Saturday, August 23, 2008

ಏನೂ ಓದದೆ ಇರುವುದು ಕೆಟ್ಟ ಸಾಹಿತ್ಯ ಓದುವುದಕ್ಕಿಂತ ಅಪಾಯಕಾರಿ


ಅಕಸ್ಮಾತ್ ಫೇಲಾದರೂ ಅಷ್ಟು ಫೀಲ್ ಆಗಲಾರರು. ಅದೇ, ಎಕ್ಯುಪ್‌ಮೆಂಟ್, ಟ್ಯೂಷನ್ , ಕ್ಲಾಸು, ಟೆಸ್ಟ್ ಗಳು ಎಂದು ದಿನದ ಹದಿನಾಲ್ಕು-ಹದಿನೈದು ತಾಸು ಅಭ್ಯಾಸದಲ್ಲೇ ಮುಳುಗಿರುವ ವಿದ್ಯಾರ್ಥಿ ಫೇಲ್ ಆದರೆ, ಆ ಆಘಾತವನ್ನು 17-18ರ ಎಳೆಯ ಮನಸ್ಸು ಸಹಿಸಿಕೊಳ್ಳಲು ಸಾಧ್ಯವಿದೆಯೆ? 'ಆರ್ಟ್ಸ್ ತೆಗೆದುಕೊಂಡು ನಾನು ಡಾಕ್ಟರ್ ಆಗಲು ಸಾಧ್ಯವಿಲ್ಲದಿರಬಹುದು, ಆದರೆ ಅದಕ್ಕಾಗಿ ಇಷ್ಟೆಲ್ಲ ಬೆಲೆ ತೆರಲು ನಾನು ಸಿದ್ಧಳಿಲ್ಲ!
(ಮುಂದಕ್ಕೆ).....

ಅಪ್ಪನದೊಂದು ದೊಡ್ಡ ಪುಸ್ತಕ ಸಂಗ್ರಹವೇ ಇದೆ. ಪ್ರಮುಖವಾಗಿ ಇತಿಹಾಸ, ವಿಜ್ಞಾನ, ವಿವೇಕಾನಂದರಿಗೆ ಸಂಬಂಧಿಸಿದ ಪುಸ್ತಕಗಳು. ಬಹುಶಃ ಇದೇ ನನ್ನ ಪುಸ್ತಕ ಪ್ರೀತಿಗೆ ಕಾರಣವೇನೋ. ಓದಲು ಬಾರದಿದ್ದವಳಷ್ಟಿದ್ದಾಗ ಅದರಲ್ಲಿನ ಶಿಲಾಯುಗದ ಮಾನವ, ವಿವಿಧ ದೇಶಗಳ, ವೈಜ್ಞಾನಿಕ ಉಪಕರಣಗಳ ಚಿತ್ರಗಳನ್ನು ನೋಡುತ್ತ ಖುಷಿಪಡುತ್ತಿದ್ದೆ.

ಓದಲು ಕಲಿತ ನಂತರ ಆ ಪುಸ್ತಕಗಳೆಲ್ಲ ಬಹಳ ಬೋರು ಎನಿಸಿಬಿಟ್ಟವು. ಬಾಲಮಂಗಳ, ಚಂದಮಾಮಗಳೇ ಚೆಂದ ಎನಿಸುತ್ತಿದ್ದವು. ಹೈಸ್ಕೂಲ್ ಸೇರಿದ ಮೇಲೆ ಬಾಲಮಂಗಳಗಳು 'ಚಿಕ್ಕವರ ಪುಸ್ತಕ' ಎಂಬ ಅಸಡ್ಡೆ ಮೂಡಿಬಿಟ್ಟಿತು. 8-9ನೇ ಕ್ಲಾಸಿನವಳಿರುವಾಗ ಕದ್ದು-ಮುಚ್ಚಿ, ಹುಲ್ಲು ಅಟ್ಟಗಳಲ್ಲೆಲ್ಲ ಅಡಗಿ 'ಕೈಮ್' 'ಸ್ಪೈ' ಓದುತ್ತಿದ್ದೆ. ಬಿ.ವಿ.ಅನಂತರಾಮ್, ಕೌಂಡಿನ್ಯರ ಸಸ್ಪೆನ್ಸ್ ಕಥೆಗಳು. ಅನಂತರಾಮರ 'ಮಹೇಶ'ನ ಸಾಹಸಗಳೆಲ್ಲ ಬಹಳ ಇಷ್ಟವಾಗಿದ್ದವು.

