತುಹೋಗಿರಬೇಕು!) ಎಂದೇ ಪ್ರಾರಂಭಿಸಿದಳು. ಅಜ್ಜಿ ಅಬ್ಬೆ ಸರಿಸುಮಾರು ಸಮಾನ ವಯಸ್ಕರು. ಅಬ್ಬೆಯ ಗಂಡ ಸಾಯುವ ಹೊತ್ತಿಗೆ ಆಗಷ್ಟೇ ಅಜ್ಜಿ ಅಜ್ಜನ ಮದುವೆಯಾಗಿ ಬಂದಿದ್ದಳಂತೆ.

ಗಂಡ ಸತ್ತಾಗ ಅಬ್ಬೆಗೆ ಏಳೋ ಎಂಟೋ ವಯಸ್ಸು. ಅಬ್ಬೆಯ ಅಳು ನೋಡಿದರೆ ಎಂಥವರಿಗಾದರೂ ಪಾಪ ಅನ್ನಿಸುತ್ತಿತ್ತಂತೆ. ಜೋರಾಗಿ ಅಳುತ್ತಿದ್ದಳಂತೆ. ಅವಳಿಗೆ ಗಂಡ ಸತ್ತ ಎನ್ನುವ ದುಃಖಕ್ಕಿಂತ ತನ್ನ ಬಳೆ, ಒಡವೆಗಳನ್ನು ತೆಗೆದು, ತಲೆ ಬೋಳಿಸಿ, ಕೆಂಪು ಸೀರೆ ಉಡಿಸುತ್ತಾರೆ ಎನ್ನುವುದೇ ಅವಳ ಅಳುವಿಗೆ ಕಾರಣವಾಗಿತ್ತಂತೆ. ಗಂಡನ ಶವ ಸಂಸ್ಕಾರಕ್ಕೆ ಅಬ್ಬೆಯನ್ನು ಹಿಡಿದು ಎಳೆದುಕೊಂಡು ಬರಲು ನಾಲ್ಕೈದು ಜನ ಬೇಕಾಯಿತಂತೆ.

'ಅಯ್ಯೋ! ನನ್ನ ಕೂದಲು ತೆಗೆಯಬೇಡಿ, ನನ್ನ ಕಾಲುಂಗುರ... ನನ್ನ ಬಳೆ...' ಎಂದು ಕೂಗುತ್ತಿದ್ದಳಂತೆ. ಯಾರು ಏನೇ ಹೇಳಿದರೂ ಮಾಡಿದರೂ ತನ್ನ ಮಾಂಗಲ್ಯ ಸರಕ್ಕೆ ಇರುವ ತಾಳಿಯನ್ನು ತೆಗೆದುಕೊಡಲಿಲ್ಲವಂತೆ. ಅದನ್ನು ಅಬ್ಬೆ ಒಂದು ದಾರಕ್ಕೆ ಪೋಣಿಸಿ ಇಂದೂ ಧರಿಸುತ್ತಾಳಂತೆ.

ಅಬ್ಬೆಗೆ ಸುಮಾರು 15-16 ಆಗುವವರೆಗೂ ಅಬ್ಬೆ-ಅಜ್ಜಿ ಒಳ್ಳೆಯ ಸ್ನೇಹದಿಂದಲೇ ಇದ್ದರಂತೆ.. ಸಂಜೆ ತಿರುಗಾಡಲು ಅಂತ ಹೋದರೆ ಅಬ್ಬೆ ಅಜ್ಜಿಯ ಹತ್ತಿರ ಏನೇನೋ ಹೇಳುತ್ತಿದ್ದಳಂತೆ. 'ನನಗೆ ಹಾಗೆ ಆಸೆಯಾಗುತ್ತದೆ, ಹೀಗೆ ಆಸೆಯಾಗುತ್ತದೆ ಎನ್ನುತ್ತಿದ್ದಳಂತೆ. 'ಛೀ, ಅಸಹ್ಯ. ಎಲ್ಲ ಬಿಟ್ಟವಳು ಅವಳು' ಎಂದು ಅಜ್ಜಿ ಮುಖ ಸಿಂಡರಿಸಿಕೊಂಡಳು.