ಈ ಸಸ್ಪೆನ್ಸ್ ಕಥೆಗಳ ಏಕತಾನತೆ ಬಹಳ ಬೇಗ ಬೋರ್ ಹಿಡಿಸಿಬಿಟ್ಟವು.ಆದರೆ ಇವು ಏನೋ ಓದುವ ಉತ್ಸಾಹವನ್ನು ಹೆಚ್ಚಿಸಿದ್ದು ಮಾತ್ರ ಸುಳ್ಳಲ್ಲ. ಆಗ ಶೀಲಕ್ಕನಿಂದ ಪರಿಚಯವಾದದ್ದೇ ಯಂಡಮೂರಿ ಕಾದಂಬರಿಗಳು. ನನ್ನ ಗೆಳತಿಯರಲ್ಲಿ ಕೆಲವರು " ನಾನು ಕಾದಂಬರಿಗಳನ್ನು ಓದುವುದೇ ಇಲ್ಲ'' ಎಂದು ಹೆಮ್ಮಯಿಂದ ಹೇಳುತ್ತಾರೆ...

ಕಾದಂಬರಿಗಳನ್ನು ಓದುವುದು ಒಂದು ಕೀಳು ಚಟ ಎನ್ನುವುದು ಅವರ ಭಾವನೆ. ಕಾದಂಬರಿಗಳಲ್ಲಿ ಸಂದರ್ಭಕ್ಕನುಗುಣವಾಗಿ ಬರುವ ರಸಗಳಿಗೆಗಳು ಅವರಿಗೆ ಮೈಲಿಗೆ ವಸ್ತು. ಎಲ್ಲರೆದುರಿಗೂ 'ಇಶ್ಷೀ' ಎಂದರೂ ಒಳಗೊಳಗೇ 'ಅಂತಹವನ್ನು' ಓದಲು ಹವಣಿಸುತ್ತಿದ್ದರು......!

ನನ್ನ ಅಜ್ಜಿಯ ಮನೆಯ ಹತ್ತಿರ ಒಂದು ಸಮೃದ್ಧವಾದ ಲೈಬ್ರರಿ ಇದೆ. ಅಲ್ಲಿರುವ? ಯಂಡಮೂರಿಯ ಪುಸ್ತಕಗಳನ್ನು ಓದಿ, ಇಲ್ಲದಿದ್ದನ್ನು ಯಾರಯಾರ ಹತ್ತಿರವೋ ಬೇಡಿ-ಕಾಡಿ ಕಾದಂಬರಿಗಳನ್ನು ತಂದು ನಾನು- ಕುಮ್ಮಿ ಓದುತ್ತಿದ್ದೆವು. ಆ ಪುಸ್ತಕದೊಳಗೆ ನಮ್ಮನ್ನು ಪ್ರಭಾವಿಸಿದ ಸಾಲುಗಳನ್ನು ಬರೆದುಕೊಳ್ಳುತ್ತಿದ್ದೆವು. ಯಂಡಮೂರಿ ನಮ್ಮ ಆರಾಧ್ಯ ದೈವವಾಗಿಬಿಟ್ಟಿದ್ದ. ಅವರ ಕಾದಂಬರಿಗಳು ನಮ್ಮನ್ನು ಎಲ್ಲೋ ಕನಸಿನ ಲೋಕಕ್ಕೆ ಸೆಳೆದೊಯ್ಯುತ್ತಿದ್ದವು.

ಅಲ್ಲಿ ಬರುವ ಯಾವುದೋ ಆದರ್ಶ ಕ್ಯಾರಕ್ಟರಿನಂತೆ ನಾನೂ ಆಗಬೇಕು ಎಂದು ಬಯಸುತ್ತಿದ್ದೆ. ಜೀವನವನ್ನು ಇನ್ನೂ ಪ್ರೀತಿಸುವಂತೆ ಆ ಕಾದಂಬರಿಗಳು ಮಾಡುತ್ತಿದ್ದವು. 'ಬೆಳದಿಂಗಳ ಬಾಲೆ' ಓದಿ ಗಳಗಳನೆ ಅತ್ತುಬಿಟ್ಟಿದ್ದೆ. 'ದುಡ್ಡು ದುಡ್ಡು ಓದಿ ಗಾಂಧಿಯ ಬುದ್ಧಿವಂತಿಕೆಗೆ ಮಾರುಹೋಗಿದ್ದೆ. 'ಪವಿತ್ರ ಯುದ್ಧ' ಓದಿ ಆಹಾ, ಪ್ರೇಮಿ ಅಂದ್ರೆ ಹೀಗಿರಬೇಕು ಅಂದುಕೊಂಡಿದ್ದೆ. ಆ ಕಾದಂಬರಿಗಳಿಂದ ಎಂತಹ ಕನಸಿನ ಲೋಕ ಸೃಷ್ಟಿಸಿಕೊಳ್ಳುತ್ತಿದ್ದೆ ಅಂದರೆ ಅವು `ಸುಳ್ಳು' ಎನಿಸುತ್ತಲೇ ಇರಲಿಲ್ಲ.

ಇನ್ನೂ ಕಾಲೇಜಿಗೆ ಹೋಗಲು ಒಂದು ತಿಂಗಳು ಬಾಕಿ ಇದೆ. ಆರಾಮವಾಗಿ ಒಂದಿಷ್ಟು ಪುಸ್ತಕಗಳನ್ನು ಓದಿಕೊಳ್ಳಬಹುದು. ಆಹಾ! ಏನು ಸುಖ ಆ ಅಕ್ಷರಗಳ ಕಲ್ಪನಾ ಲೋಕದಲ್ಲಿ ವಿಹರಿಸುವುದು. ಅಲ್ಲಿ ಬರುವ ಪ್ರತಿ ಘಟನೆಯೂ ನನ್ನ ಕಣ್ಣಮುಂದೆಯೇ ನಡೆದಿದ್ದೇನೋ ಅನ್ನುವ? ಅನುಭವಿಸುವುದು ಎಂತಹ ರೋಮಾಂಚನಕಾರಿ!

ಪುಸ್ತಕಗಳು ಅನೇಕ ಸಾಧನೆಗಳಿಗೆ ಪ್ರೇರಕ. ಹೊಸ ದೃಷ್ಟಿಕೋನ ರೂಪಿಸಿಕೊಳ್ಳಲು ಸಹಾಯಕಾರಿ... ಅದ್ಯಾವ ಗಳಿಗೆಯಲ್ಲಿ ಕುಮ್ಮಿ ಯಂಡಮೂರಿ ಬರೆದ 'ಧ್ಯೇಯ'ವನ್ನು ನನ್ನ ಕೈಗಿತ್ತಳೋ..ನನ್ನನ್ನು ಅತ್ಯಂತ ಪ್ರಭಾವಿತಗೊಳಿಸಿದ ಪುಸ್ತಕ ಅದು. ಅಲ್ಲಿಯ ಪ್ರಮುಖ ಪಾತ್ರ 'ನಿಖಿತಾ'ಳನ್ನು ಬಹುಶಃ ನಾನು ಜೀವನದ ಕೊನೆಯತನಕವೂ ಮರೆಯಲಾರೆ. 'ನಾನು ಹೀಗೆ ಬದುಕಬೇಕು' ಎಂದು ಜೀವನದ ಬಗ್ಗೆ ಒಂದು ಸ್ಪಷ್ಟ ಗುರಿಯನ್ನು ರೂಪಿಸಿಕೊಳ್ಳುವ ಬಗ್ಗೆ ವಿಚಾರ ಮಾಡಲು 'ನಿಖಿತಾ'ಳೇ ಪ್ರೇರಕ.