ಅಂದಿನಿಂದ ಅಜ್ಜಿ ಅಬ್ಬೆಯೊಂದಿಗೆ ಮಾತು ಬಿಟ್ಟಳಂತೆ. ಇದಿಷ್ಟು ಅಜ್ಜಿಯಿಂದ ತಿಳಿದು ಬಂದಿದ್ದು . ಅಜ್ಜಿ ತನ್ನದೇ ಅದ ದೃಷ್ಟಿಕೋನದಲ್ಲಿ ಅಬ್ಬೆಯ ಬಗ್ಗೆ ಹೇಳಿದ್ದಳು. ಆದರೆ ಅಬ್ಬೆಯಲ್ಲಿ ನನಗಾವ ದೋಷವೂ ಕಾಣಿಸುತ್ತಿಲ್ಲ...ಯಾಕೆಂದರೆ... ಅಬ್ಬೆ! ಅದೊಂದು ಮುಂಡೇದು!!

Saturday, April 9, 2011

ಸ್ವಂತಿಕೆಯೂ, ಡಿಪೆಂಡೆನ್ಸಿಯೂ..

ಸಂಬಂಧಗಳು ಅಂದರೆ ಹೀಗೆ... ಒಂದು ರೀತಿಯಲ್ಲಿ ಬಗೆಹರಿಯದ ಗೊಂದಲಗಳು. ಯಾವ ಸಂಬಂಧಗಳನ್ನು ಹೇಗೆ ನೋಡಬೇಕೋ, ಯಾರ ಜೊತೆ ಹೇಗೆ ಇರಬೇಕೋ, ಅದನ್ನು ಹೇಗೆ ನಿಭಾಯಿಸಬೇಕೋ... ಎಲ್ಲ ಬರಿ ಗೋಜಲು...ಗೋಜಲು.

ಭಾರತೀಯ ಗೆಳೆತನದ ನಂತರ ಮಾನವ ಸಂಬಂಧಗಳು, ಅದರೊಳಗೆ ಆಧಾರಪಡುವುದು, ಪ್ರೀತಿ, ಅಗತ್ಯ... ಹೀಗೆ ಮೊದಲಾದವುಗಳ ಬಗ್ಗೆ ವಿಪರೀತ ಸೀರಿಯಸ್ಸಾಗಿ ವಿಚಾರ ಮಾಡಲೇಬೇಕಾಗಿ ಬಂದಿದೆ.

ಯಾರಾದರೂ ನನ್ನ ಮೇಲೆ ಮಾನಸಿಕವಾಗಿ ಡಿಪೆಂಡ್ ಆದರೆ ಭಾರವೆನಿಸುತ್ತದೆ. ಅದೇ ರೀತಿ ನಾನೂ ಕೂಡಾ ಯಾರಿಗಾದರೂ ಭಾರ ಎನಿಸಿರಬಹುದಲ್ಲ! ನಾನೂ ಸಂಪೂರ್ಣವಾಗಿ ಭಾವನಾತ್ಮಕವಾಗಿ ಸ್ವತಂತ್ರಳಾದರೆ? ಯಾವುದಕ್ಕೂ

ಯಾರನ್ನೂ ಅವಲಂಬಿಸದಿದ್ದರೆ...? ಹೀಗೆ ಬಹಳ ದಿನಗಳಿಂದ ಅಂದುಕೊಂಡಿದ್ದೆ. ಆದರೆ ಇದು ತಪ್ಪು ಎಂದು ಬೇಗನೇ ತಿಳಿಯಿತು.

ನನಗೆ ತಿಳುವಳಿಕೆ ಬಂದಾಗಿನಿಂದಲೂ ಅಮ್ಮನೇ ತಲೆ ಸ್ನಾನ ಮಾಡಿಸುತ್ತಿದ್ದಿದ್ದು, ದಿನಾ ಕೂದಲು ಬಾಚುವುದೂ ಅವಳದೇ ಕೆಲಸ. ಇವರೆಡು ಕೆಲಸಗಳನ್ನು ಅವಳೇ ಮಾಡಿಕೊಡಬೇಕಿತ್ತು. ಇನ್ಯಾರು ಮಾಡಿದ್ರೂ ಸರಿಯೇ ಆಗುತ್ತಿರಲಿಲ್ಲ. ಇದೇ

ಕಾರಣದಿಂದ ಅಮ್ಮನ ಬಿಟ್ಟು ಎಲ್ಲೂ ಹೋಗುತ್ತಿರಲಿಲ್ಲ. ಯಾವ ಸಂಬಂಧಿಕರ ಮನೆಯಲ್ಲೂ ಉಳಿಯುತ್ತಿರಲಿಲ್ಲ. ಉಳಿದರೂ 2 ದಿನಗಳಲ್ಲೇ ವಾಪಸ್.

ನನ್ನ ಈ ಸ್ವಭಾವದಿಂದ ಅಮ್ಮನೋ ಬೇಸತ್ತು ಹೋಗಿದ್ದಳು. "ನೀನಂತೂ ಯಾವಾಗ ನಿನ್ನ ಕೆಲಸಗಳನ್ನು ಮಾಡಿಕೊಳ್ಳಲು ಕಲಿಯುತ್ತಿಯೋ... ಮದುವೆಯಾಗಿ ಗಂಡನ ಮನೆ ಸೇರಬೇಕಾದವಳು. ಅಲ್ಲಿ ಹೇಗೆ ನಿಭಾಯಿಸುತ್ತಿಯೋ... ನಿನ್ನ

ಅಮ್ಮ ನಿನಗೆ ಕಲಿಸಿದ್ದೇ ಇದನ್ನ ಎಂದು ಕೇಳುವ ಹಾಗೆ ಮಾಡುತ್ತಿಯೋ ಏನೋ ಅಂತ ಗೊಣಗುತ್ತಲೇ ತಲೆ ಸ್ನಾನ ಮಾಡಿಸುತ್ತಿದ್ದಳು. ಇದು ಪ್ರತಿ ವಾರದ ಗೊಣಗಾಟವಾದ್ದರಿಂದ ಆ ಬಗ್ಗೆ ಬಹಳ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಆದರೆ ಆಗೆಲ್ಲ

ಇನ್ನು ಮುಂದೆ ನಾನೇ ತಲೆಸ್ನಾನ ಮಾಡಿಕೊಳ್ಳಬೇಕು. ಅಮ್ಮನ ಮೇಲೆ ಡಿಪೆಂಡ್ ಆಗಲೇಬಾರದು ಎನಿಸುತ್ತಿತ್ತು. ಆದರೆ ಅಮ್ಮನ ಕೈಯಿಂದ ಸ್ನಾನ ಮಾಡಿಸಿಕೊಳ್ಳುವ ಆನಂದ ಕಳೆದುಕೊಳ್ಳಲು ಸಿದ್ಧಳಿರಲಿಲ್ಲ.

ಈಗ ಕಾಲೇಜಿಗೆ ಸೇರಿದ ಮೇಲೆ ಆ ಅವಕಾಶ ತಪ್ಪಿ ಹೋಗಿತ್ತು. ಹಾಸ್ಟೆಲಿನಲ್ಲಿ ನಾನೇ ತಲೆಸ್ನಾನ ಮಾಡಿಕೊಳ್ಳುವುದು ಅನಿವಾರ್ಯವಾಗಿತ್ತು. ಇವತ್ತು ಮನೆಗೆ ಬಂದಾಗ ಇನ್ನು ಅಮ್ಮನಿಂದ ಬೈಸಿಕೊಳ್ಳುವುದೇಕೆಂದು ನಾನೇ ತಲೆಸ್ನಾನ

ಮಾಡಿಕೊಂಡೆ. ಬಾತ್ ರೂಮಿನ ಬಾಗಿಲು ತೆರೆದಾಗ ಎದುರಿಗೆ ಅಮ್ಮ ನಿಂತಿದ್ದಳು. ಅವಳ ಕಣ್ಣತುಂಬ ನೀರಿತ್ತು!!

ಒಂದು ತರಹದ ಅಸಮಾಧಾನದಲ್ಲಿ "ನೀನೆ ಸ್ನಾನ ಮಾಡಿಕೊಂಡ್ಯಾ ಅಂತ ಕೇಳಿದಳು. ನನಗೆ ಒಂದು ಸಲ ಗಲಿಬಿಲಿ. ನಾನು ಏನು ಮಾಡಿದೆ ಎಂದು ಅಮ್ಮ ಈ ಪ್ರಶ್ನೆ ಕೇಳುತ್ತಿದ್ದಾಳೆ? ಕಣ್ಣೀರು ಹಾಕುವಂತಹದ್ದು ಆಗಿದ್ದಾದರೂ ಏನು?