'ಧ್ಯೇಯ' ಓದಿದಾಗಿನಿಂದ ನನ್ನ ಒಳಗಿನ ಬದಲಾವಣೆ ನನಗೇ ಸ್ಪಷ್ಟವಾಗಿ ಗೋಚರಿಸುತ್ತಿದೆ. ಯಾವುದನ್ನೂ ಗಂಭೀರವಾಗಿ ತೆಗೆದುಕೊಳ್ಳದೆ, ಮುಂದಿನ ಜೀವನದ ಬಗ್ಗೆ ಇನಿತೂ ತಲೆ ಕೆಡಿಸಿಕೊಳ್ಳದೆ ಆರಾಮವಾಗಿ ಕಾಲಹರಣ ಮಾಡುತ್ತಿದ್ದ ನಾನು ಇತ್ತೀಚೆಗೆ ಗಂಭೀರವಾಗುತ್ತಿದ್ದೇನೆ ಎನಿಸುತ್ತದೆ. ಒಂದು ಪುಸ್ತಕ ಇಷ್ಟೆಲ್ಲಾ ಪ್ರಭಾವ ಬೀರುವುದನ್ನು ನೋಡಿ ನನಗೇ ಸೋಜಿಗವೆನಿಸುತ್ತಿದೆ.

ಪ್ರಸಿದ್ಧ ಲೇಖಕರೊಬ್ಬರು "ಏನೂ ಓದದೆ ಇರುವುದು ಕೆಟ್ಟ ಸಾಹಿತ್ಯ ಓದುವುದಕ್ಕಿಂತ ಅಪಾಯಕಾರಿ" ಎನ್ನುತ್ತಾರೆ. ಸತ್ಯ ಈ ಮಾತು. ಪುಸ್ತಕವನ್ನು ಪ್ರೀತಿಸದವರು ಜೀವನವನ್ನೂ ಸಂಪೂರ್ಣವಾಗಿ ಪ್ರೀತಿಸಲಾರರು; ವಿಶಾಲ ದೃಷ್ಟಿಯಲ್ಲಿ ವಿಚಾರ ಮಾಡಲಾರರು ಎನ್ನುವುದು ಇಲ್ಲಿಯ ತನಕ ನನ್ನ ಅನುಭವಕ್ಕೆ ಬಂದದ್ದು.

ಸ್ವಲ್ಪ ತಿಳುವಳಿಕೆ ಮೂಡಿದ ಪ್ರಾರಂಭದಲ್ಲಿ ಕೆಟ್ಟ ಸಾಹಿತ್ಯದಿಂದಲೇ ನನ್ನ ಓದೂ ಪ್ರಾರಂಭವಾಗಿತ್ತು. ಆದರೆ 'ಸ್ಪೈ', 'ಕ್ರೈಮ್'ಗಳು ಓದುವ ದಾಹ ಹೆಚ್ಚಿಸಿದ್ದವು. ಒಮ್ಮೆಲೇ ಅತ್ಯುತ್ತಮ ಪುಸ್ತಕವೆಂದು 'ಭಾರತದ ಧಾರ್ಮಿಕ ಸ್ವರೂಪ' ಓದಲು ಪ್ರಾರಂಭಿಸಿದ್ದರೆ ಪುಸ್ತಕದ ಬಗ್ಗೆ ನಿರಾಸಕ್ತಿ ಮೂಡಿಬಿಡುತ್ತಿತ್ತೇನೋ!

ವಯಸ್ಸು, ಬುದ್ಧಿ ಬೆಳೆದಂತೆ ಪುಸ್ತಕಗಳ ಬಗ್ಗೆ ಅಭಿರುಚಿಯೂ ಬದಲಾಗುತ್ತದೆ. ಈಗ 'ಸ್ಪೈ, ಕ್ರೈಮ್'ಗಳಂತಹ ಪುಸ್ತಕಗಳು ನನ್ನಲ್ಲಿ ಯಾವ ಕುತೂಹಲವನ್ನೂ ಕೆರಳಿಸಲಾರದು. ಬದಲಾಗಿ ಕನಸು ಬಿತ್ತುವ ಕಾದಂಬರಿಗಳೇ ಬಹಳ ಪ್ರೀತಿ... ಏನೂ ಓದದೆ ಇರುವುದು

1 comment:

Unknown said...

Innondu 5 varsha aad mele yandamuri kooda boring agtane ashte!