"ಮೊದಲೆಲ್ಲ ನಾನು ಇಲ್ಲದೆ ತಲೆ ಸ್ನಾನ ಮಾಡಿದವಳೇ ಅಲ್ಲ. ನಾನು ಬರುವವರೆಗೂ ಅಮ್ಮ ಬಾರೆ, ಸ್ನಾನ ಮಾಡಿಸೆ ಎಂದು ಕರೆಯುತ್ತಿದ್ದೆ. ಈಗ ಎಲ್ಲ ದೊಡ್ಡವರಾಗಿಬಿಟ್ಟೀದ್ದೀರಲ್ಲ. ರೆಕ್ಕೆ ಬಲಿತಿದೆ. ಹಾರಿಹೋಗಲು ಇನ್ನೇನು? ಇನ್ನು ಮುಂದೆ

ಅಮ್ಮನೂ ಬೇಡ. ಅಪ್ಪನೂ ಬೇಡ. ಎಲ್ಲ ನೀವೇ ಮಾಡಿಕೊಳ್ಳಿ ಎನ್ನುತ್ತಾ ಕಣ್ಣೀರಾದಳು.

ಅಮ್ಮನ ದುಃಖಕ್ಕೆ ಅರ್ಥ ಕಂಡಿತ್ತು. ಮಾನವ ಸಂಬಂಧಗಳಲ್ಲಿ ಕನಿಷ್ಠ ಮಟ್ಟದ ಡಿಪೆಂಡೆನ್ಸಿ ಬೇಕೇಬೇಕು. ಇಲ್ಲವೆಂದರೆ ನಮ್ಮನ್ನು ಪ್ರೀತಿಸುವಾರಿಗೆ ಇನ್ ಸೆಕ್ಯುರಿಟಿ ಕಾಡುವಂತೆ ಮಾಡಿಬಿಡುತ್ತೇವೆ.-ಸುಮಿ

Friday, March 4, 2011

ಭಾರವೆನಿಸುವ ಅವಳ ಗೆಳೆತನ...

ಹಿಂದೆ....
"ಯಾಕೆ ಅವಳಿಗೆ ಆ ತರ ಮಾಡುತ್ತೀಯಾ? ಪಾಪ. ಎಂದು ನನಗೇ ಬೈಯುತ್ತಾಳೆ. ನನಗೂ ಇದೆಲ್ಲ ಹೊಸದು"...ಮುಂದಕ್ಕೆ...

ಸಂಬಂಧಗಳನ್ನು ಸಂಭಾಳಿಸುವುದು ತುಂಬಾ ಕಷ್ಟವಪ್ಪ.. ಅಪ್ಪ ಅಮ್ಮ, ಅಣ್ಣ, ಅಕ್ಕ, ಅಜ್ಜಿ ಅಜ್ಜ..ಗೆಳೆಯ, ಗೆಳತಿ.. ಹೀಗೆ ಮಾನವ ಸಂಬಂಧಗಳಿಗೆ ಹೆಸರನ್ನು ನೀಡಿ, ಚೌಕಟ್ಟು ಮಾಡಿದ್ದರೂ ಮಾನವ ಸಂಬಂಧಗಳ ಉದ್ದ ಅಗಲಗಳನ್ನು ಅಳೆಯುವುದು ಅಸಾಧ್ಯ.

ಇತ್ತೀಚೆಗೆ ಭಾರತಿ ಏನಾದರೂ ಹಾಗೆ ಹೀಗೆ ಎಂದು ತನ್ನ ಪರ್ಸನಲ್ ವಿಷಯಗಳನ್ನು ಚರ್ಚೆ ಮಾಡಲು ಬಂದರೆ ಸಿಡುಕುತ್ತೇನೆ. ಸಾಕಪ್ಪಾ ಅವಳ ಸಹವಾಸ ಎನಿಸಿಬಿಟ್ಟಿದೆ. ಹೇಗಾದರೂ ಅವಳ ಕೈಯಿಂದ ತಪ್ಪಿಸಿಕೊಂಡರೆ ಸಾಕು ಎಂದೆನಿಸುತ್ತದೆ. ಕುಮ್ಮಿ, ಭಾರತಿ ಇಬ್ಬರೂ ನನಗೆ ಗೆಳತಿಯರೇ.. ಆದರೆ ಎಷ್ಟು ವ್ಯತ್ಯಾಸ. ನಾನು ಆ ಗೆಳೆತನವನ್ನು ನಿಭಾಯಿಸುವುದರಲ್ಲಿ ಅಜಗಜಾಂತರ.

ನಾನೂ ಬಹಳಷ್ಟು ಸಾರಿ ವಿಚಾರ ಮಾಡಿದ್ದೇನೆ.. ಭಾರತಿಯ ಗೆಳೆತನ ಯಾಕೆ ಉಸಿರುಕಟ್ಟಿಸುತ್ತದೆ ಎಂದು .. ಕುಮ್ಮಿ ಪ್ರತಿಯೊಂದಕ್ಕೂ ನನ್ನನ್ನು ಎದುರು ನೋಡುತ್ತ ಕುಳಿತುಕೊಳ್ಳುವುದಿಲ್ಲ. ಗೆಳತಿಯೆಂದು ನನ್ನನ್ನು ಬಹಳ ಹಚ್ಚಿಕೊಂಡರೂ ಯಾವುದಕ್ಕೂ ನನ್ನ ಮೇಲೆ ಡಿಪೆಂಡಾಗಿಲ್ಲ. ನಾನು ಅನ್ಯಾಯವಾಗಿ ಅವಳ ಮೇಲೆ ರೇಗಿದರೂ ತಪ್ಪೆಣಿಸುವುದಿಲ್ಲ. ಸ್ವಲ್ಪ ಹೊತ್ತಿಗೇ ನಾವಿಬ್ಬರೂ ಒಂದು. ಆದರೆ ಕುಮ್ಮಿ ಜೊತೆ ಒಂದು ತರಹ ಸ್ವಾತಂತ್ರ್ಯ ಅನುಭವಿಸುತ್ತೇನೆ.

ಆದರೆ ಭಾರತಿ ವಿಷಯದಲ್ಲಿ ಹಾಗಾಗುವುದೇ ಇಲ್ಲ. ಅಪ್ಪಿತಪ್ಪಿ ನಾನವಳ ಮೇಲೆ ರೇಗಿದರೆ ಮುಗಿದೇ ಹೋಯಿತು. ಒಂದು ನಾಲ್ಕು ದಿನ ಅದನ್ನೇ ಮನಸ್ಸಿನಲ್ಲಿರಿಸಿ ಕೊಳ್ಳುತ್ತಾಳೆ. ನನ್ನ ಪ್ರತಿ ಮಾತಿಗೂ ಅದರ ಹಿಂದಿನ ಅರ್ಥವನ್ನು ಹುಡುಕುತ್ತಾ ಹೊರಡುತ್ತಾಳೆ. ನೀನ್ಯಾಕೆ ಹೀಗೆ ಮಾಡಿದೆ, ಹಾಗೆ ಯಾಕೆ ಹೇಳಿದೆ ಎಂದು ಪ್ರಶ್ನೆಗಳಿಂದ ತಿವಿಯುತ್ತಾಳೆ... ಅಯ್ಯೋ, ಅವಳ ಜೊತೆ ಇರುವುದೊಂದು ದೊಡ್ಡ ಟಾರ್ಚರ್...

ಇದರಲ್ಲಿ ಅವಳ ತಪ್ಪೇನೂ ಇಲ್ಲ. ಆದರೆ ನನ್ನಿಂದ ಅವಳನ್ನು ಸಹಿಸಲೂ ಸಾಧ್ಯವಿಲ್ಲ. ಅವಳ ಜೊತೆ ಹೇಗೆ ಇರಬೇಕು, ಹೇಗೆ ಮಾತಾಡಬೇಕು ಎಂದೇ ಅರ್ಥವಾಗುವುದಿಲ್ಲ. ನನ್ನ ಯಾವ ಮಾತನ್ನು ಹೇಗೆ ಅರ್ಥೈಸಿಕೊಳ್ಳುತ್ತಾಳೋ, ಯಾವಾಗ ಅಳುತ್ತಾಳೋ... ಅವಳ ಜೊತೆ ಇರುವಷ್ಟು ಹೊತ್ತೂ ಒಂದು ತರಹ ಭಯದಲ್ಲೇ ಕಳೆಯುತ್ತೇನೆ..

ಭಾರತಿಗೆ ನನ್ನ ಈ ಭಾವನೆ ಅರ್ಥವಾಗುತ್ತಿಲ್ಲವೆ? ಖಂಡಿತ ಗೊತ್ತು. ಆದರೆ ಅದನ್ನು ಒಪ್ಪಿಕೊಳ್ಳಲು ಅವಳೇ ಸಿದ್ಧಳಿಲ್ಲ. ಪದೇ ಪದೇ ವಿವಿಧ ಪ್ರಶ್ನೆಗಳನ್ನು ಹಾಕಿ ನಾನು ಅವಳನ್ನು ನೆಗ್ಲೆಕ್ಟ್ ಮಾಡುತ್ತಿದ್ದೇನೆ ಎನ್ನುವುದನ್ನು ಕನ್‌ಫರ್ಮ್ ಮಾಡಿಕೊಳ್ಳುತ್ತಾಳೆ. ಭಾರತಿ ಗೆಳೆತನದಿಂದ ಸ್ವಲ್ಪ ಕಸಿವಿಸಿ ಉಂಡಿದ್ದರೂ, ಅದರಿಂದ ನಾನು
ಕಲಿತದ್ದು ಮಾತ್ರ ಬಹಳ.

ಯಾವುದೇ ಸಂಬಂಧವಿರಲಿ ಒಂದು ಮಿತಿ ಇದ್ದರೇ ಸುಂದರವಾಗಿರುತ್ತದೆ. ಹೌದು, ಪ್ರೀತಿಗೆ ಯಾವುದೇ ಗಡಿ, ಮಿತಿ ಇಲ್ಲ. ಆದರೆ ಅಂತ ಪ್ರೀತಿಯಂತಹ ಪ್ರೀತಿಯೂ ಅತಿಯಾದರೆ ವಿಷವಾಗುತ್ತದೆ, ಉಸಿರುಗಟ್ಟಿಸುತ್ತದೆ. ಯಂಡಮೂರಿ ಹೇಳುವಂತೆ 'ಪ್ರೀತಿ ಎಂದರೆ ನಮ್ಮ ಇಷ್ಟಗಳನ್ನು ಬಲಿಕೊಡುವುದಲ್ಲ. ನಮ್ಮ ಇಷ್ಟಗಳೊಂದಿಗೆ ಅವರ ಇಷ್ಟಗಳನ್ನೂ ಗೌರವಿಸುವುದೇ ಪ್ರೀತಿ'. ತನ್ನತನವನ್ನು ತೊರೆದು ಪ್ರೀತಿಸಿದರೆ ಖಂಡಿತ ಅದೊಂದು 'ಗ್ರೇಟ್' ಅಲ್ಲ.

ಅರಳಿಸುವುದೇ ಪ್ರೀತಿ, ಗೆಳೆತನ. ಸ್ನೇಹದ ಸಲುಗೆಯನ್ನು 'ಟೇಕನ್ ಫಾರ್ ಗ್ರ್ಯಾಂಟೆಡ್' ಎಂದುಕೊಂಡರೆ ತೊಂದರೆ ಗ್ಯಾರಂಟಿ. ಗೆಳೆತನದಲ್ಲಿ ಪರಸ್ಪರ ಸಮಾನ ಪ್ರೀತಿ ಇದ್ದರೆ ಸರಿ, ಸ್ವಲ್ಪ ಹೆಚ್ಚು ಕಡಿಮೆ ಆಯಿತು ಎಂದರೂ, ಹರಿದು ಹೋಗುವ ನಾಜೂಕು ಎಳೆ ಗೆಳೆತನ...-ಸುಮಿ

Friday, December 24, 2010

ಮಾನಸಿಕ ಅವಲಂಬನೆ

ಭಾರತಿ... ನಿಜಕ್ಕೂ ಅವಳು ಅವಳ ರೂಪದಂತೆ ಸುಂದರ ಮನಸಿನ ಹುಡುಗಿ. ಪ್ರಭಾವಿ ಶ್ರೀಮಂತರ ಮನೆಯ ಒಬ್ಬಳೇ ಮಗಳು. ಸ್ವಲ್ಪವೂ ಸೊಕ್ಕಿಲ್ಲ. ಶಾಂತ ಸ್ವಭಾವ. ಅನವಶ್ಯಕವಾಗಿ ಯಾರನ್ನೂ ಜರೆದವಳಲ್ಲ. ಆದರೆ ಒದಿಬ್ಬರನ್ನು ಬಿಟ್ಟರೆ ಮತ್ತ್ಯಾರ ಜೊತೆಗೂ ಬೆರೆಯುವುದಿಲ್ಲ. ಉಳಿದ ಹುಡುಗಿಯರು ಅವಳನ್ನು ಒಬ್ಬ ವಿಐಪಿ ಎಂದು ಪರಿಗಣಿಸಿ ದೂರವೆ ಇರಿಸಿಬಿಟ್ಟಿದ್ದರು. ಮಾತಾನಾಡುವಾಗಲೂ ಅಷ್ಟೆ, ಅಳೆದು ತೂಗಿ ಮಿತಿ ಮೀರದ ಮಾತುಗಳು. ಅಭ್ಯಾಸದಲ್ಲೂ
ಮುಂದು.

ನಾನು ಕಾಲೇಜಿಗೆ ಸೇರಿದ ಹೊಸದರಲ್ಲಿ ಅವಳಿಗೆ ನಾನು ಜೋರಾಗಿ ನಗುವುದು, ಗೆಳತಿಯರೊಂದಿಗೆ ಸೇರಿ ಕ್ಲಾಸಿನಲ್ಲಿ ಗಲಾಟೆ ಮಾಡುವುದು ಎಲ್ಲ ಸಹ್ಯವಾಗುತ್ತಿರಲಿಲ್ಲ. ಆದರೆ ಸುಮಾರು ಮೂರು ತಿಂಗಳ ಹಿಂದೆ, ಮಧ್ಯಾಹ್ನದ ಬ್ರೇಕ್ ಟೈಮಿನಲ್ಲಿ ಭಾರತಿ ಬಹಳ ಸಪ್ಪೆ ಮೋರೆ ಮಾಡಿಕೊಂಡು ಅವಳಷ್ಟಕ್ಕೆ ಅವಳು ಮೂಲೆ ಬೆಂಚು ಏರಿ ಕುಳಿತಿದ್ದಳು. ಭಾರತಿಗೆ ಮನೆಯಲ್ಲಿ ಅಪ್ಪ ಅಮ್ಮನ ಜೊತೆ ಅಷ್ಟು ಸಲುಗೆಯಿರಲಿಲ್ಲ. ಒಡನಾಡಲು ಜೊತೆಗೆ ಹುಟ್ಟಿದವರಾರೂ ಇಲ್ಲ. ಹೇಳಿಕೊಳ್ಳುವಂತಹ ಆಪ್ತ ಸ್ನೇಹಿತರೂ ಇಲ್ಲ. ಯಾಕೋ.. ನನಗೆ ಅವಳನ್ನು ನೋಡಿ ಪಾಪ ಎನ್ನಿಸಿತು. "ಏನಾಯ್ತೆ ಭಾರತಿ ಎಂದು ಆಪ್ತತೆಯಿಂದ ಕೇಳುತ್ತ ಪಕ್ಕದಲ್ಲಿ ಹೋಗಿ ಕುಳಿತೆ.

ನಮಗೆ ಅಂತಹ ಬಾಂಧವ್ಯವೇನೂ ಇರಲಿಲ್ಲ. ಆದರೆ ಅವಳಿಗೆ ಆ ಸಮಯಕ್ಕೆ ಹೇಳಿಕೊಳ್ಳಲು ಯಾರಾದರೂ ಬೇಕಾಗಿತ್ತೇನೋ.. ಅಳುತ್ತ ಅವಳ ಮನೆ ಬಗ್ಗೆ, ತನ್ನ ಒಂಟಿತನದ ಬಗ್ಗೆ ಹೇಳಿಕೊಂಡಳು, " ನೋಡು ಭಾರತಿ, ಅಪ್ಪ-ಅಮ್ಮನಿಗೆ ನಿನ್ನ ಜೊತೆ ಕಳೆಯಲು ಟೈಮೇ ಇಲ್ಲ ಎಂದು ಕೊರಗುತ್ತೀಯಾ. ಆದರೆ ನೋಡು, ನಮ್ಮ ಕ್ಲಾಸಿನ ಶ್ವೇತಾಗೆ ಅಪ್ಪ ಅಮ್ಮನೇ ಇಲ್ಲ ಹೀಗೆ ನನಗೆ ತೋಚಿದಂತೆ ಸಮಾಧಾನ ಮಾಡಿದೆ.

ಈ ಘಟನೆ ನಡೆದ ಮೇಲೆ ತೀರ ಎನ್ನುವಷ್ಟು ನನ್ನನ್ನು ಹಚ್ಚಿಕೊಂಡಳು. ಎಲ್ಲದಕ್ಕೂ ನನ್ನ ಸಲಹೆ ಕೇಳುತ್ತಾಳೆ. ಸ್ವಲ್ಪ ಬ್ರೇಕ್ ಸಿಕ್ಕರೂ ಸಾಕು. ಪಕ್ಕದಲ್ಲಿ ಬಂದು ಕುಳಿತುಬಿಡುತ್ತಾಳೆ.

ಬಹಳ ಆಶ್ಚರ್ಯವಾಗುತ್ತದೆ. ಒಂದು ಚಿಕ್ಕ ಸಮಾಧಾನ ಇಷ್ಟೆಲ್ಲ ಮಾಡುತ್ತದೆಯಾ?! ಇದೇನೆ ಇದ್ದರೂ ಭಾರತಿಯ ಅತಿಯಾದ ಅವಲಂಬನೆ ನನಗೆ ಒಂಥರಾ ಉಸಿರು ಕಟ್ಟಿಸುತ್ತದೆ. ಚಿಕ್ಕಪುಟ್ಟ, ಅತೀ ಪರ್ಸನಲ್ ವಿಷ್ಯಗಳಿಗೆ ನನ್ನ ಸಲಹೆ ಬೇಕು ಎನ್ನುವ ಅವಳ ರೀತಿ ಮುಜುಗರ ಉಂಟುಮಾಡುತ್ತದೆ. ಯಾವುದೇ ಕಾರಣಕ್ಕೂ ಅವಳು ನನ್ನನ್ನು ವಿಮರ್ಶೆ ಮಾಡುವುದೇ ಇಲ್ಲ. ನಾನು ಹೇಳಿದ್ದೆಲ್ಲ ವೇದವಾಕ್ಯಎಂಬಂತೆ ಆಡುತ್ತಾಳೆ. ಇದೆಲ್ಲ ನನಗೆ ಸ್ವಲ್ಪವೂ ಇಷ್ಟವಾಗುತ್ತಿಲ್ಲ.

ಇದನ್ನೆ ನೇರವಾಗಿ ಹೇಳಿದರೆ "ನೀನು ನನ್ನ ಬಿಟ್ಟು ಹೋಗುತ್ತೀಯಾ" ಅಂತ ಅಳುತ್ತಾಳೆ. ಈಗೀಗಂತೂ ಅವಳು ಬಂದಳು ಎಂದರೆ ಎಲ್ಲಾದರೂ ಹೋಗಿ ಅಡಗಿಕೊಳ್ಳಬೇಕು ಎನಿಸುತ್ತದೆ. ಉದ್ದೇಶಪೂರ್ವಕವಾಗಿ ಅವಳಕಣ್ಣುತಪ್ಪಿಸಿದರೆ "ನನ್ನನ್ನು ಅವಾಯ್ಡ್ ಮಾಡುತ್ತೀಯಾ" ಎಂದು ಬೇಸರಿಸಿಕೊಳ್ಳುತ್ತಾಳೆ.

ಖಂಡಿತವಾಗಿಯೂ ಅವಳಿಗೆ ಬೇಜಾರು ಮಾಡಲು ನನಗೆ ಇಷ್ಟವಿಲ್ಲ. ಆದರೆ ಅವಳನ್ನು ಸಹಿಸಿಕೊಳ್ಳುವುದೂ ಕಷ್ಟ. ಹಾಗಾದರೆ ಅವಳ ಈ ಡಿಪೆಂಡೆನ್ಸಿ ತಪ್ಪಾ? ಅಥವಾ ಅವಳನ್ನು ಸಹಿಸಿಕೊಳ್ಳಲಾಗದಿರುವುದು ನನ್ನದೇ ತಪ್ಪಾ?

ಕುಮ್ಮಿ ನಾನು ಒಳ್ಳೆಯ ಗೆಳತಿಯರು. ಪರ್ಸನಲ್ ವಿಷ್ಯಗಳನ್ನು ಹಂಚಿಕೊಳ್ಳುತ್ತೇವೆ. ಆದರೆ ಯಾವತ್ತೂ ನನಗೆ ಅವಳು 'ಭಾರ' ಅನ್ನಿಸಿದ್ದೇ ಇಲ್ಲ. ಆದರೆ ಭಾರತಿ ವಿಷಯದಲ್ಲಿ ಮಾತ್ರ ಯಾಕೆ ಹೀಗನಿಸುತ್ತದೆ?

ಕುಮ್ಮಿ ಕೆಲವೊಮ್ಮೆ ಕೇಳುತ್ತಾಳೆ, "ಯಾಕೆ ಅವಳಿಗೆ ಆ ತರ ಮಾಡುತ್ತೀಯಾ? ಪಾಪ." ಎಂದು ನನಗೇ ಬೈಯುತ್ತಾಳೆ. ನನಗೂ ಇದೆಲ್ಲ ಹೊಸದು...